ಆಲಂಬಿತವೆನ್ನದೆ, ಆಲಂಬದೊಳಡಗದೆ, ಆಲಂಬವ ಬಯಸದೆ, ಸೂಕ್ಷ್ಮ ಶಿವಪಥ ಏಕೈಕ ಪ್ರಸಾದಿ. ಸೂಕ್ಷ್ಮವೆನ್ನದೆ, ಸೂಕ್ಷ್ಮವ ಬಯಸದೆ, ಸೂಕ್ಷ್ಮ ನಿರಾಕರಣೆ ಪರಿಕರಣೆಯೆನ್ನದೆ, ನಿತ್ಯ ನಿಜವಾದ ಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಾ ಸಯದಾನಕ್ಕೆಡೆಗುಡದ ಪ್ರಸಾದಿ.
ಲೋಕ ಲೌಕಿಕಂಗಳೆಲ್ಲಾ ನೀವು ಕೇಳಿರೆ. ಏಕೈಕ ರುದ್ರನ ಅವತಾರವನರಿದೆವೆಂಬಿರಿ. ನೋಡಿ ನಚ್ಚಿರೆ ಶಿವನ. ಶಿವನು ಬಸವಣ್ಣನಾದ ನೋಡಿರೆ; ಬಸವಣ್ಣ ಗುರುವಾದ, ಬಸವಣ್ಣ ಲಿಂಗವಾದ, ಬಸವಣ್ಣ ಜಂಗಮವಾದ; ಬಸವಣ್ಣ ಪರಿಣಾಮ ಪ್ರಸನ್ನ ಪರವಾದ; ಬಸವಣ್ಣ ಮೂಲತ್ರಯವಾದ; ಬಸವಣ್ಣ ಭಕ್ತಿ ಎರಡು ತ್ರಯವಾದ; ಬಸವಣ್ಣ ಆರಾರರಿಂ ಮೇಲೆ ತೋರಿದ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ ಬದುಕಿದೆನು.
ಲೋಕ ಹದಿನಾಲ್ಕರ ಏಕೈಕ ಸಮತೆಯನು ಠಾವರಿದು ಗ್ರಾಮವನು ನೋಡಿ ರಚಿಸಿ, ಸೀಮೆ ಸಾಯುಜ್ಯದ ತರಳ ನದಿ ಹರಿವುತ್ತಿರೆ, ತರುಣಿಯ ಮಸ್ತಕದ ನದಿಯು ಅರತು, ಅತಿಶಯದ ಆನಂದಗಾಳಿ ಬೀಸಲು ತಂದ ಪರಿಮಳವು ನೇತ್ರ ಊಧ್ರ್ವವಾಗಿ ಅತಿಶಯದ ರೂಪ ಕಪಿಲಸಿದ್ಧಮಲ್ಲಿಕಾರ್ಜುನನ ಅವಗ್ರಹಿಸಿದ ರೂಪು ಸಮತೆ ತಾನೆ.
ತನುಗುಣದ ಪಾತ್ರೆಯಲಿ ತವಕಿಸುವ ಭೇದವನು ಅನುನಯದ ಮಲತ್ರಯದ ದುರ್ವಾಕ್ಯವನು ಘನತರದ ಸುದ್ದಿಯನು ಐದೈದುವೊಂದಾಗಿ ತನುಗುಣವನತಿಗಳೆದು ಪ್ರಾಪಂಚಿಕಾತತ್ವದಿಂದತ್ತತ್ತ ಮತ್ತೆ ತ್ವಮಸಿಯಾಗಿ ಭಕ್ತಿ ಕಾರಣ ಲೋಕರೂಪನಾಗಿ ಏಕೈಕ ಸಂಬಂಧಿ ಆಕಾರ ನಿರ್ವಿಘ್ನ ಆನಂದದವ್ಯಯದ ಅಂತ್ಯದಲ್ಲಿ ಅವ್ವೆಯ ಮುಖಕಮಳ ಐಯನಜಾತಸ್ಯ ಸಂಯೋಗಕದು ಶುದ್ಧ ಮುಗ್ಧನಾಗಿ ಮೂರ ಮತ್ತೊಂದೆಂದು ಒಂದು ಮೂರರ ತೃಪ್ತಿ ಸಂದಳಿದೆ ಕಪಿಲಸಿದ್ಧಮಲ್ಲಿಕಾರ್ಜುನ.