ಮುನ್ನಿನವರು ನಡೆದ ಪರಿಯಲ್ಲಿ ಇನ್ನು ನಡೆದರಾಗದೆಂಬ
ಭಿನ್ನ ನುಡಿಯ ಕೇಳಲಾಗದು, ಹೇಳಲಾಗದು.
ಅದೆಂತೆಂದಡೆ:
ಶ್ರೀಗುರು ಕಾರುಣ್ಯವಂ ಪಡೆದು ಜ್ಞಾನಪ್ರತಿಷೆ*ಯಂ ತೋರಿದನಾಗಿ
ಅನ್ಯಾಯದ ಗೊಡವೆಯಂ ಬಿಟ್ಟು ಚೆನ್ನಾಗಿ ಶಿವಭಕ್ತರಭಾವವ
ಲಾಲಿಸಿ ಕೇಳಿಹೆನೆಂದಡೆ ಹೇಳುವೆ ಕೇಳಿರಣ್ಣಾ:
ಶಿವಕಾರುಣ್ಯೇನ ಸಾಧ್ಯಾಹಿ ಗಾರುಡಂ ಚಾಷ್ಟಸಿದ್ಧಯಃ
ಸ್ವರ್ಗಪಾತಾಳಸಾಧ್ಯಾಸ್ತು ಅಂಜನಂ ಘಟಿಕಾಸ್ತಥಾ ಎಂದುದಾಗಿ
ಮಲಗಿದ್ದಲ್ಲಿ ಕನಸ ಕಂಡೆಹೆನೆಂಬರು,
ಆ ಜೀವನು ಈ ಕಾಯ ನಾಶವ ಮಾಡಿ, ಆ ದ್ವೀಪಕ್ಕೆ ಹೋಗಿ ಕಂಡುಬಂದಿತ್ತೆ ?
ಆ ದ್ವೀಪಕ್ಕೆ ಹೋದವು ಈ ಕಾಲೆ ? ಆ ದ್ವೀಪಕ್ಕೆ ಹೋದವು ಈ ಕಣ್ಣೆ ?
ಅದು ಹುಸಿ, ದಿಟವೆಂದಡೆ :
ಆ ದ್ವೀಪ ತನ್ನ ಹೃದಯಕಮಲ ಮಧ್ಯದಲುಂಟು, ಮತ್ತು
ಸರ್ವಜಗವುಂಟು.
ಅದೆಂತೆಂದಡೆ :
ನಿದ್ರೆಗೈದಲ್ಲಿ ಕಣ್ಣಿನ ಜ್ಯೋತಿ ಹೃದಯಕಮಲ ಮಧ್ಯಕ್ಕಿಳಿದಲ್ಲಿ
ಜ್ಯೋತಿ ಮನ ಒಂದಾಯಿತ್ತು; ಒಂದಾದಲ್ಲಿ ಶಿವನುಂಟು.
ಆ ಶಿವನ ಹೃದಯದಲ್ಲಿ ಸಕಲ ಭುವನಾದಿ ಭುವನಂಗಳೆಲ್ಲ ಉಂಟು,
ಅಲ್ಲಿ ಈ ವಾಯು ತಿರುಗುತ್ತಿದ್ದುದು, ಅಲ್ಲಿ ಕಂಡುದ ಕನಸೆಂದೆಂಬರು
ತಲೆಯೊಳಗಣ ಸಹಸ್ರದಳಕಮಲ ಮಧ್ಯದಲ್ಲಿ ಸಕಲಾತ್ಮನು
ಸುಖದಿಂದಿರುತ್ತಿಹನು
ಅದೆಂತೆಂದಡೆ:
ಅಂತಹ ಆತ್ಮನಿಲ್ಲದಿರ್ದಡೆ ನೀರಬೊಬ್ಬುಳಿಕೆಯ ಕಣ್ಣು ಕಾಣಬಲ್ಲುದೆ ?
ಅಂತಹ ಆತ್ಮನಿಲ್ಲದಿರ್ದಡೆ ತೊಗಲ ಛಿದ್ರದ ಕಿವಿಗಳು ಕೇಳಬಲ್ಲುವೆ ?
ಅಂತಹ ಆತ್ಮನಿಲ್ಲದಿರ್ದಡೆ ಹಡಿಕೆ ಮಲಿನ ಮೂಗು ಪರಿಮಳಂಗಳ ಕೊಳಬಲ್ಲುದೆ
?
ಅಂತಹ ಆತ್ಮನಿಲ್ಲದಿರ್ದಡೆ ಮತಿಯು ಮನದೊಳಗಿರಬಲ್ಲುದೆ ?
ಅದು ಹುಸಿ ಎಂದಡೆ, ಅಂಗುಷ್ಟದೊಳಗೆ ವಿಷವುಂಟು;
ನಾಭಿಯಲ್ಲಿ ಅಗ್ನಿಯುಂಟು, ಕಂಕುಳಲ್ಲಿ ನಗೆಯುಂಟು,
ಕಂಗಳಲ್ಲಿ ದುಃಖವುಂಟು; ಹುಬ್ಬಿನಲ್ಲಿ ಅಮೃತವುಂಟು,
ಕೋಪವೆಂಬಾ ಕಿಚ್ಚು ಕೆದರಿ ಅಂಗುಷ್ಟದ ಮೇಲೆ ಬೀಳಲಿಕೆ,
ಆ ವಿಷವು ಭುಗಿಲೆಂದೆದ್ದು ಸರ್ವಾಂಗಮಂ ಸುಡುತ್ತ ಬಪ್ಪಲ್ಲಿ
ಜ್ಞಾನವೆಂಬ ಜ್ಯೋತಿ ಹೋಗಿ ತಲೆಯೊಳಡಗಿತ್ತು.
ಅಂತಹ ಕೋಪವೆಂಬ ಹೊಲೆಯು ಶತಸಹಸ್ರ
ಹೊನ್ನ ಕೊಟ್ಟಡೆ ತಿದ್ದುವುದೆ ? ತಿದ್ದದು.
ಹಣೆಯ ಅಮೃತ ಬಂದು ಅಂಗುಷ್ಟದ ವಿಷದ ಮೇಲೆ ಬೀಳಲಿಕೆ
ಪರುಷ ಬಂದು ಲೋಹಮಂ ಮುಟ್ಟಿದಂತಾಯಿತ್ತು.
ಸರ್ವಮಂ ಕೊಂದ ಹಗೆಯಾದಡೆಯೂ ಹೋಹುದು.
ಇಂತಪ್ಪ ಸರ್ವಾಂಗಲಿಂಗಾಂಗಿಗಳು ನಿಮ್ಮ ಶರಣರು.
ಕೂಡಲಚೆನ್ನಸಂಗಮದೇವಾ