ಗುರುಮುಖದಿಂದ ಬಂದುದೇ ಗುರುಪ್ರಸಾದ
ಆ ಪ್ರಸಾದವನು ಲಿಂಗಕ್ಕೆ ಅರ್ಪಿಸಿದಲ್ಲಿ ಲಿಂಗಪ್ರಸಾದ.
ಭೋಜ್ಯ ಕಟ್ಟಿ ಲಿಂಗಕ್ಕೆ ಕೊಟ್ಟು ಸಲಿಸುವುದೇ ಜಂಗಮಪ್ರಸಾದ.
ತತ್ಪ್ರಸಾದಿಗಳಲ್ಲಿ ಯಾಚಿಸಿ,
ಅವರ ಪ್ರಸಾದವ ಕೊಂಬುದೆ ಪ್ರಸಾದಿಯ ಪ್ರಸಾದ.
ಅಪೇಕ್ಷೆಯಿಂದ ಸಲಿಸುವುದೇ ಆಪ್ಯಾಯನಪ್ರಸಾದ.
ಗುರುಲಿಂಗಜಂಗಮವ ಕಂಡು,
ಆ ಸಮಯದಲ್ಲಿ ತೆಗೆದು ಕೊಂಬುವುದೇ ಸಮಯಪ್ರಸಾದ.
ಪಂಚೇಂದ್ರಿಯಂಗಳಲ್ಲಿ ಪಂಚವಿಷಯ ಪದಾರ್ಥಂಗಳನು
ಪಂಚವಿಧಲಿಂಗಕ್ಕೆ ಸಮರ್ಪಣ ಮಾಡುವುದೇ
ಪಂಚೇಂದ್ರಿಯವಿರಹಿತಪ್ರಸಾದ.
ಮನವೇ ಲಿಂಗ, ಬುದ್ಭಿಯೇ ಶಿವಜ್ಞಾನ, ಚಿತ್ತವೇ ಶಿವದಾಸೋಹ,
ಅಹಂಕಾರದಲ್ಲಿ ಶಿವಚಿಂತನೆಯುಳ್ಳವನಾಗಿ
ಸಲಿಸಿದ್ದೇ ಅಂತಃಕರಣವಿರಹಿತಪ್ರಸಾದ.
ತ್ರಿವಿಧಾಂಗದಲ್ಲಿ ತ್ರಿವಿಧಲಿಂಗವ ಸಂಬಂಧಿಸಿ
ಆ ಚಿದ್ಘನಲಿಂಗ ತಾನೆಂದರಿದು,
ಆ ತ್ರಿವಿಧಲಿಂಗಕ್ಕೆ ಕೊಡುವುದೇ ಸದ್ಭಾವಪ್ರಸಾದ.
ಬಹಿರಂಗದ ಪ್ರಪಂಚವ ನಷ್ಟಮಾಡಿ,
ಅರಿವುವಿಡಿದು ಸಲಿಸುವುದೇ ಸಮತಾಪ್ರಸಾದ.
ಶ್ರೀಗುರುವಿನ ಪ್ರಸನ್ನತ್ವವೆ ಜ್ಞಾನಪ್ರಸಾದ.
ಇಂತೀ ಏಕದಶ ಪ್ರಸಾದವನು ಒಳಹೊರಗೆ
ಪರಿಪೂರ್ಣಮಾಗಿ ತಿಳಿಯುವುದೆ ಶಿವತಂತ್ರ,
ಗುರುಶಾಂತೇಶ್ವರಾ.