ಅಥವಾ

ಒಟ್ಟು 66 ಕಡೆಗಳಲ್ಲಿ , 34 ವಚನಕಾರರು , 52 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಶ್ಚಯಿಸಿಕೊಂಡಲ್ಲಿಯೆ ನಿಜತತ್ವ. ಉತ್ತರ ಪೂರ್ವ ಉಭಯದ ಕಕ್ಷೆಯ ಬಿಟ್ಟಲ್ಲಿಯೆ ನಿತ್ಯತ್ವ. ಅನಿತ್ಯತ್ವವೆಂಬ ಗೊತ್ತ ಮರೆದಲ್ಲಿಯೆ, ಕಾಮಧೂಮ ಧೂಳೇಶ್ವರನು ಸಚ್ಚಿದಾನಂದ.
--------------
ಮಾದಾರ ಧೂಳಯ್ಯ
ಪ್ರಥಮಪಾದದಲ್ಲಿ ಒಂಕಾರಕ್ಕೆ ನಕಾರ ಬೀಜಾಕ್ಷರ. ಆ ನಕಾರ ಉಭಯ ಕೂಡಿದ ಮತ್ತೆ ಮಕಾರ ಬೀಜಾಕ್ಷರ. ಇಂತೀ ತ್ರಿವಿಧಾಕ್ಷರ ಒಡಗೂಡಿ ಒಡಲಾದ ಮತ್ತೆ ಶಿಕಾರ ಬೀಜಾಕ್ಷರ. ಇಂತೀ ಶಿಕಾರ ಮೂರನೊಡಗೂಡಿ ನಾಲ್ಕೆಂಬಲ್ಲಿಗೆ ಯಕಾರ ಬೀಜಾಕ್ಷರ. ಇಂತೀ ಪಂಚಾಕ್ಷರಿಯ ಮೂಲಮಂತ್ರ ಸಂಬಂಧವಾಗಲಾಗಿ ಪ್ರಣಮದ ಬೀಜ. ಆ ಪ್ರಣಮವು `ಒಂ ಭರ್ಗೋ ದೇವಃ' ಜಗಕ್ಕೆ ಕರ್ತೃ ನೀನಲಾ ಎಂದು. ಸಾಮ ಅರ್ಥವಣ ಯಜಸ್ಸು ಋಕ್ಕು ಉತ್ತರ ಖಂಡನ. ಇಂತೀ ಪಂಚವೇದಂಗಳಲ್ಲಿ ಚತುರ್ವೇದಿಗಳಪ್ಪರಲ್ಲದೆ, ಐಕ್ಯೋತ್ತರ ಚಿಂತನೆಯನೀ ವಿಪ್ರಕುಲ ಮಿಥ್ಯವಂತರು ಬಲ್ಲರೆ ? ಕಣ್ಣಿನಲ್ಲಿ ನೋಡುತ್ತ ಕಣ್ಗಾಣೆನೆಂಬವನಂತೆ ಶಾಪಹತರಿಗೆಲ್ಲಕ್ಕೂ ಲಲಾಮಬ್ಥೀಮಸಂಗಮೇಶ್ವರಲಿಂಗವು ಅಸಾಧ್ಯ ನೋಡಾ.
--------------
ವೇದಮೂರ್ತಿ ಸಂಗಣ್ಣ
ಅಯ್ಯ, ಪರಮಸಚ್ಚಿದಾನಂದಮಂತ್ರಮೂರ್ತಿ ಜಂಗಮದೇವನು ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಪ್ಪಿಗೆಯಿಂದ ನಿರಂಜನಜಂಗಮಕ್ಕೆ ಉಪರಿಸಿಂಹಾಸನ ಮಾಡಿ, ಮುಹೂರ್ತಮಾಡಿದ ಮೇಲೆ ಷಡಕ್ಷರಮಂತ್ರಸ್ವರೂಪವಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯದಲ್ಲಿ ಮೂರ್ತಿಗೊಂಡಿರುವ ಈಶಾನ್ಯಕಲಶ ಮೊದಲಾಗಿ ಪಂಚಕಲಶಂಗಳಿಗೆ ಜಂಗಮದೀಕ್ಷಾಪಾದೋದಕವ ತುಂಬಿ, ಮಂಟಪಷಟ್ಸಮ್ಮಾರ್ಜನೆ, ಷಡ್ವಿಧ ವರ್ಣದ ರಂಗಮಾಲೆ, ನವಧಾನ್ಯ, ನವಸೂತ್ರ, ವಿಭೂತಿವಿಳ್ಯೆ, ಸುವರ್ಣಕಾಣಿಕೆ, ಪಂಚಮುದ್ರೆ, ಅಷ್ಟವಿಧ ಷೋಡಶೋಪಚಾರಂಗಳಿಂದೊಪ್ಪುವ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಕಲಶಮೂರ್ತಿಗಳ ಪಶ್ಚಿಮಭಾಗದಲ್ಲಿ ಜಂಗಮಪಾದ ಸೋಂಕುವಂತೆ ಗುರುವು ಮುಹೂರ್ತಮಾಡಿ, ಆ ಕಲಶಂಗಳ ಸೂತ್ರವ ತನ್ನ ಪಾದಕ್ಕೆ ಹಾಕಿ, ತನ್ನ ಚಿದ್ಬೆಳಗಿನ ಮುಂದೆ ಮೂರ್ತಿಗೊಂಡಿರುವ ಕಲಶಂಗಳ ಪೂರ್ವಭಾಗದಲ್ಲಿ ಕರಿಯಕಂಬಳಿಯ ಗರ್ದುಗೆಯ ಮಾಡಿಸಿ, ಹಸೆಯ ರಚಿಸಿ, ಆ ಗರ್ದುಗೆಯ ಮೇಲೆ ಶಿಷ್ಯೋತ್ತಮನ ಮುಹೂರ್ತವ ಮಾಡಿಸಿ, ಆತನಂಗಕ್ಕೆ ಗುರುಸೂತ್ರವ ಹಾಕಿ, ಶಿಷ್ಯನಂಗದ ಮೇಲೆ ಮೂರ್ತಿಗೊಂಡಿರುವ ಪರಶಿವಲಿಂಗವ ಗಣಸಾಕ್ಷಿಯಾಗಿ ಶ್ರೀ ಗುರುದೇವನು ತನ್ನ ಕರಸ್ಥಲದಲ್ಲಿ ಮುಹೂರ್ತವ ಮಾಡಿಸಿ, ಆ ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ, ಆ ಪಂಚÀಕಲಶಂಗಳಲ್ಲಿ ಶೋಬ್ಥಿಸುವಂಥ ದೇವಗಂಗಾಜಲಸ್ವರೂಪವಾದ ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ ಆ ಕಲಶಂಗಳೈದರಲ್ಲಿ ತೆಗೆದುಕೊಂಡು ಗುರುವಿನ ದಕ್ಷಿಣಭಾಗದಲ್ಲಿ ಮೂರ್ತಿಗೊಂಡಿರುವ ಪಾದೋದಕ ಕುಂಭದಲ್ಲಿ ಒಂದು ಬಿಂದುವ ತಗೆದುಕೊಂಡು ಆ ಪಾತ್ರೆಯಲ್ಲಿ ಹಾಕಿ, ಇವಾರುತೆರದ ಅರ್ಘೋದಕಂಗಳ ಪ್ರಮಥಗಣರಾಧ್ಯ ಭಕ್ತಮಹೇಶ್ವರರೆಲ್ಲ ಆ ಗುರುವಿನ ಹಸ್ತಕಮಲದಲ್ಲಿರುವಂಥ ಉದಕವನ್ನು ತೆಗೆದುಕೊಂಡು, ಶರಣಸತಿ ಲಿಂಗಪತಿಯಾಗಿ ಒಪ್ಪುವ ಶಿಷ್ಯೋತ್ತಮನ ಮಸ್ತಕದಮೇಲೆ ಮಂತ್ರಧ್ಯಾನದಿಂದ ಸಂಪ್ರೋಕ್ಷಣೆಯ ಮಾಡುವಂಥಾದೆ ಕಲಶಾಬ್ಥಿಷೇಕದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅರಿಕೆ ಉಳ್ಳನ್ನಕ್ಕ ಅರಿವು, ಅರಿವು ಉಳ್ಳನ್ನಕ್ಕ ಕುರುಹು, ಕುರುಹು ಉಳ್ಳನಕ್ಕ ಸತ್ಕಿೃೀ ಮಾರ್ಗಂಗಳು. ಆ ದೆಸೆಯಿಂದ ತ್ರಿವಿಧಸ್ಥಲ ರೂಪಾದವು. ಇಂತೀ ತ್ರಿವಿಧ ತ್ರಿವಿಧದಿಂದ ಷಡುಸ್ಥಲ ರೂಪಾಗಿ ಮೂಲ ಮೊಳೆಯೊಂದರಲ್ಲಿ ಹಲವು ಶಾಖೆ ಹೊಲಬಾದಂತೆ, ಇದು ನಿಜವಸ್ತುವಿನ ವಸ್ತುಕ. ಈ ಗುಣ ನಿರ್ಭಾವ ಭಾವವಾದ ಸಂಬಂಧ. ಇದು ವರ್ತಕ ಭಕ್ತಿಯ ಬ್ಥಿತ್ತಿ. ಉತ್ತರ ಪೂರ್ವದಲ್ಲಿ ಬೆರಸಿ ನಿರುತ್ತರವಾದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ರತ್ನದ ಪುಂಜವ ಬೆಗಡವನಿಕ್ಕುವಲ್ಲಿ ಮೊನೆ ಮುಂದೆ ಸವೆದ ಮತ್ತೆ ಪೂರ್ವಕ್ಕೆ ಉತ್ತರವಿಲ್ಲ. ನಿಶ್ಚೈಸಿ ಉತ್ತರ ಕಡೆಗಾಣಿಸಿದಲ್ಲಿ ಮುಟ್ಟಿ ಮುಂಚುವ ಅರ್ಪಿತ ಅಲ್ಲಿಯೆ ಉಪದೃಷ್ಟ ನಷ್ಟ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಭಕ್ತ ಮಾಹೇಶ್ವರ ಪ್ರಸಾದಿ ಈ ತ್ರಿವಿಧವು ಒಂದೇ ಕೋಡಿನಲ್ಲಿ ಅಡಗಿತ್ತು. ಪ್ರಾಣಲಿಂಗ ಶರಣ ಐಕ್ಯ ಈ ತ್ರಿವಿಧವು ಒಂದೇ ಕೋಡಿನಲ್ಲಿ ಅಡಗಿತ್ತು. ಇಂತೀ ಉಭಯದ ಕೋಡ ಹಿಡಿದು ಪಶ್ಚಿಮ ದ್ವಾರವ ಮುಚ್ಚಿ ನಿಂದು ಉತ್ತರ ದ್ವಾರದಲ್ಲಿ ಎಡತಾಕುವ ನಿಶ್ಚಿಂತರ ಮುಚ್ಚಿಸಿ ಸಚ್ಚಿದಾನಂದದಿ ನಲಿದೊಲಿದು ಕಲೆ ವಿದ್ಯವನೊಪ್ಪಿಸ ಬಂದೆ. ಉಲುಹಿನ ಗಿಲಿಕೆಯ ಕೊಂಬಿನಲ್ಲಿ ಸುಳುಹಿನ ಸೂಕ್ಷ್ಮದ ಕಳೆಯ ಬೆಳಗಿನಲ್ಲಿ ಅಕ್ಕನ ಗಂಡ ಭಾವಂದಿರ ಧಿಕ್ಕರಿಸ ಬಂದೆ. ಮೇಖಲೇಶ್ವರಲಿಂಗವನರಿಯ ಹೇಳಿ.
--------------
ಕಲಕೇತಯ್ಯ
ಅಯ್ಯಾ ನೀ ಮಾಡಿದಂತಾನಾದೆ ನೀ ಇರಿಸಿದಲ್ಲಿದ್ದೆ ಅಯ್ಯಾ ನೀ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಅನಾಹತ ವಿಶುದ್ಧಿ ಆಜ್ಞೆ ಪ್ರಣವ ಪಂಚಮ ಸಮಾದ್ಥಿಯಲ್ಲಿ ನೀನು ಅನುಭವಿಸಿ ಮುಂದೆ ಇರಿಸುವದ ನಾನಿಂದೆ ಕಂಡೆ. ಅದೇನು ಹದರದಿಂದ? ನಿನ್ನವರು ಎನ್ನನೊಲ್ಲದಿದ್ದಡೆ ಆ ನಿನ್ನ ಪಾದವ ಹಿಡಿದೆ. ನೀ ನಿನ್ನ ಆ ರೂಪಬಿಟ್ಟು ಗುರುವಾಗಿ ಬಂದೆನ್ನ ಭವದ ಬೇರ ಹರಿದೆ. ನಾನರಿವುದೇನರಿದಯ್ಯ. ನೀ ಶುದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀ ಸಿದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀನು ಪ್ರಸಿದ್ಧದಲ್ಲಿ ಪ್ರವೇಶಿಸಿದಡೆ ಆನೊಡನೆ ಪ್ರವೇಶಿಸಿದೆ. ಎನಗಿನ್ನೇನು ಅರಿದಿಲ್ಲ. ಇನ್ನು ಹಿಂದೆ ತಿರಿಗಿ ನೋಡಿದೆನಾಯಿತ್ತಾದಡೆ ಭಕ್ತಿಯ ತೋರಿದ ತಂದೆ, ಎನ್ನ ಭವವ ತಪ್ಪಿಸಿದ ಗುರು ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನ ತದ್ರೂಪಾದ ಬಸವಪ್ರಭುವಿನಾಣೆ.
--------------
ಸಿದ್ಧರಾಮೇಶ್ವರ
ನಹ್ಯತೆ ಸಹ್ಯತೆ ಶಂಕರಿತೆ ಮೂಲಭದ್ರಿಕೆ ಮಾಯಾರಿತು ಮಂತ್ರರಿತು ತಂತ್ರಸಾಧನ ಮಾತ್ರಾಯ ಪೂರ್ವನಿರೀಕ್ಷಣೆ ರಘುವಾಚ ವಾದಮೂಲ ವೈದಿಕಧರ್ಮ ಸಾಂಖ್ಯನ ಮತ ವ್ಯಾಪಾರ ಸಂಗ್ರಹ ಮಾಯಾ ತರ್ಕ ಶೂನ್ಯ, ಉತ್ತರ ಸಂಕಲ್ಪ ಚಿಂತನೆ ಮೊದಲಾದ ವೇದಾಧ್ಯಾಯ, ಉಭಯಚಿಂತನೆಯಾದರೂ ವೇದವೇದ್ಯರಲ್ಲ. ಅದೆಂತೆಂದಡೆ : ಮದವ ಸ್ವೀಕರಿಸಿದ ಮದೋನ್ಮತ್ತನಂತೆ, ತನ್ನ ಕೊರತೆಯ ತಾನರಿಯದೆ ಇದಿರಿಗೆ ಚತುರತೆಯನೊರೆವವನಂತೆ, ವೇದಘಾತಕರಲ್ಲದೆ ವೇದವೇದ್ಯರಲ್ಲ. ವೇದವೇದ್ಯರಾರೆಂದಡೆ ತಾನೆಂಬುದ ತಾನರಿದು, ತಾನೆಂಬ ಭಾವ ಏನೂ ಇಲ್ಲದೆ, ಶ್ರುತಿ ಸ್ಮೃತಿ ತತ್ತ್ವಜ್ಞಾನ ಭೇದಂಗಳ ಧ್ಯಾನಪರಿಪೂರ್ಣನಾಗಿ, ಪ್ರಾಣಿಗಳ ಕೊಲ್ಲದೆ, ಗೆಲ್ಲ ಸೋಲವನೊಲ್ಲದೆ, ತ್ರಿವಿಧದರ್ಚನೆಯಲ್ಲಿ ನಿಲ್ಲದೆ, ಎಲ್ಲಾ ಆತ್ಮಂಗಳಲ್ಲಿ ಸಲ್ಲೀಲೆವಂತನಾಗಿ, ಭಾವ ನಿಜವಸ್ತುವಿನಲ್ಲಿ ವೇದ್ಥಿಸಿ ನಿಂದಾತನೇ ವೇದವೇದ್ಯ, ಲಲಾಮಬ್ಥೀಮಸಂಗಮೇಶ್ವರ ಲಿಂಗದೊಳಗಾದ ಶರಣ.
--------------
ವೇದಮೂರ್ತಿ ಸಂಗಣ್ಣ
ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮ ನಾಲ್ಕು ಪಥವನು ಏಕವ ಮಾಡಿ, ಊಧ್ರ್ವಮುಖವ ಮಾಡಿ, ಈಡಾ ಪಿಂಗಳ ನಾಳಮಂ ಕಟ್ಟಿ, ಸುಷಮ್ನನಾಳವಂ ಎತ್ತಿ , ಮನ ಪವನ ಬಿಂದು ಒಡಗೂಡಿ, ಚಂದ್ರ ಸೂರ್ಯ ಶಿಖಿಯರಂ ಮುಪ್ಪುರಿಯ ಮಾಡಿ, ಒಡಗೂಡಿ ಏಕವಾಗಿ ಹುರಿಗೂಡಿ, ಮತ್ರ್ಯಲೋಕವ ಬಿಟ್ಟು, ದೇವಲೋಕವ ಮೆಟ್ಟಿನಿಂದು, ಭಾವ ಬಯಲಾಗಿ, ಬಯಕೆ ಸವೆದು, ಇನ್ನು ಈ ಲೋಕದೊಳಗೆ ಬಂದು ಬದುಕಿದೆನೆಂಬುದನಕ್ಕೆ ಹೇಯ ಹುಟ್ಟಿ, ಇದಾವುದನೂ ಒಲ್ಲದಿರ್ಪರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ ! ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ. ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ, ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ. ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು. ತನ್ನ ನೇತ್ರಕ್ಕಿಂಪಾದುದೆ ಸುವರ್ಣಸುವಸ್ತು, ತನ್ನ ಶ್ರೋತಕ್ಕೆ ಸೊಂಪಾದುದೆ ವೇದಶಾಸ್ತ್ರ, ಪುರಾಣ. ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ, ತನ್ನ ಮನ ಮುಳುಗಿದುದೆ ಲಿಂಗ. ತನ್ನ ನೆತ್ತಿಯಲ್ಲಿ ಸತ್ಯರ್ಲೋಕ, ಪಾದದಲ್ಲಿ ಪಾತಾಳಲೋಕ, ನಡುವೆ ಹನ್ನೆರಡು ಲೋಕ. ಅಂಡಜ ಪಿಂಡಜ ಉದ್ಭಿಜ ಜರಾಯುಜವೆಂಬ ಎಂಬತ್ತು ನಾಲ್ಕುಲಕ್ಷ ಜೀವರಾಶಿಗಳು. ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು, ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ದವು. ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನರಿದು ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ. ಈ ಘಟದೇವತೆಯ ಸಟೆಯೆಂದು ಬಿಸುಟು ಮುಂದೆ ತಾ ದಿಟವಪ್ಪುದಿನ್ನೆಲ್ಲಿಯದೊ ? ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು. ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು. ತೇಜವಳಿದಂದೆ ಹಸಿವು ತೃಷೆಗಳಳಿದವು. ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು. ಆಕಾಶವಳಿದಂದೆ ಅವು ಅಲ್ಲಿಯೆ ಲೀಯವಾಯಿತ್ತು. ಇದು ಕಾರಣ ಉರಿಕೊಂಡ ಕರ್ಪುರದ ಕರಿ ಕಂಡವರುಂಟೆ ? ಅಪ್ಪುವುಂಡ ಉಪ್ಪಿನ ಹರಳ ಮರಳಿ ಹೊರೆಯ ಕಟ್ಟಿ ಹೊತ್ತವರುಂಟೆ ? ವಾಯುಕೊಂಡ ಜ್ಯೋತಿಯ ಬೆಳಗ ಕಂಡವರುಂಟೆ ? ಹರಿ ಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ. ಮಣ್ಣಿನ ಸಾರಾಯದಿಂದ ಮರನುತ್ಪತ್ಯ. ಮರದ ಸಾರಾಯದಿಂದ ಎಲೆಯುತ್ಪತ್ಯ ಎಲೆಯ ಸಾರಾಯದಿಂದ ಹೂವ ಉತ್ಪತ್ಯ ಹೂವ ಸಾರಾಯದಿಂದ ಕಾಯಿ ಉತ್ಪತ್ಯ ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ ರುಚಿಯಿಂದತ್ತ ಇಲ್ಲವೆಂಬ ತತ್ವ. ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ? ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ; ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ. ಸಿದ್ಧರಾಮಯ್ಯ.
--------------
ಅಲ್ಲಮಪ್ರಭುದೇವರು
ಭಕ್ತನೆಂಬ ಭೂಮಿಯಲ್ಲಿ ಗುರೂಪದೇಶವೆಂಬ ನೇಗಲಿಯಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಸೆಳೆಗೋಲಂ ಪಿಡಿದು, ಉತ್ತರ ಕ್ರಿಯೆಯೆಂಬ ಹಂಸನೇರಿ, ದುಷ್ಕರ್ಮದ ಕಾಟದ ಕುಲವಂ ಕಡಿದು, ಅರಿವೆಂಬ ರವಿಕಿರಣದಲ್ಲಿ ಒಣಗಿಸಿ, ಜ್ಞಾನವೆಂಬ ಬೆಂಕಿಯಲ್ಲಿ ಸುಟ್ಟುರುಹಿ, ಆ ಹೊಲನ ಹಸನವ ಮಾಡಿ, ಅದಕ್ಕೆ ಬಿತ್ತುವ ಭೇದವೆಂತೆಂದಡೆ: ಈಡಾ ಪಿಂಗಳ ಸುಷುಮ್ನವೆಂಬ ನಾಳವಂ ಜೋಡಿಸಿ, ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲಿಯೆಂಬ ಹಗ್ಗವಂ ಬಿಗಿದು, ಹಂಸನೆಂಬ ಎರಡೆತ್ತನ್ನೇ ಹೂಡಿ, ಶಾಂತಿ ನಿರ್ಮಲವೆಂಬ ಮಳೆಗಾಲದ ಮೇಘಮಂ ಸುರಿದು, ಆ ಬೀಜ ಪಸರಿಸಿ, ಪ್ರಜ್ವಲಿಸಿ ಫಲಕ್ಕೆ ಬಂದು ನಿಂತಿರಲು, ಅದಕ್ಕೆ ಒತ್ತುವ ಕಸ ಆವಾವೆಂದಡೆ : ಅಷ್ಟಮದದ ಹಲವಂ ಕಿತ್ತು, ಸಪ್ತವ್ಯಸನದ ಸೆದೆಯಂ ಕಳೆದು, ಮನೋರಥವೆಂಬ ಮಂಚಿಗೆಯನ್ನೇರಿ, ಬಾಲಚಂದ್ರನೆಂಬ ಕವಣಿಯಂ ಪಿಡಿದು, ಪ್ರಪಂಚವೆಂಬ ಹಕ್ಕಿಯಂ ಹೊಡೆದು, ಆ ಭತ್ತ ಬಲಿದು ನಿಂದಿರಲು, ಅದನ್ನು ಕೊಯ್ಯುವ ಭೇದವೆಂತೆಂದಡೆ : ಇಷ್ಟವೆಂಬ ಕುಡುಗೋಲಿಗೆ, ಪ್ರಾಣವೆಂಬ ಹಿಡಿಯ ಜೋಡಿಸಿ, ಭವಭವವೆಂಬ ಹಸ್ತದಿಂದ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವಡಂ ಕಟ್ಟಿ, ಸುಜ್ಞಾನಪಥವೆಂಬ ಬಂಡಿಯ ಹೇರಿ, ಮುಕ್ತಿ ಕೋಟಾರಕ್ಕೆ ತಂದು, ಉನ್ನತವೆಂಬ ತೆನೆಯಂ ತರಿದು, ಷಡುವರ್ಣವೆಂಬ ಬೇಗಾರರಂ ಕಳೆದು, ಅಂಗಜನೆಂಬ ಕಾಮನಂ ಕಣ್ಕಟ್ಟಿ, ಮಂಗಲನೆಂಬ ಕಣದಲ್ಲಿ ಯಮರಾಜನಿಗೆ ಕೋರ ಹಾಕದೆ, ಚಿತ್ರಗುಪ್ತರ ಸಂಪುಟಕ್ಕೆ ಬರಿಸದೆ, ಈ ಶಂಕರನೆಂಬ ಸವಿಧಾನ್ಯವನುಂಡು, ಸುಖಿಯಾಗಿರುತಿರ್ಪ ಒಕ್ಕಲಮಗನ ಎನಗೊಮ್ಮೆ ತೋರು ತೋರಯ್ಯಾ, ಅಮರಗುಂಡದ ಮಲ್ಲಿಕಾರ್ಜುನ ಪ್ರಭುವೆ.
--------------
ಪುರದ ನಾಗಣ್ಣ
ಬಲ್ಲೆ ಬಲ್ಲೆ ನಿನ್ನ, ಜನನ ಮರಣಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ ನಿನ್ನ, ಕಾಲಕಲ್ಪಿತಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ, ನೀನು ಮಹಾನಿತ್ಯ ಮಂಗಳನೆಂಬುದ. ಬಲ್ಲೆ ಬಲ್ಲೆ, ನೀನು ಸತ್ಯಶುದ್ಧದೇವನೆಂಬುದ. ಬಲ್ಲೆ ಬಲ್ಲೆ, ನೀನು ಫಲಪದವ ಮೀರಿದನೆಂಬುದ. ಬಲ್ಲೆ ಬಲ್ಲೆ, ನೀನು ಉರುತರ ಲೋಕಪ್ರಕಾಶನೆಂಬುದ. ಬಲ್ಲೆ ಬಲ್ಲೆ, ನೀನು ಪರಿಭವಕ್ಕೆ ಬಾರನೆಂಬುದ. ಬಲ್ಲೆ ಬಲ್ಲೆ, ನೀನು ಕಾಲನ ಕಮ್ಮಟಕ್ಕೆ ಸಲ್ಲನೆಂಬುದ. ಎನ್ನ ಬಲ್ಲತನಕ್ಕೆ ಮಂಗಳವನೀಯೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದ್ವಾರಂಗಳಲ್ಲಿ ತಪ್ಪದೆ ಬಪ್ಪಾಗ ಆನು ನಿನ್ನೊಡನೆ ಬಾರದೆ ಉಳಿದುದುಂಟೆ? ಆನೇನು ಭೇದವಾಗಿಪ್ಪೆನೆಲೆ ಅಯ್ಯಾ. ಸಂದು ಸವೆದು ಹಂಗು ಹರಿದು ಲೀಯ ಒಳಗಾಗಿದ್ದ ಎನ್ನ ನೋಡದೆ ಇಪ್ಪುದು ಅದಾವ ಗರುವತನ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಪೃಥ್ವಿ ಆಕಾಶದ ಮೇಲೆ ಗೌಪ್ಯವೆಂಬ ಪ್ರಣವದ ನಾದದ ಅಗ್ರದಲ್ಲಿ ಆದಿ ಅನಾದಿಯ ಮುಟ್ಟದೆ, ಅಪರಿಮಿತವೆಂಬ ಕುಂಭವುಂಟು. ಆ ಕುಂಭದ ಪೂರ್ವಬಾಗಿಲಿಗೆ ಎಂಟು ಎಸಳಿನ ಬೀಗ. ಉತ್ತರ ಬಾಗಿಲಿಗೆ ಎಸಳು ಮೂರರ ಬೀಗ. ಪಶ್ಚಿಮದ ಬಾಗಿಲಿಗೆ ಪಂಚ ಎಸಳಿನ ಬೀಗ. ದಕ್ಷಿಣದ ಬಾಗಿಲಿಗೆ ಏಕ ಎಸಳಿನ ಬೀಗ. ಆ ಬೀಗಂಗಳ ದಳದ ಎಸಳಿನಲ್ಲಿ ಕಳೆವಕ್ಷರಗಳೇಳು, ಉಳಿವಕ್ಷರವಾರು, ಸಲುವಕ್ಷರ ಮೂರು, ನೆಲೆಯಕ್ಷರವೋಂದೇ. ಇಂತೀ ಎರಡಕ್ಷರವ ಭಾವಿಸಿ ಪ್ರಮಾಣವಿಟ್ಟು ನೋಡಬಲ್ಲಡೆ ಆ ಕುಂಭದೊಳಹೊರಗ ಕಾಣಬಹುದು. ಇದು ಲಿಂಗಾಂಗಿಯ ನಿಜೈಕ್ಯಸ್ಥಲವೆಂಬೆ. ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ಯೋಗಕ್ಕೆ ಸಿಕ್ಕಲಿಲ್ಲವೆಂಬೆನು.
--------------
ಬಾಚಿಕಾಯಕದ ಬಸವಣ್ಣ
ಅಪ್ಪು ಬಲಿದು ಪೃಥ್ವಿಯ ಮೇಲೆ ಶತಕೋಟಿ ಸಹಸ್ರಕೋಟಿ ಬಯಲಿಂದತ್ತ ಭರಿತವಪ್ಪುದೊಂದು ರಥ. ಆ ರಥಕ್ಕೆ ಬ್ರಹ್ಮ ವಿಷ್ಣು ಸೂರ್ಯ ಚಂದ್ರ (?) ವೇದಶಾಸ್ತ್ರಪುರಾಣಸಕಲಾಗಮಪ್ರಮಾಣಗೂಡಿದ ಷಟ್ಕಲೆ ಮೇರುಮಂದಿರವೆಂಬ ಅಚ್ಚುಗಂಬವ ನೆಟ್ಟಿದೆ. ಆ ರಥದ ಸುತ್ತಲು ದೇವಾದಿದೇವರ್ಕಳೆಲ್ಲರ ತಂದು ಸಾರಥಿಯನಿಕ್ಕಿ ಆ ರಥದ ನಡುಮಧ್ಯಸ್ಥಾನದಲ್ಲಿ ಅಷ್ಟದಳಕಮಲವಾಯಾಗಿ ಅನಂತಸಹಸ್ರಕೋಟಿ ಕಮಲಪದ್ಮಾಸನವ ರಚಿಸಿದೆ. ಆ ಪದ್ಮಾಸನದ ಮೇಲೆ ಶಂಭು ಸದಾಶಿವನೆಂಬ ಮಹಾದೇವನ ತಂದು ನೆಲೆಗೊಳಿಸಿದೆ. ಆ ರಥದ ಪೂರ್ವಬಾಗಿಲಲ್ಲಿ ಆದಿಶಕ್ತಿಯ ನಿಲಿಸಿದೆ. ಉತ್ತರ ಬಾಗಿಲಲ್ಲಿ ಓಂ ಪ್ರಣಮಸ್ವರೂಪಿಣಿಯೆಂಬ ಶಕ್ತಿಯ ನಿಲಿಸಿದೆ. ಆ ಪಶ್ಚಿಮಬಾಗಿಲಲ್ಲಿ ಕ್ರಿಯಾಶಕ್ತಿಯ ನಿಲಿಸಿದೆ. ದಕ್ಷಿಣದ ಬಾಗಿಲಲ್ಲಿ ಚಿಚ್ಫಕ್ತಿಯ ನಿಲಿಸಿದೆ. ಭೈರವ ವಿಘ್ನೆಶ್ವರ ಷಣ್ಮುಖ ವೀರಭದ್ರರೆಂಬ ನಾಲ್ಕು ಧ್ವಜಪಟಗಳನೆತ್ತಿ, ಆ ರಥದ ಅಷ್ಟದಿಕ್ಕುಗಳಲ್ಲಿ ನಾನಾ ಚಿತ್ರವಿಚಿತ್ರವೈಭವಂಗಳೆಂಬ ಕೆಲಸವ ತುಂಬಿ, ಅದರ ಗಾಲಿಯ ಕೀಲುಗಳಲ್ಲಿ ಈರೇಳುಭುವನವೆಂಬ ಹದಿನಾಲ್ಕುಲೋಕಂಗಳ ಧರಿಸಿ ಆಡುತ್ತಿರ್ಪವು. ಅನಾದಿ ಶೂನ್ಯವೆಂಬ ಮಹಾರಥದೊಳಗಿಪ್ಪ ನಮ್ಮ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ನಿರಾಳ ನಿಶ್ಚಿಂತ ನಿರ್ಲೇಪನು.
--------------
ಬಾಚಿಕಾಯಕದ ಬಸವಣ್ಣ
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದಿಕ್ಕಿನ ಹಂಗು ಹರಿದೆ. ನೀನುತ್ತರದಲ್ಲಿ ಓಂಕಾರ ಪ್ರದೀಪನಾಗಿ ಉತ್ತರದ್ವಾರದಲ್ಲಿ ಬಪ್ಪಾಗ ಆನೊಡನೆ ಬಂದೆ. ನೀನು ಅರಿತೂ ಅರಿಯದ ಹಾಂಗೆ ಇದ್ದೆ. ದಕ್ಷಿಣದ್ವಾರದಲ್ಲಿ ಜನಿತ ನಾಶವಾಗಿ ಬಪ್ಪಂದು ಆನೊಡನೆ ಬಂದು ನೀನರಿಯದಂತಿದ್ದೆ. ನೀನು ಪೂರ್ವದ್ವಾರದಲ್ಲಿ ಅಕ್ಷರದ್ವಯದ ವಾಹನವೇರಿಬಪ್ಪ್ಲ ಆನೊಡನೆ ಬಂದೆ. ನೀ ಪಶ್ಚಿಮದ್ವಾರದ್ಲ ಅವ್ವೆಯ ಮನದ ಕೊನೆಯ ಮೇಲೆ ಅವ್ಯಕ್ತಶೂನ್ಯವಾಗಿ ಬಪ್ಪಾಗ ಒಡನೆ ಬಂದೆ ಎಲೆ ಅಯ್ಯಾ. ಎನ್ನನು ಅನ್ಯಕ್ಕೊಪ್ಪಿಸುವ, ಎನ್ನನು ಶುದ್ಧ ನಾನು ನಿನ್ನವನಲ್ಲಾ. ಆನು ಬಂದ ಬರವ, ಇದ್ದ ಇರುವ ಆನರಿಯೆನಲ್ಲದೆ ನೀ ಬಲ್ಲೆ. ಅರಿದು ಕಾಡುವುದುಚಿತವೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->