ಅಥವಾ

ಒಟ್ಟು 11 ಕಡೆಗಳಲ್ಲಿ , 4 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ, ಪರಶಿವನೇ ಶ್ರೀಗುರುರೂಪಾಗಿ ನಿನ್ನ ಮನಕ್ಕೆ ಬಂದನು. ಬುದ್ಧಿಯೇ ನಿನ್ನ ಬುದ್ಧಿ ಸುಬುದ್ಧಿಯಾದುದಲ್ಲಾ, ಶ್ರೀಗುರುವೇ ಶಿವ[ಲಿಂಗ]ರೂಪಾಗಿ ನಿನ್ನ ಬುದ್ಧಿಗೆ ಬಂದನು. ಚಿತ್ತವೇ ನೀ ನಿನ್ನ ಚಿತ್ತ ನಿಶ್ಚಿಂತವಾದುದಲ್ಲಾ, ಶಿವಲಿಂಗವೇ ಜಂಗಮರೂಪಾಗಿ ನಿನ್ನ ಚಿತ್ತಕ್ಕೆ ಬಂದನು. ಅಹಂಕಾರವೇ, ನಿನ್ನಹಂಕಾರ ನಿಜವಾದುದಲ್ಲಾ, ಶ್ರೀ ಗುರು ಲಿಂಗ ಜಂಗಮ ತ್ರಿವಿಧವು ಏಕೀಭವಿಸಿ ನಿನಗೆ ಪ್ರಸನ್ನಪ್ರಸಾದವ ಕರುಣಿಸಿದನು. ಆ ಪ್ರಸಾದಲಿಂಗಸ್ವಾಯತವಾಗಿ ನಿಮಗೆ ನಾಲ್ವರಿಗೂ ಪರಿಣಾಮವಾಯಿತ್ತು ಕಾಣಾ. ಪ್ರಾಣವು ನಿನಗೆ ಲಿಂಗಪ್ರಾಣವಾದುದಲ್ಲಾ, ನಮ್ಮೆಲ್ಲರನೂ ಗಬ್ರ್ಥೀಕರಿಸಿಕೊಂಡಿಪ್ಪ ಅಂಗವೇ ಲಿಂಗವಾದುದಲ್ಲಾ. ಪ್ರಾಣವೇ ನಿನ್ನ ಸಂಗದಿಂದ ನಿನ್ನನಾಶ್ರಯಿಸಿಕೊಂಡಿಪ್ಪ ಸರ್ವತತ್ತ್ವಂಗಳೂ ಸರ್ವಪಂಚಾದ್ಥಿಕಾರಿಗಳೂ ಸರ್ವಯೋಗಿಗಳೆಲ್ಲ ಶಿವಪದಂಗಳ ಪಡೆದರಲ್ಲಾ. ಅಹಂಗೆ ಅಹುದು ಕಾಣಾ, ಪ್ರಾಣವೇ ಇದು ದಿಟ, ನೀನೇ ಮಗುಳೆ ಮಹಾಬಂಧುವಾಗಿ ನಿನಗೊಂದು ಏಕಾಂತವ ಹೇಳುವೆನು ಕೇಳು. ನಾನು ನೀನು ಅನೇಕ ಕಲ್ಪಂಗಳಲ್ಲಿಯೂ ಅನೇಕ ಯೋನಿಗಳಲ್ಲಿಯೂ ಜನಿಸಿ ಸ್ಥಿತಿ ಲಯಂಗಳನೂ ಅನುಭವಿಸಿ, ಪಾಪಪುಣ್ಯಂಗಳನುಂಡುದ ಬಲ್ಲೆ. ಅವೆಲ್ಲವನೂ ಕಳೆದುಳಿದು, ಶ್ರೀಗುರುವಿನ ಕರುಣ ಮೇರೆವರಿದು ಮಹಾಪದವಾಯಿತ್ತು. ಶ್ರೀಗುರುವಿನ ಹಸ್ತದಲ್ಲಿ ಜನನವಾಯಿತ್ತು. ಶ್ರೀಗುರುವಿನ ಕರುಣವಾಯಿತ್ತು. ಶಿವಲಿಂಗ ಸ್ವಾಯತವಾಯಿತ್ತು. ಜಂಗಮವೆಂದರಿದು ಜ್ಞಾನವಾಯಿತ್ತು. ಶ್ರೀಗುರು ಲಿಂಗ ಜಂಗಮದಿಂದ ಪ್ರಸಾದವ ಪಡೆದು ಪ್ರಸಾದವನು ಗ್ರಹಿಸಿ ಶಿವಮಹಾಮುಕ್ತಿಪದವಾಯಿತ್ತು. ಇನ್ನೊಂದ ನಾ ನಿಮ್ಮ ಬೇಡಿಕೊಂಬೆನು : ಮಾಯಾಂಗನೆ ಆಸೆ ಮಾಡಿಕೊಂಡು ಬಂದಹಳು, ಅವರಿಬ್ಬರೂ ಹೋಗಲೀಸದಿರಿ, ನಿಮಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಾಣೆ ಎನಗೆಯೂ ಅದೇ ಆಣೆ.
--------------
ಉರಿಲಿಂಗಪೆದ್ದಿ
ಲಿಂಗವನರಿಯರು ಲಿಂಗದ ಮುಖವನರಿಯರು. ಪೂಜಿಸಲರಿಯರು ಅರ್ಚಿಸಲರಿಯರು ಅರ್ಪಿಸಲರಿಯರು. ನಾನೇ ಭಕ್ತನು ನಾನೇ ಮಾಹೇಶ್ವರನು ನಾನೇ ಪ್ರಸಾದಿಯೆಂಬರು. ಶಿವಾಚಾರಪರಾಙ್ಮುಖರು ನೋಡಾ. ಶಿವ ಶಿವಾ, ಪ್ರಾಣಲಿಂಗಿ ಐಕ್ಯನೆಂಬುದು ಮಹಾಕ್ರೀ. ಅದನೆಂತೂ ಅರಿಯರು. ಗುರು ಲಿಂಗ ಜಂಗಮ ಒಂದೆಂಬುದನೂ ವೇದ ಶಾಸ್ತ್ರ ಆಗಮ ಪುರಾಣ ಪುರಾತನರ ನಡೆ ನುಡಿಯಿಂದರಿದು ಕ್ರೀಯನರಿದು ಕಾಲವನರಿದು ಮನ ವಂಚನೆಯಿಲ್ಲದೆ ಶಿವಲಿಂಗವ ಪೂಜಿಸಬೇಕು, ಸದ್ಭಕ್ತಿಯಿಂ ಭಕ್ತನಾಗಿ. `ನ ಗುರೋರಧಿಕಂ ನ ಗುರೋರಧಿಕಂ ಎಂಬುದನರಿದು ಪರಧನ ಪರಸ್ತ್ರೀ ಪರದೈವವ ತ್ಯಜಿಸಿ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮನೋವಾಕ್ಕಾಯಶುದ್ಧನಾಗಿ ಅಷ್ಟವಿಧಾರ್ಚನೆ ಷೋಡಶೋಪಚಾರದಿಂ ಅರ್ಚಿಸಬೇಕು ಶ್ರೀಗುರುಲಿಂಗಕ್ಕೆ ಮಾಹೇಶ್ವರನಾಗಿ. ಜಂಗಮ ಪರಶಿವನೆಂದರಿದು ಭೋಗಮೂರ್ತಿ ಎಂದರಿದು ಮನೋವಾಕ್ಯಾಯಶುದ್ಧನಾಗಿ ಧನವಂಚನೆಯಿಲ್ಲದೆ ಸರ್ವಪದಾರ್ಥ ಸರ್ವಭೋಗಂಗಳನರ್ಪಿಸಿ ಜಂಗಮಲಿಂಗಾರ್ಚನೆಯಂ ಮಾಡಿ ಜಂಗಮಪ್ರಸಾದವಂ ಪಡೆದು ಪ್ರಸಾದವ ಭೋಗಿಸಿ ಪ್ರಸಾದಿಯಾಗಿ ಜಂಗಮಲಿಂಗಾರ್ಚನೆಯಂ ಮಾಡುವುದಯ್ಯಾ ಪ್ರಸಾದಿಯಾಗಿ. ಇಂತು ಭಕ್ತ ಮಾಹೇಶ್ವರ ಪ್ರಸಾದಿ ತನುವಿಡಿದು `ಏಕ ಮೂರ್ತಿಸ್ತ್ರಧಾ ಭೇದಾಃ ಎಂಬುದನರಿದು ಕ್ರಿಯೆಯಲ್ಲಿ ಕ್ರಿಯೆಯನರಿದು ತನುವಿಡಿದು ಸಕಲನಾಗಿ ನಡೆವ ಸ್ಥಲ ಈ ಮೂರು ಪ್ರಾಣಲಿಂಗಿ ಶರಣನೈಕ್ಯನೆಂಬುದು ಇವು ಮೂರುಸ್ಥಲ. ಮನವಿಡಿದು ನಡೆವುದು ನಿಷ್ಕಲಸ್ಥಲವನೊಂದುಮಾಡಿ ಏಕೀಭವಿಸಿ ನಡೆವುದು. ಇವು ಮೂರುಸ್ಥಲಕ್ಕೆ ನಿಷ್ಕ್ರಿಯಾಸಂಬಂಧ. ಈ ಮಹಾವರ್ಮವನೂ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ನಿಮ್ಮ ಶರಣರೇ ಬಲ್ಲರು, ವಾಙ್ಮನೋತೀತರು ಉಪಮಾತೀತರು, ಘನ ಮಹಾ[ಕ್ರೀಯ].
--------------
ಉರಿಲಿಂಗಪೆದ್ದಿ
ನೇತ್ರದಲ್ಲಿ ಷಡುವರ್ಣಸಂಬಂಧವಹ ಪವಿತ್ರ ಅಪವಿತ್ರವ ನೋಡಿ ಅರಿದು ಮಹಾಪವಿತ್ರವ ಮಾಡಿ ನೇತ್ರದ ಕೈಯಲೂ ಲಿಂಗನೇತ್ರಕ್ಕೆ ಅರ್ಪಿಸುವಲ್ಲಿ ನೇತ್ರೋದಕವು. ಶ್ರೋತ್ರದಲ್ಲು ಶಬ್ದ ಕುಶಬ್ದವನರಿದು ಮಹಾಶಬ್ದದಲ್ಲು ವರ್ತಿಸಿ ಶ್ರೋತ್ರದ ಕೈಯಲೂ ಲಿಂಗಶ್ರೋತ್ರಕ್ಕೆ ಅರ್ಪಿಸುವಲ್ಲಿ ಶ್ರೋತ್ರೋದಕವು. ಘ್ರಾಣದಿಂ ಸುಗಂಧ ದುರ್ಗಂಧವನರಿದು ಮಹಾಗಂಧದಲೂ ವರ್ತಿಸಿ ಘ್ರಾಣದ ಕೈಯಲೂ ಲಿಂಗಘ್ರಾಣಕ್ಕೆ ಅರ್ಪಿಸುವಲ್ಲಿ ಘ್ರಾಣೋದಕವು. ಜಿಹ್ವೆಯಿಂ ಮಧುರ ಆಮ್ಲ ಲವಣ ತಿಕ್ತ ಕಟು ಕಷಾಯವೆಂಬ ಷಡುರುಚಿಯನರಿದು ಮಹಾರುಚಿಯನರಿದು ರುಚಿಮಾಡಿ ಲಿಂಗಜಿಹ್ವೆಗೆ ಜಿಹ್ವೆಯ ಕೈಯಲೂ ಅರ್ಪಿಸುವಲ್ಲಿ ಜಿಹ್ವೋದಕವು. ಪರುಷನದಿಂ ಶೀತೋಷ್ಣವನರಿದು ಇಚ್ಚೆಯ ಕಾಲವನರಿದು ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡುವಲ್ಲಿ ಸ್ಪರ್ಶನೋದಕವು. ಸದ್ಭಕ್ತಿಯಿಂ ಪಾದಾರ್ಚನೆಯ ಮಾಡುವಲ್ಲಿ ಪಾದೋದಕವು. ಮಜ್ಜನಕ್ಕೆರೆವಲ್ಲಿ ಮಜ್ಜನೋದಕವು. ಆರೋಗಣೆಯಲ್ಲಿ ಆರೋಗಿಸಲಿತ್ತುದು ಅರ್ಪಿತೋದಕವು. ಆರೋಗಣೆಯಲ್ಲಿ ಮೇಲೆ ಹಸ್ತಕ್ಕೆರೆದುದು ಹಸ್ತೋದಕವು. ಗುರುಲಿಂಗ ಶಿವಲಿಂಗ ಜಂಗಮಲಿಂಗ ಒಂದೆಂದರಿದು ಸರ್ವಕ್ರಿಯಾಕರ್ಮಕ್ಕೆ ಲಿಂಗಸಂಬಂಧವ ಮಾಡಿ ಪ್ರಯೋಗಿಸುವುದು ಲಿಂಗೋದಕವು. ಈ ದಶೋದಕ ಕ್ರೀಯನರಿದು ವರ್ತಿಸುವುದು ಆಗಮಾಚಾರ ಕ್ರಿಯಾಸಂಪತ್ತು. ಅಯ್ವತೊಂದಕ್ಷರದಿಂ ಪುಟ್ಟಿದಂತಹ ವೇದಾದಿವಿದ್ಯಂಗಳು ಮೊದಲಾದ ಸರ್ವಕ್ರೀ ಕುಶಲಶಬ್ದಂಗಳನೂ ಶ್ರೋತ್ರದಿಂ ಲಿಂಗಶ್ರೋತ್ರಕ್ಕೆ ಅರ್ಪಿತವ ಮಾಡಿ ಶಬ್ದಭೋಗವ ಭೋಗಿಸುವರಲ್ಲಿ ಶಬ್ದಪ್ರಸಾದ. ಮೃದು ಕಠಿಣ ಶೀತೋಷ್ಣಂಗಳನೂ ಅಷ್ಟತನು ನೆಳಲು ಬಿಸಿಲು ಮೊದಲಾದ ವಸ್ತುಗಳನೂ ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡಿ ಪರುಷನ ಭೋಗವ ಭೋಗಿಸುವಲ್ಲಿ ಪರುಷನ ಪ್ರಸಾದ. ಶ್ವೇತ ಪೀತ ಹರೀತ ಮಾಂಜಿಷ* ಕೃಷ್ಣ ಕಪೋತ ಷಡುವರ್ಣ ಮೊದಲಾದ ಚಿತ್ರವಿಚಿತ್ರವರ್ಣಂಗಳನೆಲ್ಲವನೂ ನೇತ್ರದಿಂ ಲಿಂಗನೇತ್ರಕ್ಕೆ ಅರ್ಪಿಸಿ ನಿರೀಕ್ಷಿಸಿ ಅರ್ಪಿಸುವಲ್ಲಿ ರೂಪಪ್ರಸಾದ. ಸಫಲ ಪಾಕಾದಿಗಳನೂ ಸರ್ವದ್ರವ್ಯಂಗಳನೂ ಷಡುರುಚಿ ಭಿನ್ನರುಚಿ ಮೂವತ್ತಾರನರಿದು ಜಿಹ್ವೆಯ ಕೈಯಲೂ ಲಿಂಗಜಿಹ್ವೆಗೆ ಅರ್ಪಿಸಲು ರಸಪ್ರಸಾದ. ಪುಷ್ಪಧೂಪ ನಾನಾ ಸರ್ವಸುಗಂಧವಸ್ತುಗಳನೂ ಘ್ರಾಣದಿಂ ಲಿಂಗಘ್ರಾಣಕ್ಕೆ ಅರ್ಪಿಸುವುದು ಸುಗಂಧಭೋಗವ ಭೋಗಿಸುವುದು ಗಂಧಪ್ರಸಾದ. ಈ ಪಂಚೇಂದ್ರಿಯದ ಕೈಯಲೂ ಪಂಚವಿಷಯಂಗಳ ಗುಣಂಗಳವಗುಣಂಗಳರಿದು ಅವಧಾನದಿಂದಪ್ರ್ಪಿಸಿ ಸರ್ವಭೋಗವ ಭೋಗಿಸುವಲ್ಲಿ ಸನ್ನಹಿತಪ್ರಸಾದ. ಗುರುವಿಗೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಶುದ್ಧಪ್ರಸಾದ. ಲಿಂಗಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಸಿದ್ಧಪ್ರಸಾದ. ಜಂಗಮಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಪ್ರಸಿದ್ಧಪ್ರಸಾದ. ಗುರು ಲಿಂಗ ಜಂಗಮಕ್ಕೆ ಸರ್ವಪದಾರ್ಥ ಸರ್ವಭೋಗಂಗಳ ಭೋಗಿಸಲಿತ್ತು ಶೇಷಪ್ರಸಾದವ ಭೋಗಿಸುವುದು ಪದಾರ್ಥಪ್ರಸಾದ. ಕಾಮಾದಿಸರ್ವಭೋಗಂಗಳನೂ ಮನ ಬುದ್ಧಿ ಚಿತ್ತ ಅಹಂಕಾರವ ಏಕೀಭವಿಸಿ ಭಾವಲಿಂಗಕ್ಕೆ ಅರ್ಪಿಸಿ ಭೋಗಿಸುವುದು ಭಾವಪ್ರಸಾದ. ಪ್ರಾಣಲಿಂಗಕ್ಕೆ ಕಾಯವೆಂಬ ಭಕ್ತನು ಭಿನ್ನದೋರದೆ ಅವಿನಾಭಾವದಿಂ ಸರ್ವಕ್ರಿಯೆ ಲಿಂಗಕ್ರೀಯಾಗಿ ಏಕಾದಶಮುಖವರಿದು ಅರ್ಪಿಸಿ ಲಿಂಗಭೋಗೋಪಭೋಗಿಯಾಗಿಹುದೆ ಏಕಾದಶಪ್ರಸಾದ. ಇಂತೀ ಏಕಾದಶಪ್ರಸಾದವರಿದು ವರ್ತಿಸುವುದು ಸಹಜಶಿವಾಗಮಾಚಾರಕ್ರಿಯಾಸಂಪತ್ತು. ಇವೆಲ್ಲವನು ಮೀರಿ ಅತ್ಯಶಿಷ್ಟದ್ಧಶಾಂಗುಲಲಿಂಗಕ್ಕೆ ಕಾಯವಾಗಿ ಆ ಲಿಂಗವೇ ಪ್ರಾಣವಾಗಿಪ್ಪ ಶರಣನು ವೇದ ಶಾಸ್ತ್ರಾಗಮ ಪುರಾಣಕ್ಕೆ, ದೇವ ದಾನವ ಮಾನವರಿಗೆ ಅತ್ಯತಿಷ್ಟದ್ಧಶಾಂಗುಲವೆನಿಸಿ `ಲಿಂಗಮಧ್ಯೇ ಶರಣಃ ಶರಣಮಧ್ಯೇ ಲಿಂಗಂ' ಎಂದೆನಿಸಿಪ್ಪ ಅವಿನಾಭಾವಸರ್ವಾಂಗಲಿಂಗಕ್ರೀಯ ನೀನೇ ಬಲ್ಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪ್ರಥಮದಲ್ಲಿ ಬೀಜವಿಲ್ಲದಿದ್ದಡೆ ವೃಕ್ಷ ಅಂಕುರ ಪಲ್ಲವ ಶಾಖೆ ಕುಸುಮ ಫಲವೆಲ್ಲಿಯವಯ್ಯಾ ? ಆ ಫಲದ ಮಹಾಮಧುರವೆಲ್ಲಿಯದಯ್ಯಾ ? ಪರಶಿವಲಿಂಗಮೂರ್ತಿ ಪರಮಾತ್ಮ ಬ್ರಹ್ಮ ಬಯಲಾದಡೆ ನಿಷ್ಕಳತತ್ತ್ವಂಗಳೆಂತಾದವು ? ಕೇವಲ ಸಕಲತತ್ತ್ವಂಗಳೆಂತದಾವು ? ತಾನು ಹುಟ್ಟಿ ತಮ್ಮವ್ವೆ ಬಂಜೆ ಎನ್ನಬಹುದೇ ? ಅರಸು ಒಬ್ಬನು ಸ್ವತಂತ್ರನು, ಸರ್ವಕ್ರೀ ವರ್ತಿಸಬಾರದು. ಪರಶಿವಲಿಂಗಮೂರ್ತಿ ಸರ್ವತತ್ತ್ವಮಯನಪ್ಪ, ಸರ್ವಕಾರಣಕ್ಕೆ ಕಾರಣನಪ್ಪ. ತನ್ನ ವಿನೋದಕ್ಕೆ ಪಂಚಭೂತಂಗಳನು ಇಚ್ಛಾಜ್ಞಾನಕ್ರಿಯಾಶಕ್ತಿಗಳನೂ ಬ್ರಹ್ಮವಿಷ್ಣಾದಿಗಳನೂ, ಅಷ್ಟಾದಶವಿದ್ಯಂಗಳನೂ ಮಾಡಿ ಉತ್ಪತ್ತಿ ಸ್ಥಿತಿಯನೂ ನೋಡಿ, ವಿನೋದಿಸಿ ಮಹಾಲೀಲೆಯಿಂ ಸಂಹರಿಸಿ ಪರಮಸುಖಿಯಾಗಿಪ್ಪನು. ಮತ್ತೆ `ಯಥಾಪೂರ್ವಮಕಲ್ಪಯತ್' ಎಂದುದಾಗಿ ಮರಳಿ ವಿನೋದಿಸುತಿರ್ಪನು. ಪರಶಿವಲಿಂಗಮೂರ್ತಿಪರಮಾತ್ಮನಲ್ಲಿ ಪರಬ್ರಹ್ಮ ಬಯಲಾದಡೆ ಗುರುವೆಂತಾದ ಜಂಗಮವೆಂತಾದ ಹೇಳಿರೆ ? ಅಂತರಂಗ ಬಹಿರಂಗ ಪರಮಾಕಾಶಮಧ್ಯದಲ್ಲಿ ನಿಷ್ಕಳನು `ಶಿವಂ ಪರಾತ್ಪರಂ ಶೂನ್ಯಂ' ಎಂದುದಾಗಿ `ಶಿವಂ ಪರಮಾಕಾಶಮಧ್ಯೇ ಧ್ರುವಂ' ಎಂದುದಾಗಿ ಶ್ರೀಗುರುಮೂರ್ತಿಯಾಗಿಪ್ಪನು. ಭ್ರೂಮಧ್ಯದಲ್ಲಿ ಪರಂಜ್ಯೋತಿರ್ಲಿಂಗಮೂರ್ತಿಯಾಗಿಪ್ಪನು. `ಪರಾತ್ಪರಂ ಪರಂಜ್ಯೋತಿಭ್ರ್ರೂಮಧ್ಯೇ ತು ವ್ಯವಸ್ಥಿತಂ ಎಂದುದಾಗಿ. ಹೃದಯಸ್ಥಾನದಲ್ಲಿ ಪ್ರಾಣಲಿಂಗವು ಜಂಗಮಲಿಂಗವಾಗಿ ಸಕಲವ್ಯಾಪಾರನಾಗಿಪ್ಪನು. `ಹೃದಯಸ್ಯ ಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ' ಬ್ರಹ್ಮರಂಧ್ರದಲ್ಲಿ ಲಿಂಗಮೂರ್ತಿ ಪರಮಾತ್ಮ, ಭ್ರೂಮಧ್ಯದಲ್ಲಿ ಲಿಂಗಮೂರ್ತಿ ಅಂತರಾತ್ಮ, ಹೃದಯದಲ್ಲಿ ಜಂಗಮಮೂರ್ತಿ ಜೀವಾತ್ಮ, ಬಹಿರಂಗದಲ್ಲಿ ದೀಕ್ಷೆಗೆ ಗುರು, ಪೂಜೆಗೆ ಲಿಂಗ, ಶಿಕ್ಷೆಗೆ ಜಂಗಮ. `ಏಕಮೂರ್ತಿಸ್ತ್ರಿಧಾ ಭೇದಃ' ಎಂದುದಾಗಿ ಅಂತರಂಗ ಬಹಿರಂಗ ಸಕಲ ನಿಷ್ಕಲವೆಲ್ಲವೂ ಏಕೀಭವಿಸಿ `ಇಷ್ಟಂ ಪ್ರಾಣಸ್ತಥಾ' ಎಂದುದಾಗಿ ಲಿಂಗವಾಗಿ ಪೂಜೆಗೊಳ್ಳುತ್ತಿದ್ದಾನು. ಇದು ಕಾರಣ, ಸಕಲತತ್ತ್ವ ಸರ್ವಕಾರಣವಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗಿನಾ ಸಹವರ್ತಿತ್ವಂ ಲಿಂಗಿನಾ ಸಹ ವಾದಿತಾ ಲಿಂಗಿನಾ ಸಹಚಿಂತಾ ಚ ಲಿಂಗಯೋಗೋ ನ ಸಂಶಯಃ ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ಮರ್ಮವನು ಶಿವಲಿಂಗದ ನಿಶ್ಚಯವನು ಇದಾರಯ್ಯ ಬಲ್ಲವರು ? ಆರಯ್ಯ ಅರಿವವರು, ಶ್ರೀಗುರು ಕರುಣಿಸಿ ತೋರಿ ಕೊಡದನ್ನಬರ ? `ಸರ್ವೈಶ್ವರ್ಯಸಂಪನ್ನಃ ಸರ್ವೇಶತ್ವಸಮಾಯುತಃ' ಎಂದುದಾಗಿ, `ಅಣೋರಣೀಯಾನ್ ಮಹತೋ ಮಹಿಮಾನ್' ಎಂದುದಾಗಿ, `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂದುದಾಗಿ, ವೇದಪುರುಷರಿಗೂ ಅರಿಯಬಾರದು, ಅರಿಯಬಾರದ ವಸ್ತುವ ಕಾಣಿಸಬಾರದು, ಕಾಣಿಸಬಾರದ ವಸ್ತುವ ರೂಪಿಸಲೆಂತೂ ಬಾರದು, ರೂಪಿಸಬಾರದ ವಸ್ತುವ ಪೂಜಿಸಲೆಂತೂ ಬಾರದು. ಪೂಜೆಯಿಲ್ಲಾಗಿ ಭಕ್ತಿ ಇಲ್ಲ, ಭಕ್ತಿ ಇಲ್ಲಾಗಿ ಪ್ರಸಾದವಿಲ್ಲ, ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಮುಕ್ತಿ ಇಲ್ಲಾಗಿ ದೇವದಾನವಮಾನವರೆಲ್ಲರೂ ಕೆಡುವರು. ಕೆಡುವವರನು ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು ಮದ್ಗುರು ಶ್ರೀಗುರು. `ನ ಗುರೋರಧಿಕಂ ನ ಗುರೋರಧಿಕಂ ಎಂದುದಾಗಿ, ಮಹಾಗುರು ಶಾಂತಮೂರ್ತಿ ಕೃಪಾಮೂರ್ತಿ ದಯಾಮೂರ್ತಿ ಲಿಂಗಪ್ರತಿಷೆ*ಯ ಮಾಡಿದನು. ಅದೆಂತೆನಲು ಕೇಳಿರೆ : ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಸಹ ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಸದ್ಗುರೋರ್ಭಾವಲಿಂಗಂ ತು ಸರ್ವಬ್ರಹ್ಮಾಂಡಗಂ ಶಿವಂ ಸರ್ವಲೋಕಸ್ಯ ತ್ರಾಣತ್ವಾತ್ ಮುಕ್ತಿಕ್ಷೇತ್ರಂ ತದುಚ್ಯತೇ ಎಂದುದಾಗಿ, `ಗುರುಣಾ ದೀಯತೇ ಲಿಂಗಂ' ಸರ್ವಲೋಕಕ್ಕೆಯೂ ಸರ್ವರಿಗೆಯೂ ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು ಅರೂಪೇ ಭಾವನಂ ನಾಸ್ತಿ ಯದ್ದೃಶ್ಯಂ ತದ್ವನಶ್ಯತಿ ಅದೃಶ್ಯಸ್ಯ ತು ರೂಪತ್ವೇ ಸಾದಾಖ್ಯಮಿತಿ ಕಥ್ಯತೇ ಎಂದುದಾಗಿ, ನಿಷ್ಕಳರೂಪ ನಿರವಯ ಧ್ಯಾನಪೂಜೆಗೆ ಅನುವಲ್ಲ. ಸಕಲತತ್ತ್ವ ಸಾಮಾನ್ಯವೆಂದು `ಸಕಲಂ ನಿಷ್ಕಲಂ ಲಿಂಗಂ ಎಂದುದಾಗಿ, `ಲಿಂಗಂ ತಾಪತ್ರಯಹರಂ ಎಂದುದಾಗಿ, `ಲಿಂಗಂ ದಾರಿದ್ರ್ಯನಾಶನಂ ಎಂದುದಾಗಿ, `ಲಿಂಗಂ ಪ್ರಸಾದರೂಪಂ ಚ ಲಿಂಗಂ ಸರ್ವಾರ್ಥಸಾಧನಂ ಎಂದುದಾಗಿ, `ಲಿಂಗಂ ಪರಂಜ್ಯೋತಿಃ ಲಿಂಗಂ ಪರಬ್ರಹ್ಮಂ ಎಂದುದಾಗಿ, ಲಿಂಗವನು ಪೂಜಿಸಿ ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು ಮಹಾದಾನಿ ಗುರುಲಿಂಗವು ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಸರ್ವೇ ಲಿಂಗಾರ್ಚನಂ ಕೃತ್ವಾ ಜಾತಾಸ್ತೇ ಲಿಂಗಪೂಜಕಾಃ ಗೌರೀಪತಿರುಮಾನಾಥೋ ಅಂಬಿಕಾಪಾರ್ವತೀ ಪತಿಃ ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ ಎಂದುದಾಗಿ, ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು ಬ್ರಹ್ಮವಿಷ್ಣ್ವಾದಿ ದೇವದಾನವಮಾನವರುಗಳು ಮಹಾಲಿಂಗವ ಧ್ಯಾನಿಸಿ ಪೂಜಿಸಿ ಪರಮಸುಖ ಪರಿಣಾಮವ ಪಡೆಯಲೆಂದು ಮಾಡಿದನು ಕೇವಲ ಸದ್ಭಕ್ತಜನಕ್ಕೆ. `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಏಕಂ' ಎಂದುದಾಗಿ, ಆ ಸದ್ಗುರು, ಆ ಪರಶಿವನನು ಆ ಸತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷೆ*ಯ ಮಾಡಿ ಪ್ರಾಣಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. `ಏಕಮೂರ್ತಿಸ್ತ್ರಿಧಾ ಭೇದೋ' ಎಂದುದಾಗಿ, ಶ್ರೀಗುರುಲಿಂಗ ಪರಶಿವಲಿಂಗ ಜಂಗಮಲಿಂಗ ಒಂದೇ; `ದೇಶಿಕಶ್ಯರಲಿಂಗೇ ಚ ತ್ರಿವಿಧಂ ಲಿಂಗಮುಚ್ಯತೇ' ಎಂದುದಾಗಿ, ಲಿಂಗದ ಮರ್ಮವನು, ಲಿಂಗದ ಸಂಜ್ಞೆಯನು, ಲಿಂಗದ ನಿಶ್ಚಯವನು ಆದಿಯಲ್ಲೂ ಧ್ಯಾನ ಪೂಜೆಯ ಮಾಡಿದವರನೂ ಭಕ್ತಿಪ್ರಸಾದ ಮುಕ್ತಿಯ ಪಡೆದವರನೂ ವೇದ ಶಾಸ್ತ್ರ ಪುರಾಣ ಆಗಮಂಗಳು ಹೇಳುತ್ತಿವೆ, ಶಿವನ ವಾಕ್ಯಂಗಳಿವೆ. ಇದು ನಿಶ್ಚಯ, ಮನವೇ ನಂಬು ಕೆಡಬೇಡ. ಮಹಾಸದ್ಭಕ್ತರನೂ ನಂಬುವುದು, ಶಿವಲಿಂಗಾರ್ಚನೆಯ ನಿರಂತರ ಮಾಡುವುದು, ಇದು ನಿಶ್ಚಯ, ಶಿವನು ಬಲ್ಲನಯ್ಯಾ. ಈ ಕ್ರೀಯಲ್ಲಿ ಲಿಂಗವನರಿದು ವಿಶ್ವಾಸಂ ಮಾಡಿ ಕೇವಲ ಸದ್ಭಕ್ತಿಯಿಂದ ಪೂಜಿಸುವುದು ನಿರ್ವಂಚಕತ್ವದಿಂದ ತನು ಮನ ಧನವನರ್ಪಿಸುವುದು, ಕ್ರೀಯರಿದು ಮರ್ಮವರಿದು ಸದ್ಭಾವದಿಂ ಲಿಂಗಾರ್ಚನೆಯಂ ಮಾಡುವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಬಸವಣ್ಣನಿಂದ ಗುರುಪ್ರಸಾದಿಯಾದೆನು. ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆನು. ಪ್ರಭುದೇವರಿಂದ ಜಂಗಮಪ್ರಸಾದಿಯಾದೆನು. ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು. ಇಂತೀ ಚತುರ್ವಿಧವು ಏಕೀಭವಿಸಿ ಪ್ರಾಣಲಿಂಗವಾದ ಮಹಾಮಹಿಮಂಗೆ ಶರಣೆಂದು ಬದುಕಿದೆನಯ್ಯಾ ದಾಸಯ್ಯಪ್ರಿಯ ರಾಮನಾಥ.
--------------
ದುಗ್ಗಳೆ
`ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂದೆನಿಸುವ ಲಿಂಗವು, `ಅತ್ಯತಿಷ*ದ್ಧಶಾಂಗುಲಂ' ಎಂದೆನಿಸುವ ಲಿಂಗವು, `ಚಕಿತಮಭಿದತ್ತೇ ಎಂದೆನಿಸುವ ಲಿಂಗವು, `ಅಣೋರಣೀಯಾನ್ ಮಹತೋ ಮಹೀಯಾನ್' ಎಂದೆನಿಸುವ ಲಿಂಗವು, `ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ ಎಂದೆನಿಸುವ ಲಿಂಗವು, `ಏಕಮೂರ್ತಿಸ್ತ್ರಿಧಾ ಭೇದಾಃ' ಎಂದೆನಿಸಿ ಶ್ರೀಗುರುಲಿಂಗಜಂಗಮರೂಪಾಗಿ, `ಇಷ್ಟಂ ಪ್ರಾಣಿಸ್ತಥಾ ಭಾವಸ್ತ್ರಿಧಾ ಚೈಕಂ ವರಾನನೇ' ಎಂದುದಾಗಿ ತ್ರಿವಿಧ ಏಕೀಭವಿಸಿ ಲಿಂಗರೂಪಾಗಿ, ಎನ್ನ ಕರಸ್ಥಲಕ್ಕೆ ಬಂದು ಕರತಳಾಮಳಕದಂತೆ ತೋರುವೆ. ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ, ಆಹಾ ಎನ್ನ ಪುಣ್ಯವೇ, ಆಹಾ ಎನ್ನ ಭಾಗ್ಯವೇ, ಶಿವ ಶಿವ ಮಹಾದೇವ ! ನೀನೇ ಬಲ್ಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಯ್ಯಾ, ಗುರುವೆಂಬ ಮಹಾಜ್ವಾಲೆಯಲ್ಲಿ ದಹನವಾದೆ ಬಸವಾಕ್ಷರವೆಂಬ ಮರುಜೇವಣಿಯಲ್ಲಿ ಭವಿಸದೆ ಉಂಡೆ ನಾನು ಶಿಶುವಾಗಿ ಶುದ್ಧಸಿದ್ಧ ಪ್ರಸಿದ್ಧವೆಂಬ ಪ್ರಸಾದತ್ರಯ ಏಕೀಭವಿಸಿ ಕೊಂಡೆ ಎನಗಿನ್ನರಿಲ್ಲ. ನೀನೊಟ್ಟಿತ್ತೆ ಮಾರಿದ ಮಾರಿಂಗೆ ಸಂದೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ವರ್ಮವನು ವಲಿಂಗದ ನಿಶ್ಚಯನು ಅದಾರಯ್ಯಾ ಬಲ್ಲವರು ? ಅದಾರಯ್ಯಾ ಅರಿದವರು, ಶ್ರೀಗುರು ತೋರಿ ಕೊಡದನ್ನಕ್ಕರ. `ಸರ್ವೈಶ್ವರ್ಯಸಂಪನ್ನಂ ಮಧ್ಯಧ್ರುವ ತತ್ವಾಧಿಕಂ ಎಂದುದಾಗಿ`ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ `ಯತೋ ವಾಚೋ ನಿವರ್ತಂತೇ' ಎಂದುದಾಗಿ, `ಅತ್ಯತಿಷ*ದ್ದಶಾಂಗುಲಮ್' ಎಂದುದಾಗಿ, ಈ ಪ್ರಕಾರದಲ್ಲಿ ವೇದಾಗಮಂಗಳು ಸಾರುತ್ತಿರಲು, ಲಿಂಗವನು ಹರಿಬ್ರಹ್ಮಾದಿ ದೇವದಾನವ ಮಾನವರಿಗೆಯು ಅರಿಯಬಾರದು. `ಚಕಿತಮಭಿದತ್ತೇ ಶ್ರುತಿರಪಿ ಎಂದುದಾಗಿ ವೇದ ಪುರುಷರಿಗೆಯು ಅರಿಯಬಾರದು. ಅರಿಯಬಾರದ ವಸ್ತುವ ರೂಪಿಸಲೆಂತೂ ಬಾರದು. ರೂಪಿಸಬಾರದ ವಸ್ತುವ ಪೂಜಿಸಲೆಂತುಬಹುದು ? ಪೂಜೆಗಿಲ್ಲವಾಗಿ ಭಕ್ತಿಗಿಲ್ಲ, ಭಕ್ತಿಗಿಲ್ಲವಾಗಿ ಪ್ರಸಾದಕ್ಕಿಲ್ಲ, ಪ್ರಸಾದಕ್ಕಿಲ್ಲವಾಗಿ ಮುಕ್ತಿಗಿಲ್ಲ. ಮುಕ್ತಿಗಿಲ್ಲದೆ ದೇವದಾನವ ಮಾನವರೆಲ್ಲರು ಕೆಡುವರು ಕೆಡುವರು. ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು, ಮಹಾಗುರು, ಶ್ರೀಗುರು. `ನ ಗುರೋರಧಿಕಂ' ಎಂದುದಾಗಿ ಮಹಾಗುರು ಶಾಂತಮೂರ್ತಿ ಕೃಪಾಮೂರ್ತಿ ಲಿಂಗ ಪ್ರತಿಷೆ*ಯಂ ಮಾಡಿದನು. ಅದೆಂತೆನಲು ಕೇಳಿರೆ: ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಸದ್ಗರೋರ್ಲಿಂಗಭಾವಂ ಚ ಸರ್ವ ಬ್ರಹ್ಮಾಂಡವಾಸಿನಾಂ ಸರ್ವಲೋಕಸ್ಯ ವಾಸಸ್ಯ ಮುಕ್ತಿಕ್ಷೇತ್ರ ಸುವಾಸಿನಾಂ ಎಂದುದಾಗಿ, ಸದ್ಗರೋರ್ದೀಯತೇ ಲಿಂಗಂ ಸದ್ಗುರೋರ್ದೀಯತೇ ಕ್ರಿಯಾ ಸದ್ಗುರೋರ್ದೀಯತೇ ಮಂತ್ರಂ ಸದ್ಗುರುಸ್ಸರ್ವಕಾರಣಂ ಎಂದುದಾಗಿ, ಸರ್ವಲೋಕಕ್ಕೆಯು ಸರ್ವರಿಗೆಯು ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು. ಅರೂಪೇ ಭಾವನೋ ನಾಸ್ತಿ ಯದೃಷ್ಟಂ ತದ್ವಿನಶ್ಯತಿ ದೃಶ್ಯಾದೃಶ್ಯ ಸ್ವರೂಪತ್ವಂ ತಥಾಪ್ಯೇವಂ ಸದಾಭ್ಯಸೇತ್ ಎಂದುದಾಗಿ, ನಿಃಕಲ ಅರೂಪ ನಿರವಯ ಧ್ಯಾನಪೂಜೆಗನುವಲ್ಲ, ಸಕಲ ತತ್ವಸಾಮಾನ್ಯನೆಂದು ಸಕಲನಿಷ್ಕಲವನೊಂದಡಗಿ ಮಾಡಿದನು. ಲಿಂಗಂ ತಾಪತ್ರಯಹರಂ ಲಿಂಗಂ ದಾರಿದ್ರ್ಯನಾಶನಂ ಲಿಂಗಂ ಪಾಪವಿನಾಶಂ ಚ ಲಿಂಗಂ ಸರ್ವತ್ರ ಸಾಧನಂ ಎಂದುದಾಗಿ, ಲಿಂಗವು ಪರಂಜ್ಯೋತಿ ಲಿಂಗವು ಪರಬ್ರಹ್ಮವೆಂದು ಲಿಂಗವನೆ ಪೂಜಿಸಿ, ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು ಮಹಾಘನ ಗುರು ಲಿಂಗಪ್ರತಿಷೆ*ಯ ಮಾಡಿ ತೋರಿಕೊಟ್ಟನು. ಅದೆಂತೆಂದಡೆ_ ಬ್ರಹ್ಮಾವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಸರ್ವೇ ಲಿಂಗಾರ್ಚನಾರತಾ ಜಾತಾಸ್ತೇ ಲಿಂಗಪೂಜಕಾಃ ಮತ್ತಂ_ ಗೌರೀಪತಿರುಮಾನಾಥೋ ಅಂಬಿಕಾ ಪಾರ್ವತೀಪತಿಃ ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ ಎಂದುದಾಗಿ, ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು ವಿಷ್ಣ್ವಾದಿ ದೇವದಾನವ ಮಾನವಾದಿಗಳು ಮಹಾಲಿಂಗವನೆ ಧ್ಯಾನಿಸಿ, ಪೂಜಿಸಿ, ಪರಮ ಸುಖಪರಿಣಾಮವ ಹಡೆದರೆಂದು ಮಾಡಿದನು, ಕೇವಲ ಸದ್ಭಕ್ತ ಜನಂಗಳಿಗೆ. ಅದೆಂತೆಂದಡೆ_ `ಇಷ್ಟಂ ಪ್ರಾಣಂ ತಥಾ ಭಾವಂ ತ್ರಿಧಾ ಏಕಂ ವರಾನನೇ' ಎಂದುದಾಗಿ, ಆ ಸದ್ಗುರು ಆ ಪರಶಿವನನು ತತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷೆ*ಯಂ ಮಾಡಿ, ಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು, ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. ಮತ್ತಂ `ಏಕಮೂರ್ತಿಸ್ತ್ರಿಧಾ ಭೇದಃ' ಎಂದುದಾಗಿ, ಗುರುಲಿಂಗ ಜಂಗಮಲಿಂಗ ಪರಶಿವಲಿಂಗ ಒಂದೆ. `ದೇಶಿಕಶ್ಚರಲಿಂಗಂ ಚ ತ್ರಿವಿಧಂ ಲಿಂಗಮುಚ್ಯತೇ' ಎಂದುದಾಗಿ, ಲಿಂಗದ ವರ್ಮವನು ಲಿಂಗದ ಸ್ವರೂಪವನು ಲಿಂಗದ ನಿಶ್ಚಯವನು ಆದಿಯಲ್ಲು ಧ್ಯಾನಪೂಜೆಯ ಮಾಡಿದವರನು, ಭಕ್ತಿಪ್ರಸಾದ ಮುಕ್ತಿಯ ಪಡೆದವರನು ವೇದ ಶಾಸ್ತ್ರ ಪುರಾಣಾಗಮಂಗಳು ಹೇಳುತ್ತಿವೆ. ಶಿವನ ವಾಕ್ಯಂಗಳಿಗಿದೆ ದಿಟ. ಮನವೆ ನಂಬು, ಕೆಡಬೇಡ ಕೆಡಬೇಡ, ಮಹಾಸದ್ಭಕ್ತರ ನಂಬುವುದು, ಶಿವಲಿಂಗಾರ್ಚನೆಯ ನಿರಂತರ ಮಾಡುವುದು. ಇದು ನಿಶ್ಚಯವ ಶಿವನು ಬಲ್ಲನಯ್ಯ. ಈ ಕ್ರಿಯೆಯಲ್ಲಿ ಲಿಂಗಜಂಗಮನರಿತು, ವಿಶ್ವಾಸಮಂ ಮಾಡಿ, ಕೇವಲ ಸದ್ಭಕ್ತಿ ಕ್ರೀಯನರಿದು, ವರ್ಮವನರಿದು, ಸದ್ಭಾವದಿಂದ ಲಿಂಗಾರ್ಚನೆಯಂ ಮಾಡುವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನು ಮುಕ್ತಿಯೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಪ್ರಸಾದಲಿಂಗ ಸಾಹಿತ್ಯವಾದುದಿಲ್ಲ. ಇನ್ನು ಪರವೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಜಂಗಮಲಿಂಗ ಸಾಹಿತ್ಯವಾದುದಿಲ್ಲ. ಇನ್ನು ಲಿಂಗವ ಬೆರಸೇನೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಶಿವಲಿಂಗವು ಸಾಹಿತ್ಯವಾದುದಿಲ್ಲ. ಇನ್ನು ವಿಶೇಷತ್ವವುಂಟೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಶ್ರೀಗುರುಲಿಂಗವು ಸಾಹಿತ್ಯವಾದುದಿಲ್ಲ. ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಈ ಚತುರ್ವಿಧವು ಏಕೀಭವಿಸಿ ಮಹಾಲಿಂಗವಾದ ಮಹಾಮಹಿಮಂಗೆ ಇನ್ನು ಕಾಮಿಸಲಿಲ್ಲ ಕಲ್ಪಿಸಲಿಲ್ಲ ಭಾವಿಸಲಿಲ್ಲ ಚಿಂತಿಸಲಿಲ್ಲ. ಆತ ನಿಶ್ಚಿಂತ ಪರಮಸುಖಿ ಪರಿಣಾಮಿ, ಆತನಿದ್ದುದೆ ಕೈಲಾಸ, ಆತ ಸರ್ವಾಂಗಲಿಂಗಿ, ಕೂಡಲಚೆನ್ನಸಂಗಯ್ಯಾ
--------------
ಚನ್ನಬಸವಣ್ಣ
ಲಿಂಗವಂತನು ಲಿಂಗಾಚಾರ, ಸದಾಚಾರ, ಭೃತ್ಯಚಾರ, ಗಣಾಚಾರ, ಶಿವಾಚಾರ, ಸರ್ವಾಚಾರಸಂಪನ್ನನೆನಿಸಿಕೊಳಬಹುದಲ್ಲದೆ ಭಕ್ತನೆನಿಸಿಕೊಳಬಾರದು. ಅನೇಕ ವ್ರತನಿಯಮಂಗಳ ಹಿಡಿದು ನಡೆದು ವ್ರತಸ್ಥನೆನಿಸಿಕೊಳಬಹುದಲ್ಲದೆ ಭಕ್ತನೆನಿಸಿಕೊಳಬಾರದು. ಕರುಣಿ ಶಾಂತ ನಿಸ್ಪೃಹನೆನಿಸಿಕೊಳಬಹುದಲ್ಲದೆ ಭಕ್ತನೆನಿಸಿಕೊಳಬಾರದು. ತನುವ ಕೊಟ್ಟು, ಮನವ ಕೊಟ್ಟು, ಧನವ ಕೊಟ್ಟು ದಾತೃವೆನಿಸಿಕೊಳಬಹುದಲ್ಲದೆ. ಭಕ್ತನೆನಿಸಿಕೊಳಬಾರದು. `ಏಕ ಮೂರ್ತಿಸ್ತ್ರಿಧಾ ಭೇದಾ' ಎಂಬ ಕ್ರಿಯೆಯಲ್ಲಿ ಶ್ರೀಗುರುಲಿಂಗಜಂಗಮವೊಂದೆಯೆಂದು ಸದ್ಭಾವದಿಂ ತ್ರಿವಿಧದಲ್ಲಿ, ಆ ಮುಖವೊಂದೊಂದರಲ್ಲಿ ತ್ರಿವಿಧವನೂ ಏಕೀಭವಿಸಿ ಕಂಡು ಕಾಲಕರ್ಮಕಲ್ಪಿತ ಉಪಾಧಿರಹಿತನಾಗಿ ಆ ವಸ್ತುಗಳ ಮನೋವಾಕ್ಕಾಯದಲ್ಲಿ ಇಚ್ಚೈಸುತ್ತಂ ತನ್ನ ಮನೋವಾಕ್ಕಾಯದಲ್ಲಿ ತಡವಿಲ್ಲದೆ [ನೆಲೆಗೊಳಿಸಬೇಕು] `ನ ಗುರೋರಧಿಕಂ `ಗುರುಣಾ ದೀಯತೇ ಲಿಂಗಂ `ಗುರುಃ ಪಿತಾ ಗುರುರ್ಮಾತಾ ಎಂದುದಾಗಿ, ದೀಕ್ಷಾಮೂರ್ತಿರ್ಗುರುರ್ಲಿಗಂ ಪೂಜಾಮೂರ್ತಿಸ್ಸದಾಶಿವಃ ಶಿಕ್ಷಾಮೂರ್ತಿಶ್ಚರಸ್ತಸ್ಮಾತ್ ಏವಂ ಭೇದತ್ರಯೋ ಭವೇತ್ ದೀಕ್ಷಾ ಪೂಜಾ ಚ ಶಿಕ್ಷಾ ಚ ಸರ್ವಕರ್ತಾ ಚ ಜಂಗಮಃ ಎಂದುದಾಗಿ, `ಭಕ್ತ್ಯಾಪೂಜಾಂ ಅಹಂ ಕರ್ತಾ' `ನಿಷ್ಪ್ರಪಂಚೋ ನಿರಾಮಯಃ' ಎಂದುದಾಗಿ, ಪ್ರಪಂಚಯುಕ್ತೋ ದಾಸೋಹೀ ನಿಷ್ಪ್ರಪಂಚೋ ಹಿ ಜಂಗಮಃ ಪ್ರಪಂಚಯುಕ್ತೋ ಭಕ್ತಸ್ಸ್ಯಾತ್ ನಿಷ್ಪ್ರಪಂಚೋ ಹಿ ಜಂಗಮಃ ಎಂದುದಾಗಿ, ಸರ್ವಶಕ್ತಿಮಯಃ ಪ್ರೋಕ್ತಃ ಪುರುಷ ಏಕಶ್ಶಿವಸ್ತಧಾ ಭಕ್ತಿಪ್ರಸನ್ನಸ್ಸರ್ವೇಷಾಂ ಯಥಾ ಭಕ್ತಿಸ್ತಥಾ ಶಿವಃ ಸಕಲಶ್ಶಕ್ತಿರೂಪಶ್ಚ ಶಿವ ಏಕೋ ನಿಷ್ಕಲಸ್ತಥಾ ಶಕ್ತ್ಯಧೀನಃ ಪ್ರಪಂಚಸ್ಸ್ಯಾದ್ಯಥಾಭಕ್ತಿಸ್ಸ್ತಥಾ ಶಿವಃ ಗುರುಣಾ ಭಾವಿತಂ ಲಿಂಗಂ ಏಕಮೇವಾದ್ವಿತೀಯಕಂ ತಲ್ಲಿಂಗಸ್ಯ ಪ್ರಭಾ ಲಿಂಗಂ ಸರ್ವಲಿಂಗಂ ನ ಸಂಶಯಃ `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂದುದಾಗಿ, `ಏವ ಏಕೋ ಧ್ಯೇಯಃ' ಎಂದುದಾಗಿ `ಅಣೋರಣೀಯಾನ್ಮಹತೋ ಮಹೀಯಾನ್' ಎಂದುದಾಗಿ ಸರ್ವಶಕ್ತಿಮಯಂ ಪ್ರೋಕ್ತಂ ಪುರುಷಮೇಕಂ ಶಿವಸ್ತಥಾ ಯಥಾ ಶಕ್ತಿಶ್ಚ ಸಂಯೋಗಂ ತಥಾ ತತ್ತ್ವಂ ಪರಶ್ಶಿವಃ ಸರ್ವೇಷಾಂ ಶಕ್ತಿರೂಪಂ ಚ ಪುರುಷಾದ್ವೈತಂ ಪರಶಿವಃ ಯಥಾಶಕ್ತಿಸ್ಸ್ತಥಾ ಪುರುಷ ಏಕ ರುದ್ರ ಇತಿ ಸ್ಮೃತಃ ಎಂದುದಾಗಿ, ಯಸ್ಯ ಚಿತ್ತಂ ಶಿವೇ ಲೀನಂ ತಸ್ಯ ಜಾತ್ಯಾದಿ ನ ಸ್ಮರೇತ್ ಶಿವಲಿಂಗೇ ಶಿಲಾಬುದ್ಧಿಂ ಕುರ್ವಾಣ ಇವ ಪಾತಕೀ ಸತ್ಯಭಾವಿ ಮಹತ್ಸತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ ನಿತ್ಯಭಾವಿ ಮಹನ್ನಿತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ ನಾನಾರೂಪಧರೋ ದೇವೋ ನಾನಾರೂಪಸಮನ್ವಿತಃ ನಾನಾಚಿಹ್ನಸಮೋಪೇತೋ ನಾನಾಲೀಲಾಧರೋ ಹರಃ ವೇದಾತೀತಂ ಮನೋತೀತಮಾಗಮಾತೀತಮಾರ್ಗಿಕಂ ಶಾಸ್ತ್ರಾತೀತಂ ಮಹಾಶಾಸ್ತ್ರೀ ತತ್ಸ್ಯಾಜ್ಜಂಗಮಲಕ್ಷಣಂ ಲಿಂಗಧಾರೀ ಮಹಾಲಿಂಗೀ ಲಿಂಗಧ್ಯಾನೀ ನಿರಂತರಂ ಲಿಂಗಾಲಿಂಗೀ ಮಹತ್ಸಂಗೀ ತತ್ಸ್ಯಾಜ್ಜಂಗಮಲಕ್ಷಣಂ ಜಂಗಮೋ ಜಂಗಮಂ ದಃಷ್ಟ್ವಾ ನಮಸ್ಕಾರಂ ತು ಸಂಭ್ರಮಾತ್ ಆಲಿಂಗನಂ ಮಹಾಪ್ರೀತ್ಯಾ ಕುರ್ಯಾಜ್ಜಂಗಮಲಕ್ಷಣಂ ಭೃತ್ಯಪೂಜಾರ್ಹಕರ್ತಾ ಚ ದೀಕ್ಷಾಮೂರ್ತಿರ್ಮಹಾಪ್ರಭುಃ ಶಿಕ್ಷಾಮೂರ್ತಿರ್ಮಹಾಕರ್ತಾ ತತ್ಸ್ಯಾಜ್ಜಂಗಮಲಕ್ಷಣಂ ಸರ್ವಸಂಗಪರಿತ್ಯಾಗೀ ಲಿಂಗಸಂಗೀ ನಿರಂತರಂ ದ್ವಂದ್ವೇ ತು ಸಮದೃಷ್ಟಿಸ್ಸ್ಯಾತ್ ತತ್ಸ್ಯಾಜ್ಜಂಗಮಲಕ್ಷಣಂ ಘೃಣಾದೃಷ್ಟಿರ್ಘೃಣಾವಾಕ್ಯಂ ಘೃಣಾಮೂರ್ತಿರ್ನಿರಂತರಂ ಕ್ರಿಯಾಕರ್ಮಸು ವಿಜ್ಞಶ್ಚ ಶಿಕ್ಷಾಚಾರ್ಯ ಇತಿ ಸ್ಮೃತಃ ಮೂರ್ತಿಶ್ಚ ಲಿಂಗಮೂರ್ತಿಶ್ಚ ಸುಶೀಲಂ ಲಿಂಗಶೀಲವತ್ ಗುಣಂ ಸರ್ವಸ್ಯ ಲಿಂಗಸ್ಯ ತತ್ಸ್ಯಾಜ್ಜಂಗಮಲಕ್ಷಣಂ ಎಂದುದಾಗಿ, ಹನ್ಯಾತ್‍ಕ್ರುದ್ಧೋಪಿ ಚಾಕಾಶಂ ಕ್ಷುಧಾರ್ತಾ ಖಾದಯೇತ್ತುಷಂ ತ್ಯಕ್ತ್ವಾ ಲಿಂಗಾರ್ಚನಂ ಮೂಢೋ ಮುಕ್ತ್ಯರ್ಥೀ ತ್ರಿತಯಂ ವೃಥಾ ಶ್ವಪಚೋ[s]ಪಿ ಮುನಿಶ್ರೇಷ*ಃ ಶಿವಭಕ್ತೋ ದ್ವಿಜಾಧಿಕಃ ಶಿವಭಕ್ತಿವಿಹೀನಸ್ತು ದ್ವಿಜೋ[s]ಪಿ ಶ್ವಪಚಾಧಮಃ ಸ ಲಿಂಗೀ ಸರ್ವದೈವಜ್ಞೋ ಯಸ್ಸ ಚಾಂಡಾಲವದ್ಭುವಿ ಲಿಂಗಾರ್ಚಕಸ್ತು ಶ್ವಪಚೋ ದ್ವಿಜಕೋಟ್ಯಾ ವಿಶಿಷ್ಯತೇ ಶಿವಧರ್ಮೇ, ಉಪನೀತಸಹಸ್ರೇಭ್ಯೋ ಬ್ರಹ್ಮಚಾರೀ ವಿಶಿಷ್ಯತೇ ಬ್ರಹ್ಮಚಾರಿಸಹಸ್ರೇಭ್ಯೋ ವೇದಾಧ್ಯಾಯೀ ವಿಶಿಷ್ಯತೇ ವೇದಾಧ್ಯಾಯಿಸಹಸ್ರೇಭ್ಯಸ್ಸಾಗ್ನಿಹೊತ್ರೀ ವಿಶಿಷ್ಯತೇ ಅಗ್ನಿಹೋತ್ರಿಸಹಸ್ರೇಭ್ಯೊ ಯಜ್ಞಯಾಜೀ ವಿಶಿಷ್ಯತೇ ಯಜ್ಞಯಾಜಿಸಹಸ್ರೇಭ್ಯಃ ಸತ್ರಯಾಜೀ ವಿಶಿಷ್ಯತೇ ಸತ್ರಯಾಜಿಸಹಸ್ರೇಭ್ಯಃ ಸರ್ವವಿದ್ಯಾರ್ಥಪಾರಗಃ ಸರ್ವವಿದ್ಯಾರ್ಥವಿತ್ಕೋಟ್ಯಾ ಶಿವಭಕ್ತೋ ವಿಶಿಷ್ಯತೇ ಎಂದುದಾಗಿ, ನಿಕೃಷ್ಟಾಚಾರಜನ್ಮಾನೋ ವಿರುದ್ಧಾಲೋಕವೃತ್ತಿಷು ಕೋಟಿಭ್ಯೋ ವೇದವಿದುಷಾಂ ಶ್ರೇಷಾ* ಮದ್ಭಾವಭಾವಿತಾಃ ಎಂದುದಾಗಿ, ದೇಶಾಂತರ ಸಂಹಿತೆಯಲ್ಲಿ: ಕ್ರಿಮಿಕೀಟಪತಂಗೇಭ್ಯಃ ಪಶವಃ ಪ್ರಜ್ಞಯಾಧಿಕಾಃ ಪಶುಭ್ಯೋ[s]ಪಿ ನರಾಶ್ಯ್ರೇಷಾ*ಸ್ತೇಷು ಶ್ರೇಷಾ* ದ್ವಿಜಾತಯಃ ದ್ವಿಜಾತಿಷ್ವಧಿಕಾ ವಿಪ್ರಾ ವಿಪ್ರೇಷು ಕ್ರತುಬುದ್ಧಯಃ ಕ್ರತುಬುದ್ಧಿಷು ಕರ್ತಾರಸ್ತೇಭ್ಯಃ ಸನ್ಯಾಸಿನೋಡಿಧಿಕಾಃ ತೇಭ್ಯೋ ವಿಜ್ಞಾನಿನಃ ಶ್ರೇಷಾ*ಸ್ತೇಷು ಶಂಕರಪೂಜಕಾಃ ತೇಷು ಶ್ರೇಷಾ* ಮಹಾಭಾಗಾ ಮಮ ಲಿಂಗಾಂಗಸಂಗಿನಃ ಲಿಂಗಾಂಗಸಂಗಿಷ್ವಧಿಕಃ ಷಟ್‍ಸ್ಥಲಜ್ಞಾನವಾನ್ಪುಮಾನ್ ತಸ್ಮಾದಪ್ಯಧಿಕೋ ನಾಸ್ತಿ ತ್ರಿಷು ಲೋಕೇಷು ಸರ್ವದಾ ಎಂದುದಾಗಿ, ಭೋಗಮೂರ್ತಿರ್ಮಹಾಲಿಂಗಂ ಜಂಗಮಶ್ಚ ನ ಸಂಶಯಃ ಜಂಗಮೋ ಲಿಂಗರೂಪಂ ಚ ಸತ್ಯಂ ಸತ್ಯಂ ನ ಸಂಶಯಃ ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಆಚಾರಶ್ಚ ಗುರುರ್ಲಿಂಗಂ ಜಂಗಮಶ್ಚ ಪ್ರಸಾದಕಃ ಪಂಚವಕ್ತ್ರಸಮಾಯುಕ್ತಂ ಮಹಾಲಿಂಗಸ್ಯ ಲಕ್ಷಣಂ ಜಂಗಮೋ ಲಿಂಗಮಾಚಾರೋ ಮಹಾಲಿಂಗಂ ಗುರುಸ್ತದಾ ಪಂಚವಕ್ತ್ರಸಮಾಯುಕ್ತಃ ಪ್ರಸಾದೋ ಲಿಂಗಲಕ್ಷಣಂ ಆಚಾರೋ ಗುರುಲಿಂಗಂ ಚ ಮಹಾಲಿಂಗಪ್ರಸಾದಕಂ ಪಂಚವಕ್ತ್ರಸಮಾಯುಕ್ತಂ ಸತ್ಯಂ ಜಂಗಮಲಕ್ಷಣಂ ಪ್ರಸಾದೋ ಜಂಗಮಶ್ಚೈವ ಆಚಾರೋ ಗುರುದೇವ ಚ ಮಹಾಲಿಂಗಸಮಾಯುಕ್ತಂ ಶಿವಲಿಂಗಸ್ಯ ಲಕ್ಷಣಂ ಜ್ಞಾನಾಚಾರೋ ಮಹಾಲಿಂಗಂ ಶಿವಲಿಂಗಂ ಚ ಜಂಗಮಃ ಪಂಚವಕ್ತ್ರಸಮಾಯುಕ್ತಂ ಇತ್ಯೇತೇ ಗುರುಲಕ್ಷಣಂ ಮಹಾಲಿಂಗಂ ಪ್ರಸಾದಶ್ಚ ಜಂಗಮೋ ಗುರುಲಿಂಗಕಂ ಪಂಚವಕ್ತ್ರಸಮಾಯುಕ್ತ ಆಚಾರೋ ಲಿಂಗಲಕ್ಷಣಂ ಅಂಗಮಾಚಾರಮಾಶ್ರಿತ್ಯ ಆಚಾರಃ ಪ್ರಾಣಮಾಶ್ರಿತಃ ತತ್ಪ್ರಾಣೋ ಶಿವಲಿಂಗ ಚ ತಲ್ಲಿಂಗಂ ಜಂಗಮಾಶ್ರಿತಂ ಇಂತೆಂದುದಾಗಿ, ಕ್ಷಣದಲ್ಲಿ ಅರಿ ಲಿಂಗವನು, ಕ್ಷಣಾರ್ಧದಲ್ಲಿ ಲಿಂಗವೂ ನಿನ್ನರಿವ. ಕ್ಷಣಾರ್ಧದಲ್ಲಿ ಅರಿ ಭಕ್ತಕಾಯನೆಂದು. ಪ್ರಾಣಲಿಂಗವೆಂದರಿದು ಲಿಂಗವನು ಒಂದು ಕ್ಷಣದಲ್ಲಿ ಮರೆದಡೆ ಕ್ಷಣಾರ್ಧದಲ್ಲಿ ಮರೆದಡೆ, ನಿನ್ನನೂ ಅಜ್ಞಾನಿಯ ಮಾಡಿ ಆಯಸಂ ಬಡಿಸಿ ಆಸೆಗೆ ಒಪ್ಪಿಸಿ ಘಾಸಿಮಾಡದೆ ಬಿಡನು ಲಿಂಗವು. ಕ್ಷಣಾರ್ಧದಲ್ಲಿ ಸರ್ವಪ್ರಪಂಚವೆಲ್ಲವನೂ ಮರೆದು ನಿತ್ಯವಾಗಿ ಲಿಂಗವನರಿ ಮನವೆ. ನಿರಂತರ ಲಿಂಗದಲ್ಲಿದ್ದು ಲಿಂಗವ ಹಾ[ಡೆ] ಸುಖಿಯಪ್ಪೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆ ಸಾಕ್ಷಿ.
--------------
ಉರಿಲಿಂಗಪೆದ್ದಿ
-->