ಊರ ಮುಂದಳ ಕೇರಿಯಲ್ಲಿ ಐದು ಬೇರಿನ ಮರನ ಕಂಡೆನಯ್ಯ. ಆ ಮರಕ್ಕೆ ಏಳೆಂಟು ಎಲೆಗಳು ಇಪ್ಪವು ನೋಡಾ. ಹತ್ತು ವರ್ಣದ ಹಣ್ಣ ಸವಿದು, ಮೇರುವೆಯ ಪಟಕ ತೆಗೆದು, ಮಹಾಲಿಂಗದೊಳು ಬೆರೆದಿದ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
ಓಣಿಯೊಳಗೆ ಒಬ್ಬ ಬಾಣತಿ ಕುಳಿತು ಏಳೆಂಟನೆಣಿಸುತಿರ್ಪಳು ನೋಡಾ! ಆದಿಯಲ್ಲಿ ಒಬ್ಬ ಮೂರ್ತಿ ಬಂದು, ಏಳೆಂಟು ಕೆಡಿಸಿ ಆ ಬಾಣತಿಯ ಒಡಲ ಸೀಳಿ, ಶಿಶುವ ತಕ್ಕೊಂಡು ಸಾಸಿರಕಂಬದ ಮನೆಯೊಳಗಿಟ್ಟು ತಾನುತಾನಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
ಕಣ್ಣಿಲ್ಲದಂಧಕಂಗೆ ಮೂವರು ಮಕ್ಕಳು ಹುಟ್ಟಿ, ಏಳೆಂಟು ಕೋಣೆಗಳಲ್ಲಿ ಬಡಿದಾಡುತಿಪ್ಪರು ನೋಡಾ. ಇದು ಕಾರಣ, ಅಂಧಕಂಗೆ ಕಣ್ಣು ಬರಲೊಡನೆ ಮೂವರು ಮಕ್ಕಳು ಸತ್ತು, ಏಳೆಂಟು ಕೋಣೆಗಳು ಬಯಲಾದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.