ಮಾಯದ ಬೊಂಬೆಯ ಮಾಡಿ, ಕಂಗಳಿಗೆ ಕಾಮನ ಬಾಣವ ಹೂಡಿ,
ನಡೆನುಡಿಯೊಳಗೆ ರಂಜಕದ ತೊಡಿಗೆಯನೆ ತೊಡಿಸಿ,
ಮುಂದುಗಾಣಿಸದೆ, ಹಿಂದನರಸದೆ, ಲಿಂಗವ ಮರಹಿಸಿ,
ಜಂಗಮವ ತೊರೆಯಿಸಿ, ಸಂದೇಹದಲ್ಲಿ ಸತ್ತು ಹುಟ್ಟುವ
ಈ ಭವಬಂಧನಿಗಳೆತ್ತ ಬಲ್ಲರೋ ಈ ಶರಣರ ನೆಲೆಯ ?
ಅವರ ನೆಲೆ ತಾನೆಂತೆಂದಡೆ
ಹಿಂದನರಿದು, ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು,
ಜಗದ ಜಂಗುಳಿಗಳ ಹಿಂಗಿ, ಕಂಗಳ ಕರುಳನೆ ಕೊಯ್ದು,
ಮನದ ತಿರುಳನೆ ಹರಿದು, ಅಂಗಲಿಂಗವೆಂಬುಭಯವಳಿದು,
ಸರ್ವಾಂಗಲಿಂಗವಾಗಿ, ಮಂಗಳದ ಮಹಾಬೆಳಗಿನಲ್ಲಿ ಓಲಾಡುವ
ಶರಣರ ನೆಲೆಯ ಜಗದ ಜಂಗುಳಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?