ಶಿವಾಚಾರ ಘನವೆಂಬುದ ಕೇಳಿ, ಭವಿಜಾತವಳಿದು,
ಪುನರ್ಜಾತನಾಗಿ, ಅಂಗದ ಮೇಲೆ ಲಿಂಗವ ಧರಿಸಿ,
ಆ ಲಿಂಗಜಂಗಮವನಾರಾಧಿಸಿ, ಪ್ರಸಾದವ ಕೊಂಡು,
ಭಕ್ತರಾಗಿ ಮುಕ್ತಿಯ ಪಡೆದೆನೆಂಬವರ ಹೆದರಿಸಿ,
ಜರೆದು ಝಂಕಿಸಿ ಕೆಡೆನುಡಿದು, ಆಚಾರವ ಬಿಡಿಸಿ,
ಅವರ ಹಿಂದಣ ಭವಿಶೈವದೈವಂಗಳ ಹಿಡಿಸಿ,
ತಮ್ಮಂತೆ ನರಕದೊಳಗಾಳಬೇಕೆಂದು,
ನಿಮ್ಮ ಮುನ್ನಿನ ಹಿರಿಯರ ಬೆನ್ನಬಳಿವಿಡಿದು ಬಂದ
ಕುಲದೈವ ಮನೆದೈವ ಬಿಟ್ಟು,
ಈ ಲಿಂಗಜಂಗಮಭಕ್ತಿಯ ಮಾಡಬೇಡೆಂದು
ಹೇಳುವ ಕುನ್ನಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ.