ಬಲ್ಲೆನೆಂಬುವರ ಭ್ರಾಂತಿಗೊಳಗುಮಾಡಿತ್ತು ಮಾಯೆ,
ಅರಿಯೆನೆಂಬುವರ ಅನಂತಭವವ ಸುತ್ತಿಸಿತ್ತು ಸಂಸಾರಮಾಯೆ,
ವೀರರೆಂಬುವರ ಗಾರುಮಾಡಿತ್ತು ಮಾಯೆ,
ಧೀರನೆಂಬುವರ ಎದೆಯ ನಡುಗಿಸಿತ್ತು ಸಂಸಾರಮಾಯೆ,
ಯತಿಗಳೆಂಬುವರ ಏಡಿಶಾಡಿಕಾಡಿತ್ತು ಸಂಸಾರಮಾಯೆ,
ಜತಿಗಳೆಂಬುವರ ಜನ್ಮವ ಮೃತ್ಯುವಿಗೆ ಈಡುಮಾಡಿತ್ತು ಮಾಯೆ
ಸಿದ್ಧರೆಂಬುವರ ಬುದ್ಧಿಗೆಡಿಸಿತ್ತು ಸಂಸಾರಮಾಯೆ
ಸಾಧ್ಯರೆಂಬುವರ ಬೋಧೆಗೊಳಗುಮಾಡಿತ್ತು ಮಾಯೆ.
ಯತಿ ಸಿದ್ಧ ಸಾಧ್ಯರೆಂಬುವರ ಮತಿಭ್ರಷ್ಟರ ಮಾಡಿ ಕಾಡೂದದು.
ನೀನಿಕ್ಕಿದ ಸಂಸಾರಮಾಯದ ವಿಗಡ ಸರ್ವರ ಬಾಯಂ ಟೊಣೆದೆ
ಹೋಯಿತಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.