ಕ್ರಿಯಾಶಕ್ತಿ ಬ್ರಹ್ಮಂಗೆ ಹಿಂಗಿ,
ಇಚ್ಛಾಶಕ್ತಿ ವಿಷ್ಣುವಿಂಗೆ ಹಿಂಗಿ,
ಜ್ಞಾನಶಕ್ತಿ ರುದ್ರಂಗೆ ಹಿಂಗಿ,
ಉತ್ಪತ್ತಿ ಸ್ಥಿತಿ ಲಯವೆಂಬುದಕ್ಕೆ
ಮಾಯಾದೇವಿವೊಂದೆ ಗೊತ್ತಾಗಿ
ಬಲ್ಲ ಬಲ್ಲವರೆಲ್ಲರ ತನ್ನಲ್ಲಿಯೇ ಅಡಗಿಸುತ್ತ
ಅರಿದವರಿಗೆ ದೇವಿಯಾಗಿ,
ಮರೆದವರಿಗೆ ಮಾರಿಯಾಗಿ,
ಮೊರದೊಳಗೆ ಕೊಂಡು ಬಂದಿದ್ದೇನೆ.
ಮೊರಕ್ಕೆ ಮೂರು ಗೋಟು,
ತಾಯಿಗೆ ಅಯಿದು ಬಾಯಿ,
ಬೇಡುವಾತನ ಬಾಯಿವೊಂದೆಯಾಯಿತ್ತು.
ಡಕ್ಕೆಯ ದನಿಯ ಕೇಳಿ ಬೆಚ್ಚುವುದಕ್ಕೆ ಮುನ್ನವೆ
ಕಾಲಾಂತಕ ಭೀಮೇಶ್ವರಲಿಂಗವನರಿಯಿರಣ್ಣಾ.