ಗುರುಕಾರುಣ್ಯವ ಪಡೆದು
ಅಂಗದ ಮೇಲೆ ಲಿಂಗಧಾರಣವಾಗಿ,
ಶ್ರೀ ವಿಭೂತಿಯ ಧರಿಸಿದ ಮಹಾತ್ಮನು
ಮುಂದೆ ಶಿವನ ಜ್ಞಾನಚಕ್ಷುವಿನಿಂದುದಯಿಸಿದ
ರುದ್ರಾಕ್ಷಿಯ ಧರಿಸುವ ಭೇದವೆಂತೆಂದೊಡ ಃ
ಶಿಖಾಸ್ಥಾನದಲ್ಲಿ ಏಕಮುಖವನುಳ್ಳಂಥ ಒಂದು ರುದ್ರಾಕ್ಷಿಯ
`` ಓಂ ಸದಾಶಿವಾಯ ನಮ ಃ ''
ಎಂಬ ಮಂತ್ರದಿಂದ ಧಾರಣಮಾಡುವುದು.
ಮಸ್ತಕದಲ್ಲಿ ಎರಡುಮುಖ ಮೂರುಮುಖ
ಹನ್ನೆರಡುಮುಖಂಗಳನುಳ್ಳಂಥ ಮೂರು ರುದ್ರಾಕ್ಷಿಗಳ
`` ಓಂ ವಹ್ನಿಸೂರ್ಯಸೋಮಾಧಿಪಾಯ ಶಿವಾಯ ನಮಃ ''
ಎಂಬ ಮಂತ್ರದಿಂದ ಧಾರಣಮಾಡುವುದು.
ಶಿರವ ಬಳಸಿ ಹನ್ನೊಂದುಮುಖಂಗಳನುಳ್ಳಂಥ
ಮೂವತ್ತಾರು ರುದ್ರಾಕ್ಷಿಗಳ
``ಓಂ ಷಟ್ತ್ರಿಂಶತತ್ತಾ ್ವತ್ಮಕಾಯ ಪರಶಿವಾಯ ನಮಃ ''
ಎಂಬ ಮಂತ್ರದಿಂದ ಧಾರಣಮಾಡುವುದು.
ಕರ್ಣಯುಗದಲ್ಲಿ ಐದುಮುಖ ಹತ್ತುಮುಖ
ಏಳುಮುಖಂಗಳನುಳ್ಳಂಥ ಒಂದೊಂದು ರುದ್ರಾಕ್ಷಿಯ
``ಓಂ ಸೋಮಾಯ ನಮಃ''
ಎಂಬ ಮಂತ್ರದಿಂದ ಧಾರಣಮಾಡುವುದು.
ಕಂಠಸ್ಥಾನದಲ್ಲಿ ಎಂಟುಮುಖ, ಆರುಮಖಂಗಳನುಳ್ಳಂಥ
ಮೂವತ್ತೆರಡು ರುದ್ರಾಕ್ಷಿಗಳ
``ಓಂ ತ್ರಿಯಂಬಕಕಲಾತ್ಮನೇ ಶ್ರೀಕಂಠಾಯ ನಮಃ''
ಎಂಬ ಮಂತ್ರದಿಂದ ಧಾರಣಮಾಡುವುದು.
ಉರಸ್ಥಾನದಲ್ಲಿ ನಾಲ್ಕುಮುಖಂಗಳನುಳ್ಳಂಥ
ಐವತ್ತುನಾಲ್ಕು ರುದ್ರಾಕ್ಷಿಗಳ
``ಓಂ ಶ್ರೀಕಂಠಾದಿಮುಕ್ತ್ಯಾತ್ಮಕಾಯ ಶ್ರೀ ಸರ್ವಜ್ಞಾಯ ನಮಃ''
ಎಂಬ ಮಂತ್ರದಿಂದ ಧಾರಣಮಾಡುವುದು.
ಬಾಹುದ್ವಯದಲ್ಲಿ ಹದಿಮೂರುಮುಖಂಗಳನುಳ್ಳಂಥ
ಹದಿನಾರು ಹದಿನಾರು ರುದ್ರಾಕ್ಷಿಗಳ
``ಓಂ ಸುಖಾಸನಾದಿ ಷೋಡಶಮೂರ್ತ್ಯಾತ್ಮಕಾಯ ಶ್ರೀಕಂಠಾಯ ನಮಃ''
ಎಂಬ ಮಂತ್ರದಿಂದ ಬಲದ ತೋಳಿನಲ್ಲಿ ಧಾರಣಮಾಡುವುದು.
``ಓಂ ಸೋಮಕಲಾತ್ಮಕಾಯ ಸೋಮಾಯ ನಮಃ''
ಎಂಬ ಮಂತ್ರದಿಂದ ಎಡದ ತೋಳಿನಲ್ಲಿ ಧಾರಣಮಾಡುವುದು.
ಮುಂಗೈ ಎರಡರಲ್ಲಿ ಒಂಬತ್ತು ಮುಖಂಗಳನುಳ್ಳಂಥ
ಹನ್ನೆರಡು ಹನ್ನೆರಡು ರುದ್ರಾಕ್ಷಿಗಳ
``ಓಂ ದ್ವಾದಶಾದಿತ್ಯಾಕ್ಷಾಯ ಶ್ರೀ ಮಹಾದೇವಾಯ ನಮಃ''
ಎಂಬ ಮಂತ್ರದಿಂದ ಬಲದ ಮುಂಗೈಯಲ್ಲಿ ಧಾರಣಮಾಡುವುದು.
``ಓಂ ಕೇಶವಾದಿತ್ಯಾಯ ಉಮಾಪತಯೇ ನಮಃ''
ಎಂಬ ಮಂತ್ರದಿಂದ ಎಡದ ಮುಂಗೈಯಲ್ಲಿ
ಧಾರಣಮಾಡುವುದು.
ಕಕ್ಷಸ್ಥಾನದಲ್ಲಿ ಯಜ್ಞೋಪವೀತರೂಪವಾಗಿ
ಹದಿನಾಲ್ಕುಮುಖಂಗಳನುಳ್ಳಂಥ ನೂರೆಂಟು ರುದ್ರಾಕ್ಷಿಗಳ
``ಓಂ ಶತರುದ್ರವಿದ್ಯಾಸ್ವರೂಪಾತ್ಮಕಾಯ
ಶ್ರೀ ವಿಶ್ವೇಶ್ವರಾಯ ನಮಃ''
ಎಂಬ ಮಂತ್ರದಿಂದ ಧಾರಣಮಾಡುವುದು.
ಇಂತೀ ಸ್ಥಾನಗಣನೆ ಮುಖಮಂತ್ರಂಗಳ ಭೇದವನರಿದು,
ಶ್ರೀ ರುದ್ರಾಕ್ಷಿಯ ಧರಿಸಿದ ಶರಣ ತಾನೇ
ಸಾಕ್ಷಾತ್ ಪರಶಿವನಲ್ಲದೆ ಬೇರಲ್ಲವಯ್ಯ.
ಅದೆಂತೆಂದೊಡೆ :ಪರಮರಹಸ್ಯದಲ್ಲಿ-
``ಭಾಲೇ ತ್ರೈಪುಂಡ್ರಕಂ ಯಸ್ಯ ಗಲೇ ರುದ್ರಾಕ್ಷಮಾಲಿಕಾ |
ವಕ್ತ್ರೇ ಷಡಕ್ಷರಂ ಮಂತ್ರಂ ಶಿವಃ ನಾ ಸಂಶಯಃ ||''
ಎಂದುದಾಗಿ,
ಅಂತಪ್ಪ ಮಹಿಮಂಗೆ ಶರಣೆಂದವರೆ ಧನ್ಯರಯ್ಯ
ಅಖಂಡೇಶ್ವರಾ.