ಎಡೆಯ ಮಾಡಿದ ಎಡೆ ಏಕವಾರಕ್ಕೆ ಮುನ್ನವೇ (ತೀ)ರಿತ್ತು. ತೀರಿದ ಪ್ರಸಾದವನುಣಹೋದರೆ ಉಂಡವರೆಲ್ಲಾ ನನ್ನ ಗಂಡರಾದರು. ಅವರ ಕಂಡು ನಾನು ಮರುಳುಗೊಂಡರೆ ಮಹದನುಭವದಲ್ಲಿ ಕೂಟವಾಯಿತ್ತಯ್ಯ ಸಂಗಯ್ಯ.
ತಿಳುವಿನ ಸಂಗವಿನ್ನೇತಕಯ್ಯ ಎನಗೆ. ಆ ತಿಳುಹಿನ ಪ್ರಾಣ ನಿರಾಧಾರದಲ್ಲಿ ನಿಂದ ಬಳಿಕ, ಕಳೆಯಿಲ್ಲವೆನಗೆ ತಿಳುಹಿಲ್ಲವೆನಗೆ, ಅಂಗದ ಸಂಗಿಗಳಲ್ಲಿ ಆಚಾರದ ಕುರುಹಿನವಳಲ್ಲ. ಅಕ್ಷಯದ ಸಮಾಧಾನದಲ್ಲಿ ನಿಂದ ಬಳಿಕ ಪರಿಣಾಮಿಯಾನಯ್ಯ ಸಂಗಯ್ಯ.
ಹೆಸರಿಲ್ಲದ ರೂಪ ಕಂಡು ಹೆಸರಳಿದು ಹೆಣ್ಣು ರೂಪ ತಾಳಿದೆ ನಾನು. ಕುರುಹಿಲ್ಲದ ಮೂರ್ತಿಯ ಕಂಡು ಅದ್ವೈತಾನಂದಿಯಾದೆ ನಾನು. ಪ್ರಣವ ಜ್ಯೋತಿಷ್ಟವರ್ಣವ ತಿಳಿದು ಪರಂಜ್ಯೋತಿಲಿಂಗವಾದೆನಯ್ಯ ಸಂಗಯ್ಯ.
ನೋಡುವಡೆ ಎನ್ನ ಕಣ್ಣಿಂಗೆ ಗೋಚರವಲ್ಲ ಆ ಕಾಯ ಕಲ್ಯಾಣ. ಆ ಕಾಯ ಕಲ್ಯಾಣದೊಳಗೆ ಸರೋವರದಷ್ಟದಳಂಗಳ ಮಧ್ಯದಲ್ಲಿ ಹೆಟ್ಟಿಗೆಯಿರಲು ಆ ಹೆಟ್ಟಿಗೆಯ ಕುರುಹ ಕಂಡು ನಿಷ್ಠೆಯ ಇರವನರಿದೆನಯ್ಯ ಸಂಗಯ್ಯ.