ತತ್ವದ ಕಾವು, ನಿಜನಿಶ್ಚಯದ ಬಿದಿರು, ಭಕ್ತಿಜ್ಞಾನ ವೈರಾಗ್ಯ.
ಇಂತೀ ತ್ರಿವಿಧ ಮುಪ್ಪುರಿಗೂಡಿದ ನೂಲಿನಲ್ಲಿ
ಕಟ್ಟುಗಳ ಕಟ್ಟಿ, ಅಹಂಕಾರ ಗರ್ವದ ನಿರುತವ ಬಿಡಿಸಿ,
ಭಕ್ತಿ ಸತ್ಯಕ್ಕೆ ತಲೆವಾಗುವಂತೆ ಭಾಗ ಒಪ್ಪವ ಮಾಡಿ,
ಕರ್ಕಶ ಮಿಥ್ಯವೆಂಬ ಸಿಗುರೆದ್ದಡೆ ಕೆತ್ತಿಹಾಕಿ,
ಛತ್ರಕ್ಕೆ ಹೆಚ್ಚುಕುಂದಿಲ್ಲದ ವರ್ತುಳಾಕಾರಕ್ಕೆ
ಚಿತ್ತವಸ್ತುವಿನಲ್ಲಿ ತೊಲಗದಂತೆ ಶಾಶ್ವತವಾಗಿ,
ಅಷ್ಟಾವಧಾನಂಗಳೆಂಬ ಕಪ್ಪಡವ ಕವಿಸಿ,
ಚತುಷ್ಟಯಂಗಳೆಂಬ ಸೆರಗು ತಪ್ಪದೆ ಕತ್ತರಿಸಿ,
ಚಿತ್ತ ಹೆರೆಹಿಂಗದ ಲೆಕ್ಕಣಿಕೆಯಲ್ಲಿ ಚಿತ್ರವ ಬರೆದು,
ಅಧಮ ಊಧ್ರ್ವವೆಂಬುದಕ್ಕೆ ಬಲು ತೆಕ್ಕೆಯಿನಿಕ್ಕಿ,
ಸರ್ವವರ್ಮಂಗಳೆಂಬ ಬೆಣೆಗೀಲನಿಕ್ಕಿ,
ಹಿಡಿವುತ್ತಿದ್ದೆ ಛತ್ರವ ನೆಳಲಿಲ್ಲದಂತೆ,
ಐಘಂಟೇಶ್ವರಲಿಂಗಕ್ಕೆ ಬಿಸಿಲುಮಳೆಗಾಳಿಗೆ ಹೊರಗಾಗಬೇಕೆಂದು.