ಪರಿಪೂರ್ಣ ನಿತ್ಯನಿರಂಜನ ನಿರವಯಲಿಂಗದೊಳು
ಸಮರಸೈಕ್ಯವನೆಯ್ದಿಸಿ,
ಘನಕ್ಕೆ ಘನವೇದ್ಯವಾದ ಬಳಿಕ
ಅರಿವೆಂಬುದಿಲ್ಲ , ಮರಹೆಂಬುದಿಲ್ಲ.
ಕೂಡಿದೆನೆಂಬುದಿಲ್ಲ , ಅಗಲಿದೆನೆಂಬುದಿಲ್ಲ.
ಕಂಡೆನೆಂಬುದಿಲ್ಲ , ಕಾಣೆನೆಂಬುದಿಲ್ಲ.
ಸಂಗನಿಸ್ಸಂಗವೆಂಬುದಿಲ್ಲ.
ಶೂನ್ಯ ನಿಶ್ಶೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ.
ಇಂತಿವೇನೂಯೇನೂ ಇಲ್ಲದೆ ಶಬ್ದಮುಗ್ಧವಾಗಿ
ಭ್ರಮರ ಚಂಪಕದೊಡಗೂಡಿದಂತೆ,
ಉರಿಯೊಳಡಗಿದ ಕರ್ಪುರದಂತೆ,
ಕ್ಷೀರದೊಳು ಬೆರೆದ ಸಲಿಲದಂತೆ,
ಅಂಬುಧಿಯೊಳಡಗಿದ ಆಲಿಕಲ್ಲಿನಂತೆ,
ನಾನೀನೆಂಬೆರಡಳಿದ ಘನಸುಖವನೇನೆಂದುಪಮಿಸುವೆನಯ್ಯ
ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯ !