ಸಂಗಕ್ಕೆ ಶರಣರ ಸಂಗವೇ ಲೇಸಯ್ಯ,
ಜಂಗಮದರಿವು ಲಿಂಗದ ನಿಲವ ತೋರುವುದಾಗಿ,
ಲಿಂಗದ ನಿಲವಾವುದೆಂದಡೆ :
ಮೂರ ನಿಲಿಸಿ, ಆರ ಮೀರಿ, ಹದಿನೆಂಟ ಕಳೆದು,
ಏಳನುಳಿದು, ಒಂಬತ್ತು ಮೀರಿ,
ನಿಜಜಂಗಮದ ನಿಜಲಿಂಗದ ನಿಜಶರಣರ ಅರಿವು.
ಈ ತ್ರಿವಿಧದ ನಿರುಗ ಎಂತೆಂದಡೆ :
ತತ್ತ್ವಜ್ಞಾನದ ನುಡಿಯಲ್ಲಿ ಹೊಗದು,
ಅದೆಂತೆಂದಡೆ :ನಿಮ್ಮ ಭಿಕ್ಷದ ಭಿತ್ತಿಯ ಹೇಳುವೆ.
ಭಿಕ್ಷೆ ಮೂರು ವಿಧವಾಗಿಪ್ಪುದು.
ಭಿಕ್ಷೆ ಏಳುವಿಧವಾಗಿಪ್ಪುದು.
ಭಿಕ್ಷೆ ಹನ್ನರಡುವಿಧವಾಗಿಪ್ಪುದು.
ಭಿಕ್ಷದ ನಿರುಗೆಯ ಬಲ್ಲ ನಿಜವೀರದೇವಯ್ಯ.
ಆತನ ಅರಿವನುಂಟುಮಾಡಿಕೊಂಡು
ಆಚರಿಸುವ ಚರಜಂಗಮದ ಅರಿವಿನ
ತೃಪ್ತಿಯಾವುದೆಂದಡೆ :
ಕ್ಷಾರವ ಕಂಡು ವಿಭ್ರಮಣನಂತಿರಬೇಕು
ಇದು ಕ್ರೀಗಾಗದೆಂದು ಕಂಗೆಡಲೇಕೆ?
ಚತುರ್ದಿವಸದಲ್ಲಿಯೂ ಶರಣನೊಬ್ಬನೇ
ಚರಿಸುವ ಕೇಟೇಶ್ವರನ ಕರುಣದಲ್ಲಿ.
ಆ ಚತುರ್ದಿವಸದಲ್ಲಿಯೂ ಆಚರಿಸುವ
ಶರಣನ ನಿಲವ ಕಂಡು ಮತ್ತೆ ಗೋಣಿಯ ಮರೆಯಿಲ್ಲ :
ಇವ ಕುರಿತು ಅನುಸರಿಸದೆ ಆಚರಿಸುತಿಪ್ಪನು.