ಭಕ್ತರು ಬಯಕೆಯನಿರಿಸಿದಡೆ ಅದು ಸತ್ತ ನಾಯ ಮಾಂಸ. ವಿರಕ್ತರು ದ್ರವ್ಯವ ಮುಟ್ಟಿದಡೆ ಅದು ಕತ್ತೆಯ ಹಡುಹಿಂಗೆ ತಪ್ಪಿದರೆಂಬೆ. ಇದು ಸತ್ಯ, ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ಸತ್ಯವೆನ್ನಿರಣ್ಣಾ.
ಭಕ್ತರು ದ್ರವ್ಯವ ಗಳಿಸಿದಲ್ಲಿ ತಮ್ಮ ತನುವಿದ್ದಲ್ಲಿಯೆ ಗುರು ಲಿಂಗ ಜಂಗಮಕ್ಕರ್ಪಿಸುವುದು. ಇದೇ ಸದ್ಭಕ್ತಿಯ ಹೊಲಬು. ತಾನಳಿದು ಮತ್ತೆ ಮನೆಮಕ್ಕಳಿಗೆಂದಡೆ ಅದೆ ಆಚಾರಕ್ಕೆ ಭಂಗ. ಆತ ಸ್ವಾಮಿಗೆ ಸ್ವಾಮಿದ್ರೋಹಿ. ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ಕೇಳಿ ಎಲ್ಲರೂ ಸತ್ಯವೆನ್ನಿರಣ್ಣಾ.