ಘೃತ ಘೃತವ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಬಸವಣ್ಣ.
ಕ್ಷೀರ ಕ್ಷೀರವ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಚೆನ್ನಬಸವಣ್ಣ.
ಜ್ಯೋತಿ ಜ್ಯೋತಿಯ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಪ್ರಭು[ದೇವ].
ಬಯಲು ಬಯಲ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಮಡಿವಾಳಯ್ಯ.
ಬೆಳಗು ಬೆಳಗ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಸಿದ್ಧರಾಮಯ್ಯ.
ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳ
ಶ್ರೀಪಾದದಲ್ಲಿ ಉರಿ ಕರ್ಪುರ ಬೆರಸಿದಂತೆ ಬೆರಸಿದೆನಯ್ಯಾ,
ಭಕ್ತಿಪ್ರಿಯ ಸತ್ಯಕರಂಡಮೂರ್ತಿ ಸದಾಶಿವಲಿಂಗವೆ.