ಎನ್ನ ತನುವೆ ಬಸವಣ್ಣ, ಎನ್ನಾತ್ಮವೆ ಮಡಿವಾಳಯ್ಯ,
ಎನ್ನ ಪ್ರಾಣವೆ ಚೆನ್ನಬಸವಣ್ಣ,
ಎನ್ನ ಇಂದ್ರಿಯಂಗಳೆ ಪ್ರಭುದೇವರು,
ಎನ್ನ ವಿಷಯಂಗಳೆ ಮೋಳಿಗೆ ಮಾರಿತಂದೆ
ಎನ್ನ ಪ್ರಕೃತಿಯೆ ಅಜಗಣ್ಣದೇವರು.
ಎನ್ನ ಅಂಗಕರಣಂಗಳೆ ಅಸಂಖ್ಯಾತ ಮಹಾಗಣಂಗಳು.
ಎನ್ನ ಮನವೆ ಮಹಾದೇವಿಯಕ್ಕ,
ಎನ್ನ ಬುದ್ಧಿಯೆ ಮೋಳಿಗಯ್ಯನ ರಾಣಿ,
ಎನ್ನ ಚಿತ್ತವೆ ನೀಲಲೋಚನೆಯಮ್ಮ.
ಎನ್ನ ಅಹಂಕಾರವೆ ತಂಗಟೂರ ಮಾರಯ್ಯನ ರಾಣಿ.
ಎನ್ನ ಅರುಹೆ ಅಕ್ಕನಾಗಾಯಕ್ಕ.
ಎನ್ನ ಅರುಹಿನ ವಿಶ್ರಾಂತಿಯೆ ಮುಕ್ತಾಯಕ್ಕ.
ಎನ್ನ ನೇತ್ರದ ದೃಕ್ಕೆ ಸೊಡ್ಡಳ ಬಾಚರಸರು.
ಎನ್ನ ಪುಣ್ಯದ ಪುಂಜವೆ ಹಡಪದಪ್ಪಣ್ಣ.
ಎನ್ನ ಕ್ಷುತ್ತು ಪಿಪಾಸೆಯೆ ಘಟ್ಟಿವಾಳಯ್ಯ.
ಎನ್ನ ಶೋಕ ಮೋಹವೆ ಚಂದಿಮರಸರು.
ಎನ್ನ ಜನನ ಮರಣವೆ ನಿಜಗುಣದೇವರು.
ಎನ್ನ ಯೋಗದ ನಿಲುಕಡೆಯೆ ಸಿದ್ಧರಾಮೇಶ್ವರರು.
ಎನ್ನ ಅಂಗಕರಣವೆ ಏಳ್ನೂರೆಪ್ಪತ್ತಮರಗಣಂಗಳು.
ಇಂತಿವನರಿದೆನಾಗಿ ಬೋಳಬಸವೇಶ್ವರನ ಕೃಪೆಯಿಂದ
ಸಿದ್ಧೇಶ್ವರನೆಂಬ ಪರುಷ ಸಾಧ್ಯವಾಯಿತ್ತಯ್ಯ.
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಅಂಗ ಮಿಥ್ಯಭಾವವನರಿಯದೆ
ನಿಮ್ಮ ಕೃಪಾನಂದದೊಳಗೆ ಮುಳುಗಿರ್ದೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ.