ನಿಶ್ಚಿಂತ ನಿರ್ಲೇಪ ಸಚ್ಚಿದಾನಂದ ಸ್ವರೂಪವಪ್ಪ
ಶರಣನಲಿಂಗದಂಗವ ತೋರಯ್ಯ ಎಂದಡೆ ಶರಣ.
ಶರಣರಿಗೆ ಬಿನ್ನಹಂ ಮಾಡುತ್ತಿರ್ದ, ನಿಮ್ಮ ಶರಣ
ನಿಜಲಿಂಗದ ಕ್ರಮವ.
ಭುವನಾಶ್ರಯವೆಂಬುದೊಂದು ಪದ್ಮಸಿಂಹಾಸನದ ಮೇಲೆ
ಮಾಣಿಕ್ಯವರ್ಣದ ಲಿಂಗವುಂಟು.
ಆ ಲಿಂಗವು ತನ್ನ ನಿಜಾಶ್ರಯವ ನೋಡುತ್ತಿರಲು
ಅಲ್ಲಿ ಚಿದಂಗವೆಂಬ ಮಹಾಹೃತ್ಕಮಲದೊಳಗೆ
ಉನ್ಮನಿಯಸ್ಥಾನವೆಂಬುದೊಂದು [ಉಂಟು].
ಬ್ರಹ್ಮಾನಂದಮಯವೆನಿಪ ನಿಜಾಮೃತಪಾನೀಯವೆಂಬ
ಪಂಚರತ್ನದ ಕಳಸವುಂಟು.
ಆ ಪಂಚರತ್ನದ ಕಳಸದ ಮೇಲೆ
ಇಂಚರನೆಂಬ ಹಂಸನೆಂಬ ಪ್ರಾಣಲಿಂಗವು ಆತ್ಮಪ್ರಭಾಮಂಡಲದೊಳಗಿಹುದು.
ಮಹಾಪ್ರಭೆಯಂ ನುಂಗಿದ ಲಿಂಗವು
ಪದ್ಮಬ್ರಹ್ಮಾಂಡವೆಂಬುದೊಂದು ಆ ಲಯಸ್ಥಾನದಲ್ಲಿ ನೋಡುತ್ತಿರಲು
ಅಲ್ಲಿಂದತ್ತ ಬಟ್ಟಬಯಲಾದ ಅಗಮ್ಯವೆಂಬ ಬಯಲು,
ಆ ಲಿಂಗದೊಳಗಡಗಿ ನಿಂದ ಭಾವವು ತನ್ನೊಳು ತಾನೆ ಕಾಣಿಸಿತ್ತು.
ಅದ ಚೆನ್ನಾಗಿ ತಿಳಿಯಬಲ್ಲಡೆ ಇನ್ನೇಕಯ್ಯಾ ಶಂಕೆ ?
ನಿಃಕಳಂಕ ನಿಜಲಿಂಗವು ತಾನೆ ಎಂದಾತ, ನಮ್ಮ ಬಸವಣ್ಣಪ್ರಿಯ
ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು
ತಾನು ತಾನಾಗಿ ಇದ್ದಿತ್ತು.