ಅಥವಾ

ಒಟ್ಟು 60 ಕಡೆಗಳಲ್ಲಿ , 15 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ. ಇಂತೀ ನಾಲ್ಕರ ಮಧ್ಯದ ಮನೆಗೆ ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ, ಮಾಂಸದ ಗೋಡೆ, ಚರ್ಮದ ಹೊದಿಕೆ, ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದು ಚಿತ್ರದ ಮನೆ ನೋಡಯ್ಯಾ. ಆ ಮನೆಗೊಂಬತ್ತು ಬಾಗಿಲು, ಇಡಾ ಪಿಂಗಳವೆಂಬ ಗಾಳಿಯ ಬಾದಳ, ಮೃದು ಕಠಿಣವೆಂಬವೆರಡು ಅಗುಳಿಯ ಭೇದ ನೋಡಾ, ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಚ್ಚಿ, ದಿವಾರಾತ್ರಿಯೆಂಬ ಅರುಹು ಮರಹಿನ ಉಭಯವ ಕದಕಿತ್ತು ನೋಡಯ್ಯಾ. ಮನೆ ನಷ್ಟವಾಗಿ ಹೋದಡೆಯೂ ಮನೆಯೊಡೆಯ ಮರಳಿ ಮತ್ತೊಂದು ಮನೆಗೆ ಒಪ್ಪುದು ತಪ್ಪದು ನೋಡಯ್ಯಾ ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ, ಕಾಮಬ್ಥೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಒಕ್ಕಲಿಗ ಮುದ್ದಣ್ಣ
ಅರುಹು ತಲೆದೋರಿದಲ್ಲಿ ವಿಷ ಬೆಲ್ಲವು ಇಕ್ಷುರಸವಾಯಿತ್ತು. ಅರುಹು ತಲೆದೋರಿದಲ್ಲಿ ಅಂಬರ ಅವಯವಕ್ಕೆ ಹೊಂದಿತ್ತಯ್ಯಾ. ಅರುಹು ತಲೆದೋರಿದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ ಕುರುಹು ನಾನೆಂದು ತಿಳಿಯಬಂದಿತ್ತಯ್ಯಾ ಯೋಗಿನಾಥಾ.
--------------
ಸಿದ್ಧರಾಮೇಶ್ವರ
ತನ್ನರಿದವಂಗೆ ಇದಿರೆಂಬುದಿಲ್ಲ, ತನ್ನರಿಯದವಂಗೆ ಇದಿರೆಂಬುದುಂಟು. ಅರುಹು ಮರಹು ಕುರುಹಳಿಯಿತ್ತು, ಬೆರಗಾಯಿತ್ತು. ಬೆರಗು ಬೆರಗಿನೊಳಗೆ ಕರಿಗೊಂಡಿತ್ತು ಇದೇನೊ? ಭ್ರಾಂತು ಭ್ರಾಂತನೆ ನುಂಗಿ ಗುಹೇಶ್ವರ ಭವಿಯ ಬೆಂಬತ್ತಿ ಭವಿಯಾದ ಕಾರಣ
--------------
ಅಲ್ಲಮಪ್ರಭುದೇವರು
ತನು ಉಂಟೆಂಬ ಭಾವ ಮನದಲ್ಲಿಲ್ಲವಯ್ಯಾ; ಮನ ಉಂಟೆಂಬ ಭಾವ ಅರುಹಿನಲಿಲ್ಲವಯ್ಯಾ; ಅರುಹು ಉಂಟೆಂಬ ಭಾವ ನುಡಿಯೊಳಗಿಲ್ಲವಯ್ಯಾ. ಇಂತೀ ತನು ಮನ ಜಾÐನವೆಂಬ ತ್ರಿವಿಧವು ಏಕಾರ್ಥವಾದ ಬಳಿಕ, ಆವ ತನುವಿನ ಮೇಲೆ ಸ್ವಾಯತವ ಮಾಡುವೆ? ಎನ್ನ ಕಾಯವೆ ಬಸವಣ್ಣನು, ಎನ್ನ ಪ್ರಾಣಲಿಂಗವೆ ಪ್ರಭುದೇವರು, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಒಳಗು ಹೊರಗೆಂಬುದಿಲ್ಲ ಕಾಣಾ, ಚೆನ್ನಬಸವಣ್ಣಾ.
--------------
ಸಿದ್ಧರಾಮೇಶ್ವರ
ನಾನು ನೀನೆಂಬ ಉಭಯ ತನುಗುಣ ನಾಸ್ತಿಯಾಗಿ ಅರುಹು ಮರಹೆಂಬುಭಯದ ಮರೆಹು ಅಳಿಯಿತ್ತಯ್ಯ. ಮರೆಹು ಅಳಿಯಿತ್ತಾಗಿ, ಮಹದರುಹಿನ ಆಚರಣೆ ಕರಿಗೊಂಡಿತ್ತಯ್ಯ. ಮಹದರುಹಿನ ಆಚರಣೆ ಕರಿಗೊಂಡಿತ್ತಾಗಿ, ಮಹಾಲಿಂಗದ ಬೆಳಗು ಒಳಕೊಂಡಿತ್ತಯ್ಯ. ಮಹಾಲಿಂಗದ ಬೆಳಗು ಒಳಕೊಂಡಿತ್ತಾಗಿ, ಮಂಗಳಮಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನಲ್ಲಿ, ಪರಮ ಪರಿಣಾಮ ನೆಲೆಗೊಂಡಿತ್ತಯ್ಯಾ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗಂಡಂಗೆ ನಾಚಿದ ಹೆಂಡತಿ ಮಕ್ಕಳ ಹೇಂಗೆ ಹಡೆವಳಯ್ಯ? ಲಿಂಗಕ್ಕ ನಾಚಿದಾತ ಶರಣನೆಂತಪ್ಪನಯ್ಯ? ಈ ಲಜ್ಜೆ ನಾಚಿಕೆಯೆಂಬ ಪಾಶವಿದೇನಯ್ಯ? ಸಂಕಲ್ಪ ವಿಕಲ್ಪದಿಂದ ಸಂದೇಹಿಸುವ ಭ್ರಾಂತಿಯೇ ಲಜ್ಜೆಯಯ್ಯ. ಅಹುದೋ ಅಲ್ಲವೋ, ಏನೋ ಎಂತೋ ಎಂದು ಹಿಡಿವುತ್ತ ಬಿಡುತ್ತಿಪ್ಪ ಲಜ್ಜಾಭ್ರಾಂತಿ ಉಡುಗಿರಬೇಕಯ್ಯ. ಗಂಡನ ಕುರುಹನರಿಯದಾಕೆಗೆ ಲಜ್ಜೆ, ನಾಚಿಕೆ ಉಂಟಾದುದಯ್ಯ. ಲಿಂಗವನರಿಯದಾತಂಗೆ ಸಂಕಲ್ಪ ವಿಕಲ್ಪವೆಂಬ ಸಂದೇಹ ಭ್ರಾಂತಿ ಉಂಟಾದುದಯ್ಯ. ಈ ಅರುಹು ಮರಹೆಂಬುಭಯದ ಮುಸುಕ ತೆಗೆದು ನೆರೆ ಅರುಹಿನಲ್ಲಿ ಸನ್ನಿಹಿತವಿಲ್ಲದ ಜಡರುಗಳ ಕೈಯಲ್ಲಿ ಲಿಂಗಾನುಭಾವವ ಬೆಸಗೊಳಲುಂಟೆ ಅಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ: ಅಂಬುದ್ಥಿಯ ಕೂಡಿದ ಸಂ[ಭೇದದ]ತಿರಬೇಕು. ಮುಖ ಶಿರ ಬೋಳಾದಡೇನೊ, ಹುಸಿ ಕೊಲೆ ಕಳವು ಪಾರದ್ವಾರ ಅತಿಕಾಂಕ್ಷೆಯ ಬಿಡದನ್ನಕ್ಕರ ? ಗಡ್ಡ ಜಡೆ ಕಂಥೆ ಲಾಂಛನವ ತೊಟ್ಟಿಹ ಬಹುರೂಪರಂತೆ, ಜಗದೊಳಗೆ ಸುಳಿವ ಬದ್ಧಕತನದಲ್ಲಿ ದ್ರವ್ಯಕ್ಕೆ ಗೊಡ್ಡೆ[ಯ]ರ[ನಿ]ರಿವ ದೊಡ್ಡ ಮುದ್ರೆಯ ಕಳ್ಳರು, ತುರುಬ ಚಿಮ್ಮುರಿಗಳ ಕಟ್ಟಿ, ನಿರಿಗುರುಳ ಬಾಲೆಯರ ಮುಂದೆ ತಿರುಗುತಿಪ್ಪ ಬರಿವಾಯ ಭುಂಜಕರುಗಳು ಅರಿವುಳ್ಳವರೆಂದು ಬೀಗಿ ಬೆರೆವುತಿಪ್ಪರು. ಅರಿವಿನ ಶುದ್ಧಿಯನರಿದ ಮಹಾತ್ಮಂಗೆ ಹಲುಬಲೇತಕ್ಕಯ್ಯಾ, ಮೊಲೆಯ ಕಾಣದ ಹಸುಳೆಯಂತೆ ? ಅರಿವಿನ ಶುದ್ಧಿ ಕರಿಗೊಂಡವಂಗೆ, ನರಗುರಿಗಳ ಭವನವ ಕಾಯಲೇತಕ್ಕೆ ? ಅರಿವೆ ಅಂಗವಾದ ಲಿಂಗಾಂಗಿಗೆ ಬರುಬರ ಭ್ರಾಂತರ ನೆರೆ ಸಂಗವೇತಕ್ಕೆ ? ಇದು ಕಾರಣ, ತುರುಬೆಂಬುದಿಲ್ಲ, ಜಡೆಯೆಂಬುದಿಲ್ಲ, ಬೋಳೆಂಬುದಿಲ್ಲ. ಅರುಹು ಕುರುಹಿಂಗೆ ಸಿಕ್ಕದು, ಅರಿದುದು ಕುರುಹಿಂಗೆ ಸಿಕ್ಕದು, ಅರಿದುದು ಮರೆಯಲಾಗಿ, ಮರೆದುದು ಅರಿದುದಕ್ಕೆ ಕುರುಹಿಲ್ಲವಾಗಿ, ಇಂತೀ ಸಂಚಿತ ಪ್ರಾರಬ್ಧ ಆಗಾಮಿಗೆ ಹೊರಗಾದುದು, ಜ್ಞಾನ ಜಂಗಮಸ್ಥಲ. ಹೀಂಗಲ್ಲದೆ ಗೆಲ್ಲ ಸೋಲಕ್ಕೆ ಹೋರಿ ಬಲ್ಲವರಾದೆವೆಂಬವರ ವಲ್ಲಭ ನಿಃಕಳಂಕ ಮಲ್ಲಿಕಾರ್ಜುನಲಿಂಗನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ಮನವ ನಿಲಿಸಿಹೆನೆಂದು, ಆ ಮನದ ನೆಲೆಯ ಕಾಣದೆ, ಅರುಹು ಮರವೆಗೊಳಗಾಗಿ, ಕಳವಳವ ಮುಂದುಮಾಡಿ, ಚಿಂತೆ ಸಂತೋಷವನೊಡಲುಮಾಡಿ, ಭ್ರಾಂತುಗೊಂಡು ತಿರುಗುವ ಮನುಜರಿರಾ, ನೀವು ಕೇಳಿರೊ. ಮನವ ನಿಲಿಸುವುದಕ್ಕೆ ಶರಣರ ಸಂಗಬೇಕು, ಜನನಮರಣವ ಗೆಲಬೇಕು. ಗುರುಲಿಂಗಜಂಗಮದಲ್ಲಿ ವಂಚನೆಯಿಲ್ಲದೆ, ಮನಸಂಚಲವ ಹರಿದು, ನಿಶ್ಚಿಂತವಾಗಿ ನಿಜವ ನಂಬಿ ಚಿತ್ತ ಸುಯಿದಾನವಾದಲ್ಲದೆ, ಮನದೊಳಗೆ ಲಿಂಗವು ಅಚ್ಚೊತ್ತಿದಂತಿರದೆಂದರು ಬಸವಣ್ಣನ ಶರಣರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಾಯದ ರೂಪನು ಕಂಗಳು ನುಂಗಿತ್ತು. ಪ್ರಾಣದ ರೂಪನು ನೆನಹು ನುಂಗಿತ್ತು. ಭಾವದ ರೂಪನು ಅರುಹು ನುಂಗಿತ್ತು. ಇವೆಲ್ಲರ ರೂಪನು ನಿರೂಪು ನುಂಗಿತ್ತು, ಆ ನಿರೂಪು ಸ್ವರೂಪೀಕರಿಸಿ ನಾ ನುಂಗಿದೆನು. ಆ ನಿರೂಪು ಸ್ವರೂಪವೆರಡೂ ಬಯಲು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಲ್ಲದ ಮಾಯೆಯ ಇಲ್ಲೆನಿಸುವುದದೆ ಅಲ್ಲನ ಅರುಹು ಕಂಡಯ್ಯಾ. ಇಲ್ಲದ ಮಾಯೆ ಅಹುದೊ ಅಲ್ಲವೊ ಎಂಬುಭಯ ಭಾವ ಜಲ್ಲರಿಯ ಕಳಂಕು ಕಂಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಕೋಳಿ ಕೂಗುವುದು ಬೆಳಗಿನ ವೇಳೆಯನರಿದು. ಕತ್ತೆ ಕೂಗುವುದು ತನ್ನ ಹೊತ್ತಿನ ಗೊತ್ತನರಿದು. ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನ ಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಖಂಡಿತಭಾವವಳಿದು ಅಖಂಡಬ್ರಹ್ಮದಲ್ಲಿ ಅವಿರಳ ಸಮರಸದಿಂದಡಗಿದ ಶರಣಂಗೆ ಜ್ಞಾನಕ್ರಿಯೆಯೆಂಬುದೇನೊ ? ಧ್ಯಾನಮೌನವೆಂಬುದೇನೊ ? ನೇಮ ನಿತ್ಯವೆಂಬುದೇನೊ ? ಜಪತಪವೆಂಬುದೇನೊ ? ಅರುಹು ಆಚಾರವೆಂಬುದೇನೊ ? ಕುರುಹು ಪೂಜೆಯೆಂಬುದೇನೊ ? ಇಂತೀ ಮೇರೆಯುಳ್ಳನ್ನಕ್ಕರ ಭಿನ್ನಫಲಪ್ರಾಪ್ತಿಯಲ್ಲದೆ, ಮುಂದೆ ಅವಿರಳ ಸಮರಸ ನಿಜೈಕ್ಯ ನಿರವಯಲ ಪದವಿನ್ನೆಲ್ಲಿಯದೊ ? ಇದನರಿದು ಇಂತಿವೆಲ್ಲವು ಹಾಳು ಸಂಕಲ್ಪ, ವಿಪರೀತ ಭ್ರಾಂತಿ, ಅಜ್ಞಾನವೆಂದು ತಿಳಿದು, ಇವನೆಲ್ಲವ ವಿಭಾಗಿಸಿ ಕಳೆದು, ಬಚ್ಚಬರಿಯ ಬಯಲಬ್ರಹ್ಮವೆ ತನ್ನ ನಿಜದ ನಿಲವೆಂದು ತಿಳಿದು, ದಗ್ಧಪಟನ್ಯಾಯದಂತೆ ದೇಹವಿರ್ದು ನಿರ್ದೇಹಿಯಾಗಿರ್ದನಯ್ಯಾ ನಿಮ್ಮ ಶರಣ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಗಲಿಂಗ ಸಂಬಂಧವನುಳ್ಳ ನಿಜವೀರಶೈವ ದೀಕ್ಷೆಯನು ಗುರು ತನ್ನ ಶಿಷ್ಯಂಗೆ ಉಪದೇಶಿಸಿ ಮತ್ತೆ ಆ ಲಿಂಗದಲ್ಲಿ ಮಾಡುವ ಜಪ ಧ್ಯಾನ ಅರ್ಚನೆ ಉಪಚರಿಯ ಅರ್ಪಿತ ಪ್ರಸಾದಭೋಗವಾದಿಯಾದ ವೀರಶೈವರ ಸಾವಧಾನ ಸತ್ಕಿೃಯಾಚಾರಂಗಳ ಹೊಲಬನರಿಯದೆ ಭವಿಶೈವ ಭಿನ್ನಕರ್ಮಿಗಳಂತೆ ಆಂಗನ್ಯಾಸ ಕರನ್ಯಾಸ ಪಂಚಮಶುದ್ಧಿ ಪಂಚಾಮೃತಾಭಿಷೇಕ ಶ್ರೀರುದ್ರ ಪಂಚಬ್ರಹ್ಮಸ್ಥಲಾದಿ ಶೈವಪಂಚಪಂಚಾಕ್ಷರ ಭೂತಾದಿ ದೇವತಾದಿ ಗಣಿಕಾಜನನಿಕರ ಗಣನಾಕೃತ ಪರಿಪೂರಿತ ಅಕ್ಷಮಣಿ ಭವಮಾಲಿಕಾ ಜಪೋಪಚರಿಯಂಗಳಾದಿಯಾದ ಶೈವ ಪಾಷಂಡಕೃತ ಕರ್ಮಮಯವಪ್ಪ ಭವಿಮಾಟಕೂಟಂಗ?ನುಪದೇಶಿಸಿ ಭವಹರನಪ್ಪ ಘನವೀರಶೈವಲಿಂಗದಲ್ಲಿ ಮಾಡಿ ಕೂಡಿ ನಡೆಸಿಹನೆಂಬ ಕಡುಸ್ವಾಮಿದ್ರೋಹಿಗೆ ಆ ನಿಜದೀಕ್ಷೆಗೆಟ್ಟು ಗುರುಶಿಷ್ಯರಿರ್ವರು ನರಕಭಾಜನರಪ್ಪುದು ತಪ್ಪುದು ಅದೆಂತೆಂದೊಡೆ ``ನಾಮಧಾರಕಶಿಷ್ಯಾನಾಂ ನಾಮಧಾರೀ ಗುರುಸ್ತಥಾ ಅಂಧಕೋ[s]ಂಧಕರಾಬದ್ಧೋ ದ್ವಿವಿಧಂ ಪಾತಕಂ ಭವೇತ್' ಎಂದುದಾಗಿ ಇದು ಕಾರಣ ಗುರುಚರಪರಕರ್ತೃವಹ ಅರುಹು ಆಚಾರ ಶರಣಸದ್ಭಾವಸಂಪದವನುಳ್ಳು ಘನಗುರುರೂಪರಪ್ಪ ಪರಮಾರಾಧ್ಯರಲ್ಲಿ ಶರಣುವೊಕ್ಕು ಅಜಡಮತಿಗಳಪ್ಪ ಗುರುಶಿಷ್ಯರಿಬ್ಬರು ತಮ್ಮ ಹೊದ್ದಿದ ಅಬದ್ಧವಪ್ಪ ಭವಿಮಾಟಕೂಟಂಗಳ ಪರಿಹರಿಸಿಕೊಂಡು ನಿಜವಿಡಿದು ನಡೆದು ಕೃತಾರ್ಥರಾಗಲರಿಯದೆ ಅಜ್ಞಾನದಿಂದಲಹಂಕರಿಸಿ ಗುರುವಿಡಿದು ಬಂದುದ ಬಿಡಬಾರದೆಂದು ಕಡುಮೂರ್ಖತನದಿಂ ಗುರುವಚನವನುಲ್ಲಂಘಿಸಿ ಶರಣ ಸತ್ಕ್ರಿಯಾಚಾರಂಗಳನು ಕಡೆಮೆಟ್ಟಿಸಲವ ತನ್ನ ಕರಸ್ಥಲದ ನಿಜವೀರಶೈವಲಿಂಗದಲ್ಲಿ ಸಲ್ಲದ ಭವಿಶೈವ ಮಾಟಕೂಟಂಗ? ಮಾಡಿಕೊಂಡು ನಡೆವ ನರಕಜೀವಿಗಳು ಗುರುಮಾರ್ಗಕ್ಕೆ ಹೊರಗು. ಅವರು ಕೊಂಬುದು ಸುರೆ ಮಾಂಸವಲ್ಲದೆ ಅವರ್ಗೆ ಪ್ರಸಾದವಿಲ್ಲ. ಇದು ಕಾರಣ ಈ ಉಭಯರನ್ನು ಕೂಡಲಚೆನ್ನಸಂಗಯ್ಯ ಸೂರ್ಯಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಅಂಗವುಳ್ಳನ್ನಕ್ಕರ ಲಿಂಗ ಲಿಂಗವೆನುತಿರ್ದೆ. ಲಿಂಗವುಳ್ಳನ್ನಕ್ಕರ ಅಂಗ ಅಂಗವೆನುತಿರ್ದೆ. ಅಂಗ ಲಿಂಗವುಳ್ಳನ್ನಕ್ಕರ ಅರುಹು ಅರುಹುಯೆನುತಿರ್ದೆನು. ಅರುಹು ಅರುಹುಯೆಂಬನ್ನಕ್ಕರ ಭಾವ ನಿರ್ಭಾವಯೆನುತಿರ್ದೆನು. ಅಂಗ ಲಿಂಗದಲ್ಲಡಗಿ, ಲಿಂಗ ಅಂಗದಲ್ಲಡಗಿ, ಅಂಗ ಲಿಂಗವೆಂಬುಭಯ ಭಾವವರತಲ್ಲಿ ಅರುಹು ಅರುಹೆಂಬುವುದು ಬರಿದಾಯಿತ್ತು ನೋಡಾ. ಅರುಹು ಅರುಹೆಂಬುವದು ಅರಿದಾದಲ್ಲಿ, ಭಾವ ನಿರ್ಭಾವ ಬಯಲಾಗಿ ಬಚ್ಚಬರಿಯ ಬಯಲೆಯಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಕಲಮೂರ್ತಿಯಾಗಿ ಇಷ್ಟಲಿಂಗವಾಯಿತ್ತು. ನಿಷ್ಕಲಮೂರ್ತಿಯಾಗಿ ಪ್ರಾಣಲಿಂಗವಾಯಿತ್ತು. ಕೇವಲ ನಿರವಯಮೂರ್ತಿಯಾಗಿ ಭಾವಲಿಂಗವಾಯಿತ್ತು. ಸಕಲಮೂರ್ತಿಗೆ ಕ್ರಿಯೆ, ನಿಷ್ಕಲಮೂರ್ತಿಗೆ ಜ್ಞಾನ, ಕೇವಲ ನಿರವಯಮೂರ್ತಿಗೆ ಆನಂದ, ಸ್ಥೂಲವೇ ಕಾಯ, ಸೂಕ್ಷ್ಮವೇ ಪ್ರಾಣ, ಕಾರಣವೇ ವಸ್ತು. ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯವೆಂಬವು ಸೂಕ್ಷ್ಮದ ಷಡ್ವಿಧಲಿಂಗವು. ಇವಕ್ಕೆ `ಓಂ ನಮಃಶಿವಾಯ' ಎಂಬುದೇ ತೃಪ್ತಿ. ಸಂತೋಷವೇ ಕಾರಣ, ಮಹಾಕಾರಣವೇ ಪರಿಣಾಮ. ತೂರ್ಯಾತೀತವಾಗಿ ಸರ್ವಕೇಳಿಕೆಯಂ ಕೇಳಿ ನಿಜಾನಂದವಾಗಿಹುದು. ವಿರಾಟವೇ ಸುನಾದವಾಗಿ ಹೊರಬಿದ್ದು ನುಡಿದು ಭೇರಿನಾದದಂತೆ ಆಕಾಶಧ್ವನಿಯಂತೆ ತನಗೆ ತಾನೇ ಕೇಳುವುದು. ಹಿರಣ್ಯಗರ್ಭಬಿಂದುವಿನ ಮನೆಯಲ್ಲಿ ಗಾಳಿಪಟಕ್ಕೆ ಬೇರಬಿರಿಕೆಯ ಕಟ್ಟಿ ನುಡಿಸುವ ತೆರದಂತೆ ತೇಜವಾಗಿ ಶಂಖದ ಧ್ವನಿಯಂತೆ ತೋರುತಿರ್ಪ ಸುನಾದಕ್ಕೆ ಎರಡಂಗುಲದ ಮೇಲೆ ತೇಜವಿಹುದು. ಅದು ತುಂಬಿದ ಹುಣ್ಣಿಮೆಯ ಬೆಳದಿಂಗಳಂತೆ, ಚಂದ್ರಜ್ಯೋತಿಯ ಪ್ರಭೆಯಂತೆ, ಹೂಬಿಸಿಲಿನಂತೆ ತೋರುತಿರ್ಪುದು. ಕಳೆಯ ಮನೆಯಲ್ಲಿ ಎರಡಂಗುಲ ಪ್ರಮಾಣ. ಮೂಲಪ್ರಕೃತಿ ಮೂಗಿನಮೇಲೆ ಭ್ರೂಮಧ್ಯ ಪ್ರಣವದಲ್ಲಿ ಓಂಕಾರಧ್ವನಿಯ ಝೇಂಕಾರದಂತೆ, ಘಂಟೆಯ ಬಾರಿಸಿದಂತೆ, ತಟತಟನೆ ಹಾರಿ ಅದು ಭ್ರೂಮಧ್ಯಸ್ಥಾನದಲ್ಲಿ ತೋರುವುದು. ನಾದವೇ ಶಬ್ದ, ನಿಃಶಬ್ದವೇ ಬಿಂದುಮಯ. ನಾದದೊಳಗಿರ್ದ ನಾದವೇ ಓಂಕಾರ. ಚಿಜ್ಜ್ಯೋತಿಯ ಪ್ರಕಾಶ ಭ್ರೂಮಧ್ಯದ ಪಣೆಯ ಮೇಲೆ ಎರಡಂಗುಲದಲ್ಲಿ ಕಾಣಿಸುತ್ತಿಹುದು. ಅದು ಮನದಿಂದೆ ಕಂಡಿತೋ ಕಣ್ಣಿನಿಂದ ಕಂಡಿತೋ ಎಂದಡೆ, ನೆನಹು ಎಂಬ ಅಂತಃಕರಣ ಓಂ ನಮಃಶಿವಾಯ ಎಂಬ ಪ್ರಣವಜ್ಯೋತಿಯ ತೋರಿತ್ತು. ಚಿತ್ತದ ತೋರಿಕೆ ಅರವತ್ತಾರುಕೋಟಿ ಪ್ರಣವಜ್ಯೋತಿಯ ಕಿರಣದಲ್ಲಿ ತೇರಿನ ಬದಿಯ ಬಿರಿಸಿನೋಪಾದಿಯ ನೆನಹು ಮಾತ್ರಕ್ಕೆ ತೋರುತ್ತಿಹುದು. ಹೊರದೃಷ್ಟಿಯ ಒಳಗಿಟ್ಟು, ಒಳದೃಷ್ಟಿಯ ಹೊರಗಿಟ್ಟು ಪರಿಪೂರ್ಣವಾಗಲು, ಒಳಹೊರಗೆ ನೋಡುವ ಶಿವಶರಣರ ಮನ ಭಾವಕ್ಕೆ ಆನಂದವೇ ತೋರುತ್ತಿಹುದು. ದಿನಕರನ ಕಾಂತಿ, ಮಧ್ಯಾಹ್ನದ ಬಿಸಿಲು, ಅಂತರಂಗದ ಛಾಯೆಯಂತೆ, ನಿರ್ಮಲವಾದ ದರ್ಪಣದ ಪ್ರತಿಬಿಂಬದಂತೆ, ತನ್ನ ರೂಪಂಗಳ ತಾನೆ ನೋಡಿದಾತನು ಜೀವನ್ಮುಕ್ತನು. ಆತ ಭವದಬಳ್ಳಿಯ ಹರಿದು ನಿತ್ಯಾನಂದ ನಿರ್ಮಳ ನಿರಾವರಣ ನಿಜ ಚಿನ್ಮಯನಾಗಿಹನು. ಇನ್ನು `ಓಂ ನಮಃಶಿವಾಯ' ಎಂಬ ಊಧ್ರ್ವಪ್ರಣವ. ಅಳ್ಳನೆತ್ತಿಯ ಸ್ಥಾನದಲ್ಲಿ ಅರುಹಿನ ಮನೆಯುಂಟು. ಅದಕ್ಕೆ ತಟಿಮಂತ್ರ. ಅಂತರಂಗದ ಬಾಯಲ್ಲಿ ಎಡಬಲವು ಎರಡು ಕರ್ಣದ್ವಾರಂಗಳಲ್ಲಿ ನುಡಿಯ ಕೇಳಿದಡೆ ಸುನಾದವಾಯಿತ್ತು. ಅದು ದಶನಾದಂಗಳಿಂದೆ ಶರಧಿ ನಿರ್ಝರ ಮೇಘ ಮುರಜ ಭೇರಿ ಕಹಳೆ ಘಂಟೆ ಶಂಖ ವೀಣೆ ಭ್ರಮರನಾದಂಗಳೆಂಬ ದಶನಾದಂಗಳನು ಗುರುಮುಖದಿಂದರಿತು ಹಗಲಿರುಳು ಆ ದಶನಾದಂಗಳೊಳಗಾದ ಸುನಾದವನು ಎಡೆದೆರಹಿಲ್ಲದೆ ಲಾಲಿಸಿ ಕೇಳುವುದು ಶಿವಯೋಗೀಶ್ವರರು. ಅದು ಪ್ರಸಾದಲಿಂಗಸ್ಥಲ, ವಿಶುದ್ಧಿಯ ಮನೆ ; ಶರಣಸ್ಥಲ. ಆ ಸ್ಥಲದಲ್ಲಿ ನಾದವ ಕೇಳಿದವರಿಗೆ ಜಾಗ್ರ ಸ್ವಪ್ನ ಸುಷುಪ್ತಿಗಳೆಂಬ ಮೂರವಸ್ಥೆಗಳು, ತನುತ್ರಯಂಗಳು ತೂರ್ಯದಲ್ಲಿ ಹರಿದುಹೋಗುವವು. ಸುನಾದದಲ್ಲಿ ಮನಸ್ಸಿಟ್ಟಡೆ ಓಂ ನಮಃಶಿವಾಯ ಎಂಬ ಪ್ರಣವನಾದವ ಕೇಳಿದವರಿಗೆ ಸ್ವಪ್ನವು ಎಂದಿಗೂ ತೋರದು. ಇರುಹೆ ಸುಳಿದಡೆ ಎಚ್ಚರಿಕೆ, ದಿಗಿಲುಭುಗಿಲೆಂದಡೆ ನೀನಾರೆಲಾ ಎಂದು ಮಾತನಾಡಿಸಿಬಿಡುವನು. ಆ ಪ್ರಣವಘೋಷ ಸತ್ತೆನೆಂಬಂತೆ ದಿವಸ ಹನ್ನೆರಡು ತಾಸಿನೊಳಗೆ ತನುವ ಬಿಡುವ ಸಮಯದಲ್ಲಿ, ಆ ಘೋಷ ನಿರ್ಘೋಷವಾಗಿ ನಾದ ನುಡಿಯದು. ಅದು ಲಕ್ಷವಿಟ್ಟು ನೋಡಿದಡೆ ತೋರುವುದು. ಅಂಗುಲ ಪ್ರಮಾಣವಾಗಿ ವಸ್ತುವು ಅಂಗುಷ್ಟಕ್ಕೆ ಬರುವುದು. ವೃಕ್ಷವನೇರಿದ ಸರ್ಪನಂತೆ ಬ್ರಹ್ಮರಂಧ್ರದ ಕೊನೆಗೇರುವುದು. ಹೆದ್ದುಂಬಿಯ ಕೊಳವಿಯೋಪಾದಿಯಲ್ಲಿ ವಸ್ತುವು ಅಳ್ಳಿನೆತ್ತಿಯ ಸ್ಥಾನದಲ್ಲಿ ಏರಿ ಹೋಗುವುದು. ಈ ಮನೆಯ ಶಿವಶರಣ ಬಲ್ಲ. ಇದು ಹನ್ನೆರಡು ತಾಸು ಪುರಸತ್ತಿಗೆಯ ಹೇಳಿದ ಅರುಹು. ಇಂತಪ್ಪ ವಸ್ತುವಿನ ನಿಲುಕಡೆಯ ಬಲ್ಲ ಶರಣನು. ತನ್ನವಸಾನಕಾಲದ ಎಚ್ಚರಿಕೆಯನರಿದು, ಗೋವು ಮಲಗುವಷ್ಟು ಧರಣಿಯ ಸಾರಣಿಯ ಮಾಡುವುದು. ಗೋಮಯ ಗೋಮೂತ್ರ ಗೋಕ್ಷೀರ ಗೋದಧಿ ಗೋಘೃತ ಗೋರೋಚನ ಎಂಬ ಷಡುಸಮ್ಮಾರ್ಜನೆಯ ಮಾಡುವುದು. ಶಿವಜಂಗಮದ ಧೂಳಪಾದಾರ್ಚನೆಯ ಉದಕಮಂ ನೀಡಿ ಸಮ್ಮಾರ್ಜನೆಯ ಮಾಡುವುದು. ರಂಗವಲ್ಲಿಯ ತುಂಬುವುದು, ಭಸ್ಮವ ತಳೆವುದು. ಪಾದೋದಕ ಪ್ರಸಾದಮಂ ಸಲಿಸಿ, ಶಿವಗಣಂಗಳಿಗೆ ವಂದನೆಯ ಮಾಡಿ, ಆ ಸಮ್ಮಾರ್ಜನೆಯ ಮಾಡಿದ ಗದ್ಗುಗೆಯ ಮೇಲೆ ಮುಹೂರ್ತವ ಮಾಡಿ, `ಓಂ ನಮಃಶಿವಾಯ' ಎಂಬ ಪ್ರಣವಸ್ಮರಣೆಯ ಮಾಡುವುದು. ಹಸ್ತದಲ್ಲಿ ಇಷ್ಟಲಿಂಗವ ಹಿಡಿದುಕೊಂಡು ಇರವಂತಿಗೆ ಸೇವಂತಿಗೆ ಮೊಲ್ಲೆ ಮಲ್ಲಿಗೆ ಜಾಜಿ ಕರವೀರ ಸುರಹೊನ್ನೆ ಸಂಪಿಗೆ ಮರುಗ ಪಚ್ಚೆ ದವನ ಬಿಲ್ವಪತ್ರೆ ಮೊದಲಾದ ಸಮಸ್ತ ಪುಷ್ಪ ಪತ್ರೆಗಳ ಧರಿಸಿ, ಆ ಶಿವಲಿಂಗವನು ಮನವೊಲಿದು ಕಂಗಳ ತುಂಬಿ ನೋಡುತ್ತ, ದೇವಭಕ್ತರು ಬಂದಡೆ ಶರಣಾರ್ಥಿ ಎಂದು, ಮಜ್ಜನವ ನೀಡಿಸಿ, ವಿಭೂತಿಯ ಧರಿಸಿ, ಪುಷ್ಪಪತ್ರೆಗಳ ಧರಿಸಿ ಎಂದು ಅವರ ಪಾದವಿಡಿದು, ಶರಣಾರ್ಥಿ ಸ್ವಾಮಿಗಳಿಗೆ ಎಂದು ಹೇಳಿ, ಶಿವಾರ್ಪಣವ ಮಾಡಿ ಎಂದು ಬಿನ್ನಹವ ಮಾಡುವುದು. ಮದುವೆ ಮಾಂಗಲ್ಯ ಅರ್ತಿ ಉತ್ಸಾಹ ಶಿಶುವಿನ ಹೆಸರಿಡುವ ಹಾಗೆ ಹರುಷ ಪರುಷ ಧೈರ್ಯವೇ ಭೂಷಣವಾಗಿ ನಿರೋಧಂಗಳ ಮಾಡದೆ ``ಓಂ ನಮಃಶಿವಾಯ' ಎಂಬ ಮಂತ್ರ ಭೋರ್ಗರೆಯೆ ನಿರ್ಮಲ ನೈಷಿ*ಕದಿಂದೆ ಶಿವಜಂಗಮದ ಪಾದವನು ಮಸ್ತಕದ ಮೇಲೆ ಇಡಿಸುವುದು. ಹಿತವಂತರಾದವರು ವೀರಶೈವ ಪರಮವಚನಂಗಳಂ ಕೇಳಿಸುವುದು. ಎಡಬಲದಲ್ಲಿರ್ದ ಸಕಲ ಭಕ್ತರು ಮಹೇಶ್ವರರು `ಓಂ ನಮಃಶಿವಾಯ' ಎಂಬ ಶಿವಮಂತ್ರವನ್ನು ಆ ಶರಣನ ಕರ್ಣಂಗಳಲ್ಲಿ ಉಚ್ಚರಿಸುವುದು. ಈ ಹಡಗದ ಹಗ್ಗವ ಮತ್ತೊಂದು ಹಡಗಕ್ಕೆ ಹಾಕಿ ಬಿಗಿದಡೆ, ಹಡಗಕ್ಕೆ ಹಡಗ ಕೂಡಿ, ಸಮುದ್ರದ ತೆರೆಯೋಪಾದಿಯಲ್ಲಿ ಹಡಗವ ಬಿಟ್ಟು ಪ್ರತಿಹಡಗದೊಳಗೆ ಮೂರ್ತವ ಮಾಡಿದಂತೆ, ಮಂತ್ರಮಂತ್ರವು ಸಂಬಂಧವಾಗಿ, ಉರಿ ಕರ್ಪುರ ಕೊಂಡಂತಾಯಿತ್ತು ಶರಣನ ದೇಹಪ್ರಾಣವು. ಇದು ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ಅತಿ ರಹಸ್ಯ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->