ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯೆಯಿಂದಾದ ಸಂಸಾರದಡವಿಯೊಳಗೆ ತಿರಿಗಿ ತಿರಿಗಿ ಘಾಸಿಯಾಗಿ, ಈಷಣತ್ರಯವೆಂಬ ಮೋಹಿನಿಯ ಕೈವಶವಾಗಿ, ಅರಿಗಳೊಡನೆ ಪುದುವಾಳಾಗಿ, ಆಶೆಯಾಮಿಷ ತಾಮಸಂಗಳಿಂದ ನೊಂದು, ತಾಪತ್ರಯಗಳಿಂದ ಬೆಂದು, ಸಂಸಾರ ಸರ್ವಮುಖವಾಗಿ ನುಂಗಿ ಉಗುಳುತ್ತಿರಲೆಂತಕ್ಕೆ ನಿಮ್ಮ ನೆನಹೆಂಬ ಕಿಚ್ಚು ಭವಾರಣ್ಯವ ಸುಡಲು, ಕರ್ಮದ ಕೈಬೆಂದು ಮಾಯಾಪಾಶವುರಿದು, ಮಲ ನಿರ್ಮಲವಾಗಿ, ಬಿಂದು ಭುವನವ ಹೊದ್ದದೆ, ತೀರೋಧಾನ ನಿರೋಧಾನವೆಯ್ದಿ, ನಿಮ್ಮಲ್ಲಿ ಅಚ್ಚೊತ್ತಿದಂತಿರಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಪುರುಷನಿಲ್ಲದ ಬಳಿಕ ಸ್ತ್ರೀಗೆ ಗರ್ಭವಿನ್ನೆಲ್ಲಿಯದೊ ? ಬೀಜವಿಲ್ಲದ ಬಳಿಕ ವೃಕ್ಷವಿನ್ನೆಲ್ಲಿಯದೊ ? ಹಾಲಿಲ್ಲದ ಬಳಿಕ ತುಪ್ಪವಿನ್ನೆಲ್ಲಿಯದೊ ? ಪರಮ ಶ್ರೀಗುರುವಿನುಪದೇಶವಿಲ್ಲದ ಬಳಿಕ ಲಿಂಗಕ್ಕೆ ಪರಮಶಿವಕಳೆಯಿನ್ನೆಲ್ಲಿಯದೊ ? ಇದು ಕಾರಣ, ಉಪದೇಶವಿಲ್ಲದ ಲಿಂಗ ಜಡಪಾಷಾಣವೆಂದೆನಿಸಿತ್ತು . ಆ ಜಡಪಾಷಾಣವ ಅನಂತಕೋಟಿವರ್ಷ ಪೂಜೆಯ ಮಾಡಿದರು ವ್ಯರ್ಥವಲ್ಲದೆ ಸಾರ್ಥವಿಲ್ಲ ನೋಡಾ ! ಇಂತೀ ಭೇದವನರಿಯದೆ ಮೂಢಮತಿಯಿಂದೆ ಜಡಪಾಷಾಣವ ಪೂಜಿಸಿ ಈಷಣತ್ರಯವೆಂಬ ಸಂಕೋಲೆಯಲ್ಲಿ ಬಂಧನವಡೆದು ಭವದಲ್ಲಿ ಘಾಸಿಯಾಗುವ ಹೇಸಿಮೂಳರ ಕಂಡು ನಾಚಿತ್ತಯ್ಯಾ ಎನ್ನ ಮನವು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶೀಲವಂತರು ಶೀಲವಂತರೆಂದೆಂಬರು ನಾವಿದನರಿಯೆವಯ್ಯ. ಅಂಗನೆಯರ ಅಧರಪಾನವು ತನ್ನ ಉದರವ ಹೊಗುವನ್ನಕ್ಕ ಶೀಲವೆಲ್ಲಿಯದೊ ? ಈಷಣತ್ರಯವೆಂಬ ಸೊಣಗ ಬೆಂಬತ್ತಿ ಬರುತ್ತಿರಲು ಶೀಲವೆಲ್ಲಿಯದೊ ? ಹೆರಸಾರಿ ಮನವು ಮಹದಲ್ಲಿ ನಿಂದರೆ ಶೀಲ, ಪರಿಣಾಮ ನೆಲೆಗೊಂಡರೆ ಶೀಲ. ಇದು ಕಾರಣ ಕೂಡಲಚೆನ್ನಸಂಗನಲ್ಲಿ ಶೀಲವಂತರಪೂರ್ವ
--------------
ಚನ್ನಬಸವಣ್ಣ
ಗುರುಪದವ ಮಹತ್ತುಪದವೆಂದು ನುಡಿದು, ನಡೆಯಲರಿಯದ ತುಡುಗುಣಿಗಳು ನೀವು ಕೇಳಿರೊ; ಗುರುಪದವಾವುದೆಂಬುದರಿಯಿರಿ, ಮಹತ್ತುಪದವಾವುದೆಂಬುದ ಮುನ್ನವೆ ಅರಿಯಿರಿ. ಆಚಾರಂ ಗುರುಪದ_ಎಂಬುದನರಿದು, ಅಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳನತಿಗಳೆದು, ಈಷಣತ್ರಯವೆಂಬ ವಾಸನೆಯ ಹೊದ್ದದೆ, ದಾಸಿ, ವೇಸಿ, ಪರಸ್ತ್ರೀಯರ ಸಂಗವೆಂಬ ಹೇಸಿಕೆಯ ಮನದಲ್ಲಿ ನೆನೆಯದೆ, ಪತಿತಾಶ್ರಮಾಶ್ರಿತನಾಗದೆ, ಭವಭಾರಿ ಶೈವಕ್ಷೇತ್ರಂಗಳಂ ಹೊದ್ದದೆ, ಭವಿಶೈವದೈವಂಗಳನಾರಾಧಿಸದೆ, ಭವಿಯನಾಶ್ರಯಿಸದೆ ಭವಿಸಂಗ, ಭವಿಪಙಫ್ತೆ, ಭವಿದೃಷ್ಟಿ, ಭವಿಗೇಹಾನ್ನ, ಭವಿತತ್ಸಂಭಾಷಣೆಯಂ ಬಿಟ್ಟು ಭಕ್ತಾಚಾರ ಸದಾಚಾರವಾಗಿಪ್ಪುದೆ ಗುರುಪದ. ಇನ್ನು ಮಹತ್ತುಪದವಾವುದೆಂದಡೆ; ಷಟ್‍ಸ್ಥಲಾಚಾರಉದ್ಧಾರಂ ಮನ್ಮತ್ವಂತು ಕಥ್ಯತೇ ಎಂದುದಾಗಿ, ಗುರುಲಿಂಗ ಜಂಗಮಲಿಂಗ ಪಾದೋದಕ ಪ್ರಸಾದ ಭಕ್ತಾಚಾರಂಗಳನುದ್ಧರಿಸುತ್ತ, ಎಲ್ಲಿ ಗುರು ಎಲ್ಲಿ ಲಿಂಗ ಎಲ್ಲಿ ಜಂಗಮ ಎಲ್ಲಿ ಪಾದೋದಕ ಎಲ್ಲಿ ಪ್ರಸಾದ ಎಲ್ಲಿ ಭಕ್ತಾಚಾರವಿದ್ದಲ್ಲಿಯೇ ಹೊಕ್ಕು, ಅವರೊಕ್ಕುದ ಕೊಂಡು ನಡೆಯಬಲ್ಲಡೆ ಮಹತ್ತುಪದ, ಇನಿತಿಲ್ಲದೆ ಗುರುವನತಿಗಳೆದು ಗುರುದ್ರೋಹಿಗಳಾಗಿ, ಲಿಂಗವನತಿಗಳೆದು ಲಿಂಗದ್ರೋಹಿಗಳಾಗಿ, ಜಂಗಮವನತಿಗಳೆದು ಜಂಗಮದ್ರೋಹಿಗಳಾಗಿ, ಆಚಾರವನತಿಗಳೆದು ಭಕ್ತಾಚಾರದ್ರೋಹಿಗಳಾಗಿ, ಹೊನ್ನು ಹೆಣ್ಣು ಮಣ್ಣಿಗಾಗಿ ಹೊರವೇಷವ ತೊಟ್ಟು, ಭಕ್ತಜಂಗಮದ ಅರ್ಥಪ್ರಾಣಂಗಳಿಗಳುಪಿ, ತೊತ್ತು ಸೊಳೆಯರೆಂಜಲ ತಿಂದು, ಮತ್ತೆ ಗುರುಪದ ಮಹತ್ತುಪದವೆಂದು ತಪ್ಪಿ ಬಗ?ುವ ಶ್ವಾನಜಂಗುಳಿಗಳ ಜಂಗಮವೆಂದಾರಾಧಿಸಿ, ಪ್ರಸಾದವ ಕೊ?್ಳ ಸಲ್ಲದು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
-->