ಅಯ್ಯಾ, ನಾವು ಪರಮವಿರಕ್ತರು, ಪಟ್ಟದೊಡೆಯರು,
ಅತೀತ ಚರಮೂರ್ತಿಗಳೆಂದು ಶಂಖ ಗಿಳಿಲು ದಂಡಾಗ್ರವ ಪಿಡಿದು,
ಕಾವಿ ಕಾಷಾಯಾಂಬರವ ಹೊದ್ದು, ಮಹಾಘನಲಿಂಗ ಚರಮೂರ್ತಿಗಳೆಂದು
ಚೆನ್ನಾಗಿ ನುಡಿದುಕೊಂಬ ತೊನ್ನ ಹೊಲೆ ಮಾದಿಗರ ಪ್ರಸಂಗಕ್ಕೆ ಮನವೆಳಸದೆ,
ಮುಖವೆತ್ತಿ ನೋಡದೆ, ಶಬ್ದಮುಗ್ಧನಾಗಿ ಸುಮ್ಮನೆ ಕುಳಿತಿರ್ದನು ಕಾಣಾ
ನಿಮ್ಮ ಶರಣ. ಅದೇನು ಕಾರಣವೆಂದಡೆ:
ತನ್ನ ತಾನಾರೆಂದರಿಯದೆ, ತನ್ನ ಇಷ್ಟ ಮಹಾಘನಲಿಂಗದ ಗೊತ್ತ ಮುಟ್ಟದೆ,
ತನುಮನಧನವೆಂಬ ತ್ರಿವಿಧಪ್ರಸಾದವನರ್ಪಿಸಿ,
ತ್ರಿವಿಧ ಪ್ರಸಾದವ ಗರ್ಭೀಕರಿಸಿಕೊಂಡ ಪ್ರಸನ್ನ ಪ್ರಸಾದವ ಸ್ವೀಕರಿಸಿ,
ಪರತತ್ವ ಪ್ರಸಾದಮೂರ್ತಿ ತಾನಾಗಲರಿಯದೆ,
ಉಚ್ಚಂಗಿ ದುರ್ಗಿಗೆ ಬಿಟ್ಟ ಪೋತರಾಜನಂತೆ
ಮಾರು ಮಾರು ಜಡೆ ಮುಡಿ ಗಡ್ಡಗಳ ಬಿಟ್ಟುಕೊಂಡು,
ಡೊಂಬ ಜಾತಿಕಾರರಂತೆ ವೇಷವ ತೊಟ್ಟು,
ಸಂಸ್ಕøತಾದಿ ಪ್ರಕೃತಾಂತ್ಯಮಾದ ನಾನಾ ಶಾಸ್ತ್ರವ ಹೇಳಿ,
ಸುಡುಗಾಡಸಿದ್ಧಯ್ಯಗಳಂತೆ ಕುಟಿಲ ಕುಹಕ ಯಂತ್ರ ತಂತ್ರಗಳ ಕಟ್ಟುತ,
ಪುರಜನರ ಮೆಚ್ಚಿಸಬೇಕೆಂದು
ಅಯ್ಯಾ, ನಾವು ಕೆರೆ ಬಾವಿ ಮಠಮಾನ್ಯ ಮದುವೆ ಮಾಂಗಲ್ಯ
ದೀಕ್ಷಾಪಟ್ಟ ಪ್ರಯೋಜನ ಔತಣ ಅನ್ಯಕ್ಷೇತ್ರ ಅರವಟ್ಟಿಗೆ
ದಾಸೋಹ ಪುರಾಣ ಪುಸ್ತಕ ಮಾಡಿಸಬೇಕೆಂದು
ಗುರುಲಿಂಗಜಂಗಮಕ್ಕಲ್ಲದೆ ನಿರಾಭಾರಿ ವೀರಶೈವಕ್ಕೆ ಹೊರಗಾಗಿ,
ನಾನಾ ದೇಶವ ತಿರುಗಿ, ಹುಸಿಯ ಬೊಗಳಿ,
ವ್ಯಾಪಾರದ ಮರೆಯಿಂದ ನಡುವೂರ ಬೀದಿ ನಡುವೆ ಕುಳಿತು,
ಪರರೊಡವೆಯ ಅಪಹರಿಸುವ ಸೆಟ್ಟಿ ಮುಂತಾದ
ಸಮಸ್ತ ಕಳ್ಳರ ಮಕ್ಕಳ ಕಾಡಿ ಬೇಡಿ,
ಅವರು ಕೊಟ್ಟರೆ ಹೊಗಳಿ, ಕೊಡದಿರ್ದಡೆ ಬೊಗಳಿ,
ಆ ಭ್ರಷ್ಟ ಹೊಲೆ ಮಾದಿಗರು ಕೊಟ್ಟ ದ್ರವ್ಯಂಗಳ ಕೊಂಡುಬಂದು
ಚೋರರೊಯ್ವರೆಂದು ಮಠದೊಳಗೆ ಮಡಗಿಕೊಂಡಂಥ
ದುರ್ಗುಣ ದುರಾಚಾರಿಗಳ ಶ್ರೀಗುರು ಲಿಂಗ ಜಂಗಮವೆಂದು
ಕರೆತಂದು, ತೀರ್ಥ ಪ್ರಸಾದವ ತೆಗೆದುಕೊಂಬವರಿಗೆ
ಇಪ್ಪತ್ತೆಂಟುಕೋಟಿಯುಗ ಪರಿಯಂತರದಲ್ಲಿ
ನರಕ ಕೊಂಡದಲ್ಲಿಕ್ಕುವ ಕಾಣಾ, ನಿಮ್ಮ ಶರಣ ಕಲಿದೇವರದೇವ.