ಸಾಗರ ಘನವೆಂದಡೆ, ಧರೆಯೊಳಗಡಗಿತ್ತು. ಧರೆ ಘನವೆಂದಡೆ, ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು. ನಾಗೇಂದ್ರನ ಘನವೆಂದಡೆ, ದೇವಿಯರ ಕಿರುವೆರಳಿನ ಮುದ್ರಿಕೆಯಾಯಿತ್ತು. ಅಂಥ ದೇವಿಯ ಘನವೆಂದಡೆ, ಶಿವನರ್ಧಾಂಗಿಯಾದಳು, ಶಿವ ಘನವೆಂದಡೆ, ಬಾಣನ ಬಾಗಿಲ ಕಾಯ್ದ, ನಂಬಿಯ ಹಡಪವ ಹಿಡಿದ. ಇದು ಕಾರಣ, ಸೊಡ್ಡಳಾ ನಿಮ್ಮ ಭಕ್ತರೇ ಘನ.
ಉರಗನ ಫಣಾಮಣಿಯ ಬೆಳಗಿನಲ್ಲಿ ನಿಂದ ಪ್ರಸದಿ ಕರಿಯ ಕೊಂದು ಹರಿಯ ಬೆಳಗಿನಲ್ಲಿ ನಿಂದ ಪ್ರಸಾದಿ. ಶಿರದ ಮೇಲೆ ನಿಂದ ಗಂಗೆಯ ಬೆಳಗಿನಲ್ಲಿ ನಿಂದ ಪ್ರಸಾದಿ. ಉರಮಧ್ಯದಲ್ಲಿಪ್ಪ ಪರಂಜ್ಯೋತಿಯ ಬೆಳಗಿನಲ್ಲಿ ನಿಂದ ಪ್ರಸಾದಿ. ಪೂರ್ವಪಶ್ಚಿಮ ಏಕವಾದ ಬೆಳಗಿನಲ್ಲಿ ನಿಂದ ಪ್ರಸಾದಿ. ಇಂತೀ ಘನವನೆಲ್ಲ ಒಳಕೊಂಡ ಮಹಾಬೆಳಗಿನಲ್ಲಿ ನಿಂದ ಪ್ರಸಾದಿ. ಅಯ್ಯಾ ಚೆನ್ನಮಲ್ಲೇಶ್ವರಾ, ಆ ಪ್ರಸಾದಿಯ ಪ್ರಸಾದವ ಕೊಂಡು ನಾ ಉರಿಯುಂಡ ಕರ್ಪುರದಂತಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.