ಅಯ್ಯ, ನಿಃಶೂನ್ಯಾಕೃತಿ, ಕ್ಷಕಾರ ಪ್ರಣಮ,
ದಿವ್ಯನಾದ, ಶಿಖಾಚಕ್ರ, ಮಹಾಜ್ಯೋತಿವರ್ಣ, ನಿರಾಲಂಬಸ್ಥಲ,
ಚಿನುಮಯ ತನು, ನಿರಾಳ ಹಸ್ತ, ಶೂನ್ಯಲಿಂಗ,
ಉನ್ಮನಿಮುಖ, ನಿರಹಂಕಾರ ಭಕ್ತಿ, ಪರಿಪೂರ್ಣಪದಾರ್ಥ,
ಪರಿಪೂರ್ಣಪ್ರಸಾದ, ಪರಶಿವ ಪೂಜಾರಿ, ಪರಶಿವನದ್ಥಿದೇವತೆ,
ಅವಿರಳ ಸಾದಾಖ್ಯ, ಆಗಮವೆಂಬ ಲಕ್ಷಣ,
ನಿರ್ಮಾಯವೆಂಬ ಸಂಜ್ಞೆ, ದಿವ್ಯನಾದ, ಘೋಷದಿಕ್ಕು,
ಮನೋರ್ಲಯ ವೇದ, ಚಿಚ್ಚಂದ್ರನೆ ಅಂಗ, ದಿವ್ಯಾತ್ಮ,
ನಿಭ್ರಾಂತಿ ಶಕ್ತಿ ಅನಂತಕಲೆ
ಇಂತು ಇಪ್ಪತ್ತುನಾಲ್ಕು ಸಂಕೀಲಂಗಳನೊಳಕೊಂಡು
ಎನ್ನ ಶಿಖಾಚಕ್ರವೆಂಬ ಹೇಮಾದ್ರಿಪರ್ವತಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ
ಶಿವಮಂತ್ರ ಶಿಕ್ಷಾಕರ್ತೃಸ್ವರೂಪವಾದ ಶೂನ್ಯಲಿಂಗವೆ
ಹಿರಣ್ಯೇಶ್ವರಲಿಂಗವೆಂದು ಕರಣತ್ರಯವ ಮಡಿಮಾಡಿ,
ಅನುಪಮವೆಂಬ ಜಲದಿಂ ಮಜ್ಜನಕ್ಕೆರದು,
ಚಂದ್ರ ನಿವೃತ್ತಿಯಾದ ಗಂಧವ ಧರಿಸಿ,
ವಿರಳ ಅವಿರಳವಾದಕ್ಷತೆಯನಿಟ್ಟು,
ಅಲ್ಲಿಹ ತ್ರಿದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ,
ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಹ ಮಹಾಜ್ಯೋತಿವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ,
ಅಲ್ಲಿಹ ನಿಃಸಂಸಾರಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ,
ಸದಾನಂದವೆಂಬಾಭರಣವ ತೊಡಿಸಿ,
ಪರಿಪೂರ್ಣವೆಂಬ ನೈವೇದ್ಯವನರ್ಪಿಸಿ,
ನಿರಹಂಕಾರವೆಂಬ ತಾಂಬೂಲವನಿತ್ತು,
ಇಂತು ಶೂನ್ಯಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ,
ಶತಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಶೂನ್ಯಲಿಂಗವನ್ನು
ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು,
ಆ ಶೂನ್ಯಲಿಂಗವ ಪೂಜೆಯ ಸಮಾಪ್ತವ ಮಾಡಿ,
ಜ್ಞಾನ ಜಪವೆಂಬ ದ್ವಾದಶ ಪ್ರಣಮ ಮಂತ್ರಗಳಿಂದೆ ನಮಸ್ಕರಿಸಿ,
ಆ ಶೂನ್ಯಲಿಂಗದ ತಾನೆಂದರಿದು,
ಕೂಡಿ ಎರಡಳಿದು ನಿಸ್ಸಂಸಾರಿಯಾಗಿ ಆಚರಿಸಬಲ್ಲಾತನೆ
ನಿರಹಂಕಾರ ಭಕ್ತಿಯನುಳ್ಳ ನಿರಾತಂಕ ನೋಡ
ಸಂಗನಬಸವೇಶ್ವರ.