ಅಥವಾ

ಒಟ್ಟು 49 ಕಡೆಗಳಲ್ಲಿ , 20 ವಚನಕಾರರು , 46 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರ ಗುರುಸ್ಥಲ, ಅನುಭಾವ ಲಿಂಗಸ್ಥಲ, ಅವಧಾನ ಅರ್ಪಿತಸ್ಥಲ, ಪರಿಣಾಮ ಪ್ರಸಾದಿಸ್ಥಲ, ಸಮಾಧಾನ ಶರಣಸ್ಥಲ, ಅರಿವು ನಿಃಪತಿಯಾಗಿ ತೆರಹಿಲ್ಲದ ನಿಜದಲ್ಲಿಲಿಂಗೈಕ್ಯವು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಇನ್ನೊಂದು ಪ್ರಕಾರದ ಷಡ್ಲಿಂಗನ್ಯಾಸಸ್ಥಲವೆಂತೆಂದಡೆ : ಪೃಥ್ವಿಯೇ ಅಂಗವಾದ ಭಕ್ತನ ಸುಚಿತ್ತಹಸ್ತದಲ್ಲಿ ಆಚಾರಲಿಂಗ ನ್ಯಾಸವಾಗಿಹುದು. ಅಪ್ಪುವೆ ಅಂಗವಾದ ಮಹೇಶ್ವರನ ಸುಬುದ್ಧಿಹಸ್ತದಲ್ಲಿ ಗುರುಲಿಂಗ ನ್ಯಾಸವಾಗಿಹುದು. ಅನಲಾಂಗವಾದ ಪ್ರಸಾದಿಯ ನಿರಹಂಕಾರಹಸ್ತದಲ್ಲಿ ಶಿವಲಿಂಗ ನ್ಯಾಸವಾಗಿಹುದು. ವಾಯುವೇ ಅಂಗವಾದ ಪ್ರಾಣಲಿಂಗಿಯ ಸುಮನವೆಂಬ ಹಸ್ತದಲ್ಲಿ ಚರಲಿಂಗ ನ್ಯಾಸವಾಗಿಹುದು. ವ್ಯೋಮಾಂಗವಾದ ಶರಣನ ಸುಜ್ಞಾನಹಸ್ತದಲ್ಲಿ ಪ್ರಸಾದಲಿಂಗ ನ್ಯಾಸವಾಗಿಹುದು. ಆತ್ಮಾಂಗವಾದ ಐಕ್ಯನ ಭಾವಹಸ್ತದಲ್ಲಿ ಮಹಾಲಿಂಗ ನ್ಯಾಸವಾಗಿಹುದು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆಚಾರಂ ಚಿತ್ತಹಸ್ತಂ ಚ ಬುದ್ಧಿಹಸ್ತೇ ಗುರುಸ್ತಥಾ | ಶಿವಲಿಂಗಂ ಚ ಅಹಂಕಾರೇ ಚರಲಿಂಗ ಮನೇ ತಥಾ || ಪ್ರಸಾದಂ ಜ್ಞಾನಹಸ್ತೇ ಚ ಭಾವಹಸ್ತೇ ಮಹಸ್ತಥಾ | ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಚ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಗಸ್ಥಲ ಮೂರು, ಲಿಂಗಸ್ಥಲ ಮೂರು, ಜ್ಞಾನಸ್ಥಲ ಮೂರೆಂಬಲ್ಲಿ, ಆತ್ಮ ಹಲವು ರೂಪಾಗಿ ತೊಳಲುತ್ತಿದೆ ನೋಡಾ. ಅಂಗಸ್ಥಲದ ಲಿಂಗ, ಲಿಂಗಸ್ಥಲದ ಜ್ಞಾನ, ಜ್ಞಾನಸ್ಥಲದ ಸರ್ವಚೇತನಾದಿಗಳೆಲ್ಲ ಎಯ್ದುವ ಪರಿಯೆಂತು? ಎಯ್ದಿಸಿಕೊಂಬುವನಾರೆಂದು ನಾನರಿಯೆ. ಹಿನ್ನಿಗೆ ದಯವಾದಡೆ ಹರಿವುದಲ್ಲದೆ ಮುಮ್ಮೊನೆಗುಂಟೆ ಉಭಯ? ಪೂರ್ವಕ್ಕೆರಡು, ಉತ್ತರಕ್ಕೆ ಒಂದೆಂದಲ್ಲಿ, ನಿಶ್ಚಯವ ತಿಳಿಯಬೇಕು, ನಿ:ಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರುದ್ಥಿರದಲ್ಲಿ ಆಚಾರಲಿಂಗವಿಹುದು. ಮಾಂಸದಲ್ಲಿ ಗುರುಲಿಂಗವಿಹುದು. ಮೇದಸ್ಸಿನಲ್ಲಿ ಶಿವಲಿಂಗವಿಹುದು. ಅಸ್ಥಿಯಲ್ಲಿ ಚರಲಿಂಗವಿಹುದು. ಮಜ್ಜೆಯಲ್ಲಿ ಪ್ರಸಾದಲಿಂಗವಿಹುದು. ಶುಕ್ಲದಲ್ಲಿ ಮಹಾಲಿಂಗವಿಹುದು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆಚಾರಂ ರುದ್ಥಿರಾಂಗೇತು ಮಾಂಸಾಂಗೇ ಗುರುಲಿಂಗಕಂ | ಮೇಧಾಂಗೇ ಶಿವಲಿಂಗಂ ಚ ಅಸ್ಥ್ಯಂಗೇ ಚರಂ ತಥಾ || ಮಜ್ಜೇ ಪ್ರಸಾದಲಿಂಗಂ ಚ ಶುಕ್ಲಾಂಗೇ ಮಹಾಲಿಂಗಕಂ | ಇತಿ ಲಿಂಗಸ್ಥಲಂ ಜ್ಞಾತುಂ ಸುಸೂಕ್ಷ್ಮಂ ಶ್ರುಣು ಪಾರ್ವತೀ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ. ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ. ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ. ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ? ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ. ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು. ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು, ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ. ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ. ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ. ಇಂತೀ ತ್ರಿವಿಧಭೇದವ ಕೊಟ್ಟು ಬಂದು, ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ. ಹೇಳಿ ಕೆಟ್ಟ ಚೆನ್ನಬಸವಣ್ಣ, ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು. ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ. ಸಂದೇಹದಂಗವ ತಾಳಿರ್ದ ಪ್ರಭುದೇವರು. ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ. ಇಲ್ಲವೆಂಬೆನೆ ಸಮಯಕ್ಕೆ ದೂರ. ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ. ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು. ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ, ಕರ್ಮಕಾಂಡಿಯಾದ. ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ. ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ, ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ. ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ. ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ, ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ. ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶ್ರೀಪತಿ ಶಿವಲೆಂಕ ಪಂಡಿತಾರಾಧ್ಯ ಏಕಾಂತದರಾಮ ಇಂತೀ ಪ್ರಥಮದ ಆಚಾರ್ಯರು ಇಟ್ಟ ಮತಂಗಳಿಂದ ಗುರುಸ್ಥಲ ಲಿಂಗಸ್ಥಲ ಉಭಯಮಾರ್ಗ ಆಚಾರ್ಯಸ್ಥಲ ಷಡುಸ್ಥಲ ಒಳಗಾದ ನಾನಾಸ್ಥಲಜ್ಞರುಗಳಲ್ಲಿ ವರಪ್ರಸಾದಿ ಚನ್ನಬಸವಣ್ಣ ಅವರ ಕಾರುಣ್ಯಪ್ರಸಾದ ಎನಗಾಯಿತ್ತು. ಸಂಚಿತ ಪ್ರಾರಬ್ಧ ಆಗಾಮಿಗಳಲ್ಲಿ ಉಪಚಕ್ಷು ನೀನಾಗಿ ಸಲಹಿದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದಿಂತು ಲಿಂಗಸ್ಥಲವಾರಕ್ಕಂ ವಿವರ: ಆಚಾರಲಿಂಗಸ್ಥಲ ತ್ರಿವಿಧ:ಸದಾಚಾರ, ನಿಯತಾಚಾರ, ಗಣಾಚಾರ ಇದಕ್ಕೆ ವಿವರ: ಎಲ್ಲ ಜನವಹುದೆಂಬುದೆ ಸದಾಚಾರ. ಹಿಡಿದ ವ್ರತನಿಯಮವ ಬಿಡದಿಹುದೆ ನಿಯತಾಚಾರ. ಶಿವನಿಂದೆಯ ಕೇಳದಿಹುದೆ ಗಣಾಚಾರ. ಗುರುಲಿಂಗಸ್ಥಲ ತ್ರಿವಿಧ:ದೀಕ್ಷೆ, ಶಿಕ್ಷೆ, ಸ್ವಾನುಭಾವ. ಇದಕ್ಕೆ ವಿವರ : ದೀಕ್ಷೆಯೆಂದಡೆ ಗುರು, ಶಿಕ್ಷೆಯೆಂದಡೆ ಜಂಗಮ, ಸ್ವಾನುಭಾವವೆಂದಡೆ ತನ್ನಿಂದ ತಾನರಿವುದು. ಶಿವಲಿಂಗಸ್ಥಲ ತ್ರಿವಿಧ:ಇಷ್ಟಲಿಂಗ, ಪ್ರಾಣಲಿಂಗ, ತೃಪ್ತಿಲಿಂಗ ಇದಕ್ಕೆ ವಿವರ : ಶ್ರೀಗುರು ಕರಸ್ಥಲದಲ್ಲಿ ಅನುಗ್ರಹವ ಮಾಡಿಕೊಟ್ಟುದೀಗ ಇಷ್ಟಲಿಂಗ, ತನುಗುಣ ನಾಸ್ತಿಯಾದುದೇ ಪ್ರಾಣಲಿಂಗ, ಜಾಗ್ರಸ್ವಪ್ನಸುಷುಪ್ತಿಯಲ್ಲಿ ಲಿಂಗವಲ್ಲದೆ ಪೆರತೊಂದನರಿಯದಿಪ್ಪುದೆ ತೃಪ್ತಿಲಿಂಗ. ಜಂಗಮಲಿಂಗಸ್ಥಲ ತ್ರಿವಿಧ :ಸ್ವಯ, ಚರ, ಪರ, ಇದಕ್ಕೆ ವಿವರ : ಸ್ವಯವೆಂದಡೆ ತಾನು. ಚರವೆಂದಡೆ ಲಾಂಛನ ಮುಂತಾಗಿ ಚರಿಸುವುದು. ಪರವೆಂದಡೆ ಅರಿವು ಮುಂತಾಗಿ ಚರಿಸುವುದು. ಪ್ರಸಾದಲಿಂಗಸ್ಥಲ ತ್ರಿವಿಧ :ಶುದ್ಧ, ಸಿದ್ಧ, ಪ್ರಸಿದ್ಧ ಇದಕ್ಕೆ ವಿವರ : ಶುದ್ಧವೆಂದಡೆ ಗುರುಮುಖದಿಂದ ಮಲತ್ರಯವ ಕಳೆದುಳಿದ ಶೇಷ, ಸಿದ್ಧವೆಂದಡೆ ಲಿಂಗಮುಖದಿಂದ ಕರಣಮಥನಂಗಳ ಕಳೆದುಳಿದ ಶೇಷ. ಪ್ರಸಿದ್ಧವೆಂದಡೆ ಜಂಗಮಮುಖದಿಂದ ಸರ್ವಚೈತನ್ಯಾತ್ಮಕ ತಾನೆಯಾಗಿ ಖಂಡಿತವಳಿದುಳಿದ ಶೇಷ. ಮಹಾಲಿಂಗಸ್ಥಲ ತ್ರಿವಿಧ:ಪಿಂಡಜ, ಅಂಡಜ, ಬಿಂದುಜ. ಇದಕ್ಕೆ ವಿವರ : ಪಿಂಡಜವೆಂದಡೆ ಘಟಾಕಾಶ. ಅಂಡಜವೆಂದಡೆ ಬ್ರಹ್ಮಾಂಡ. ಬಿಂದುಜವೆಂದಡೆ ಮಹಾಕಾಶ. ಇಂತು ಲಿಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು. ಇನ್ನು ಅಂಗಸ್ಥಲವಾವುವೆಂದಡೆ: ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ. ಇನ್ನು ಅಂಗಸ್ಥಲವಾರಕ್ಕೆ ವಿವರ : ಭಕ್ತಸ್ಥಲ ತ್ರಿವಿಧ :ಗುರುಭಕ್ತ, ಲಿಂಗಭಕ್ತ, ಜಂಗಮಭಕ್ತ. ತನುಕ್ರೀಯಿಂದ ತನುಮನಧನವನರ್ಪಿಸುವನಾಗಿ ಗುರುಭಕ್ತ. ಮನಕ್ರೀಯಿಂದ ಮನತನುಧನವನರ್ಪಿಸುವನಾಗಿ ಲಿಂಗಭಕ್ತ. ಧನಕ್ರೀಯಿಂದ ಧನಮನತನುವನರ್ಪಿಸುವನಾಗಿ ಜಂಗಮಭಕ್ತ. ಮಾಹೇಶ್ವರಸ್ಥಲ ತ್ರಿವಿಧ:ಇಹಲೋಕವೀರ, ಪರಲೋಕವೀರ, ಲಿಂಗವೀರ. ಅದಕ್ಕೆ ವಿವರ : ಮತ್ರ್ಯಲೋಕದ ಮಹಾಗಣಂಗಳು ಮೆಚ್ಚುವಂತೆ, ಷಡ್ದರ್ಶನಂಗಳ ನಿರಸನವ ಮಾಡಿ, ತನ್ನ ಸಮಯಕ್ಕೆ ಪ್ರಾಣವ ವೆಚ್ಚಿಸುವನಾಗಿ ಇಹಲೋಕವೀರ. ದೇವಲೋಕದ ದೇವಗಣಂಗಳು ಮೆಚ್ಚುವಂತೆ, ಸರ್ವಸಂಗಪರಿತ್ಯಾಗವ ಮಾಡಿ ಚತುರ್ವಿಧಪದಂಗಳ ಧರ್ಮಾರ್ಥಕಾಮಮೋಕ್ಷಂಗಳ ಬಿಟ್ಟಿಹನಾಗಿ ಪರಲೋಕವೀರ. ಅಂಗಲಿಂಗಸಂಗದಿಂದ ಸರ್ವಕರಣಂಗಳು ಸನ್ನಹಿತವಾಗಿಪ್ಪನಾಗಿ ಲಿಂಗವೀರ. ಪ್ರಸಾದಿಸ್ಥಲ ತ್ರಿವಿಧ :ಅರ್ಪಿತಪ್ರಸಾದಿ, ಅವಧಾನಪ್ರಸಾದಿ, ಪರಿಣಾಮಪ್ರಸಾದಿ ಅದಕ್ಕೆ ವಿವರ : ಕಾಯದ ಕೈಯಲ್ಲಿ ಸಕಲಪದಾರ್ಥಂಗಳು ಇಷ್ಟಲಿಂಗಕ್ಕೆ ಕೊಟ್ಟು ಕೊಂಬನಾಗಿ ಅರ್ಪಿತಪ್ರಸಾದಿ. ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಪ್ರತಿಷೆ*ಯ ಮಾಡಿ, ಅಲ್ಲಲ್ಲಿ ಬಂದ ಸುಖವನಲ್ಲಲ್ಲಿ ಮನದ ಕೈಯಲ್ಲಿ ಕೊಟ್ಟು ಕೊಂಬನಾಗಿ ಅವಧಾನಪ್ರಸಾದಿ. ಅಂಗಾಶ್ರಯವಳಿದು ಲಿಂಗಾಶ್ರಯವುಳಿದು, ಭಾವಭರಿತನಾಗಿಪ್ಪನಾಗಿ ಪರಿಣಾಮಪ್ರಸಾದಿ. ಪ್ರಾಣಲಿಂಗಿಸ್ಥಲ ತ್ರಿವಿಧ :ಆಚಾರಪ್ರಾಣಿ, ಲಿಂಗಪ್ರಾಣ, ಜಂಗಮಪ್ರಾಣಿ. ಅದಕ್ಕೆ ವಿವರ : ಮನೋವಾಕ್ಕಾಯದಲ್ಲಿ ಆಚಾರವ ಅವಗ್ರಹಿಸಿಹನಾಗಿ ಆಚಾರಪ್ರಾಣಿ. ಬಾಹ್ಯೋಪಚಾರಂಗಳ ಮರೆದು ಲಿಂಗಕ್ಕೆ ತನ್ನ ಪ್ರಾಣವನೆ ಪೂಜೆಯ ಮಾಡುವನಾಗಿ ಲಿಂಗಪ್ರಾಣಿ. ಬಾಹ್ಯಭಕ್ತಿಯ ಮರೆದು ಜಂಗಮಕ್ಕೆ ತನ್ನ ತನುಮನಪ್ರಾಣಂಗಳ ನಿವೇದಿಸುವನಾಗಿ ಜಂಗಮಪ್ರಾಣಿ ಶರಣಸ್ಥಲ ತ್ರಿವಿಧ:ಇಷ್ಟಲಿಂಗಾರ್ಚಕ, ಪ್ರಾಣಲಿಂಗಾರ್ಚಕ, ತೃಪ್ತಿಲಿಂಗಾರ್ಚಕ ಅದಕ್ಕೆ ವಿವರ : ಅನಿಷ್ಟ ನಷ್ಟವಾಯಿತ್ತಾಗಿ ಇಷ್ಟಲಿಂಗಾರ್ಚಕ. ಸ್ವಯಪರವನರಿಯನಾಗಿ ಪ್ರಾಣಲಿಂಗಾರ್ಚಕ. ಇಹಪರವನರಿಯನಾಗಿ ತೃಪ್ತಿಲಿಂಗಾರ್ಚಕ. ಐಕ್ಯಸ್ಥಲ ತ್ರಿವಿಧ :ಕಾಯಲಿಂಗೈಕ್ಯ, ಜೀವಲಿಂಗೈಕ್ಯ, ಭಾವಲಿಂಗೈಕ್ಯ. ಅದಕ್ಕೆ ವಿವರ : ಕ್ರಿಯೆಯರತುದೆ ಕಾಯಲಿಂಗೈಕ್ಯ. ಅನುಭಾವವರತುದೆ ಜೀವಲಿಂಗೈಕ್ಯ. ಅರಿವು ಸಿನೆ ಬಂಜೆಯಾದುದೆ ಭಾವಲಿಂಗೈಕ್ಯ. ಇಂತೀ ಅಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು. ಉಭಯಸ್ಥಲ ಮೂವತ್ತಾರರೊಳಗಾದ ಸರ್ವಾಚಾರಸಂಪತ್ತನು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೆ ಬಲ್ಲ.
--------------
ಚನ್ನಬಸವಣ್ಣ
ಶ್ರೀ ಗುರುಸ್ವಾಮಿ ಶಿಷ್ಯನನನುಗ್ರಹಿಸುವ ಪರಿಯೆಂತೆಂದರೆ: ಆಚಾರಸ್ಥಲ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಅರ್ಪಿತಸ್ಥಲ ಪ್ರಸಾದಸ್ಥಲವೆಂದು ಕರುಣಿಸುವುದು ದೀಕ್ಷೆ. ಈ ಕ್ರಮವರಿದು ಮಹಾಪ್ರಸಾದವೆಂದು ಕೈಕೊಂಡ ಬಳಿಕ ಪರಪಾಕಂ ನ ಕರ್ತವ್ಯಂ ಲಿಂಗನೈವೇದ್ಯಕಿಲ್ಬಿಷಂ ಸ್ವಯಂಪಾಕಂ ಪವಿತ್ರಾಣಾಂ ಲಿಂಗನೈವೇದ್ಯಮುತ್ತಮಂ ಎಂಬುದಾಗಿ, ಒಡಲ ಕಕ್ಕುಲತೆಗೆ, ಭಕ್ತನ ದಾಕ್ಷಿಣ್ಯಕ್ಕೆ ಅನ್ಯದೈವ ಭವಿನೇಮಸ್ತರುಳ್ಳಲ್ಲಿ ಹೊಕ್ಕರೆ, ಕೂಡಲಚೆನ್ನಸಂಗಾ ಅವರಂದೆ ದೂರ.
--------------
ಚನ್ನಬಸವಣ್ಣ
ಸರ್ವ ನಿರ್ವಾಣದಲ್ಲಿ ಗುರುಸ್ಥಲ, ಲಯ ನಿರ್ವಾಣದಲ್ಲಿ ಲಿಂಗಸ್ಥಲ. ಇಷ್ಟ ಕಾಮ್ಯ ಮೋಕ್ಷಂಗಳು, ಉತ್ಪತ್ಯಸ್ಥಿತಿಲಯ ಆಣವ ಮಾಯಾ ಕಾರ್ಮಿಕ ನವಗುಣಂಗಳು ನಿಂದು, ಶಬ್ದಮುಗ್ಧವಾದುದು ಜಂಗಮಸ್ಥಲ. ಇಂತೀ ಕುಳ ವಿವರವ ವೇದಿಸಿ ಸರ್ವಜ್ಞಾನ ಪರಿಪೂರ್ಣವಾಗಿಪ್ಪ ತ್ರಿವಿಧಮೂರ್ತಿಯೆ ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಇನ್ನು ಷಡ್ವಿಧಲಿಂಗ ಅದೆಂತೆಂದಡೆ : ಪೃಥ್ವಿಯಲ್ಲಿ ಆಚಾರಲಿಂಗವಿಹುದು, ಅಪ್ಪುವಿನಲ್ಲಿ ಗುರುಲಿಂಗವಿಹುದು ; ತೇಜದಲ್ಲಿ ಶಿವಲಿಂಗವಿಹುದು, ವಾಯುವಿನಲ್ಲಿ ಜಂಗಮಲಿಂಗವಿಹುದು, ಆಕಾಶದಲ್ಲಿ ಪ್ರಸಾದಲಿಂಗವಿಹುದು, ಆತ್ಮನಲ್ಲಿ ಮಹಾಲಿಂಗವಿಹುದು ನೋಡಾ, ಶಿವಲಿಂಗ ಸೂತ್ರೇ ಸಾಕ್ಷಿ- ``ಆಚಾರಂ ಪಥ್ವೀಭೂತೇ ಚ ಆಪಶ್ಚ ಗುರುಲಿಂಗಯೋಃ | ತೇಜಂ ಚ ಶಿವಲಿಂಗಂ ಚ ವಾಯೌಚ ಚರಲಿಂಗಕಂ || ಪ್ರಸಾದಲಿಂಗೇತ್ವಾಕಾಶಂ ಆತ್ಮಾ ಚ ಮಹಾಮೇವ ಚ | ಇತಿ ಲಿಂಗಸ್ಥಲಂ ಜ್ಞಾತ್ವಾ ದುರ್ಲಭಂ ಚ ವರಾನನೇ ||'' ಎಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿಯೆಂಬ ಮಹಾಭೂತದಲ್ಲಿ ಆಚಾರಲಿಂಗವಿಹುದು. ಅಪ್ಪುವೆಂಬ ಮಹಾಭೂತದಲ್ಲಿ ಗುರುಲಿಂಗವಿಹುದು. ತೇಜವೆಂಬ ಮಹಾಭೂತದಲ್ಲಿ ಶಿವಲಿಂಗ ನ್ಯಾಸವಾಗಿಹುದು. ವಾಯುವೆಂಬ ಮಹಾಭೂತದಲ್ಲಿ ಚರಲಿಂಗ ನ್ಯಾಸವಾಗಿಹುದು. ಆಕಾಶವೆಂಬ ಮಹಾಭೂತದಲ್ಲಿ ಪ್ರಸಾದಲಿಂಗ ನ್ಯಾಸವಾಗಿಹುದು. ಆತ್ಮನೆಂಬ ಮಹಾಭೂತದಲ್ಲಿ ಮಹಾಲಿಂಗ ನ್ಯಾಸವಾಗಿಹುದು ನೋಡಾ. ಇದಕ್ಕೆ ಶಿವಲಿಂಗಸೂತ್ರೇ : ``ಆಚಾರಂ ಪೃಥ್ವಿಭೂತೇ ಚ ಜಲೇ ಚ ಗುರುಲಿಂಗಕಂ | ತೇಜಸ್ಯಪಿ ಶಿವಲಿಂಗಕಂ ವಾಯೌ ಚ ಚರಲಿಂಗಕಂ || ಪ್ರಸಾದಲಿಂಗಂ ಚಾಕಾಶೇ ಆತ್ಮನ್ಯಪಿ ಮಹಸ್ತಥಾ | ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಗುರುಸ್ಥಲ ಭಕ್ತಿವಂಶಿಕ, ಲಿಂಗಸ್ಥಲ ಮಾಹೇಶ್ವರ ವಂಶಿಕ, ಜಂಗಮಸ್ಥಲ ಪ್ರಸಾದಿಯ ವಂಶಿಕ. ಪ್ರಾಣಲಿಂಗಿ ಶರಣ ಐಕ್ಯನೆಂಬೀ ತ್ರಿವಿಧ ಅನಾದಿಯ ಸೋಂಕು. ಅವು ಪೂರ್ವಗತಿಗೆ ಬಂದು, ಉತ್ತರಗತಿಯನೆಯ್ದಿಸುವುದಕ್ಕೆ ಗೊತ್ತಾಗಿ, ನಿತ್ಯ ಅನಿತ್ಯವೆಂಬ ಉಭಯದ ಹೆಚ್ಚುಕುಂದ ತಿಳಿವುದಕ್ಕೆ ದೃಷ್ಟವ ಕೊಟ್ಟೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಂತಪ್ಪ ನಿರ್ಣಯವನು ಸ್ವಾನುಭಾವಜ್ಞಾನದಿಂ ತಿಳಿದು ಶಿವಜ್ಞಾನಿಗಳಾದ ಶಿವಶರಣರಿಗೆ, ಅಚ್ಚ ನಿಚ್ಚ ಸಮಯ ಏಕಪ್ರಸಾದಿಗಳೆಂದೆನ್ನಬಹುದು. ಭಕ್ತಾದಿ ಐಕ್ಯಾಂತಮಾದ ಷಟ್‍ಸ್ಥಲಬ್ರಹ್ಮ ಎಂದೆನ್ನಬಹುದು. ಅಂಗಸ್ಥಲ 44, ಲಿಂಗಸ್ಥಲ 57 ಇಂತೀ ಪಿಂಡಾದಿ ಜ್ಞಾನಶೂನ್ಯಾಂತಮಾದ ನೂರೊಂದುಸ್ಥಲ ಮೊದಲಾದ ಸರ್ವಾಚಾರಸಂಪನ್ನನೆಂದೆನ್ನಬಹುದು. ಇಂತೀ ಭೇದವನರಿಯದೆ ತಮ್ಮ ತಾವಾರೆಂಬುದು ತಿಳಿಯದಿರ್ದಂಥ ಮತಿಭ್ರಷ್ಟ ಹೊಲೆಮಾದಿಗರಿಗೆ ಅದೆಲ್ಲಿಯದೊ ಗುರುಲಿಂಗಜಂಗಮದ ತೀಥಪ್ರಸಾದಸಂಬಂಧ ? ಅದೆಲ್ಲಿಯದೋ ಅಚ್ಚ ನಿಚ್ಚ ಸಮಯ ಏಕಪ್ರಸಾದದಸಂಬಂಧ ? ಇಂತಪ್ಪ ಗುರುಲಿಂಗಜಂಗಮದ ತೀರ್ಥಪ್ರಸಾದಕ್ಕೆ ಅಂದೇ ಹೊರಗಾಗಿ ಮತ್ತೆ ಮರಳಿ ಇಂದು ನಾವು ಗುರುಲಿಂಗಜಂಗಮದ ತೀರ್ಥಪ್ರಸಾದ ಪ್ರೇಮಿಗಳೆಂದು, ಆ ತ್ರಿಮೂರ್ತಿಗಳ ತಮ್ಮಂಗದಿಂ ಭಿನ್ನವಿಟ್ಟು, ತ್ರಿಕಾಲಂಗಳಲ್ಲಿ ಸ್ನಾನವ ಮಾಡಿ, ಜಪ, ತಪ, ಮಂತ್ರ, ಸ್ತೋತ್ರಗಳಿಂದ ಪಾಡಿ, ಪತ್ರಿ, ಪುಷ್ಪ ಮೊದಲಾದುದರಿಂ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಅರ್ಚಿಸಿ, ನಿತ್ಯನೇಮದಿಂ ಶೀಲ ವ್ರತಾಚಾರಂಗಳಿಂದ ಸಕಲ ಕ್ರಿಯಗಳನಾಚರಿಸಿ ಭಿನ್ನಫಲಪದವ ಪಡದು, ಕಡೆಯಲ್ಲಿ ಎಂ¨ತ್ತುನಾಲ್ಕುಲಕ್ಷ ಯೋನಿದ್ವಾರದಲ್ಲಿ ರಾಟಣದಂತೆ ತಿರುಗುವ ಭವಭಾರಿಗಳಾದ ಜೀವಾತ್ಮರಿಗೆ ಪ್ರಸಾದಿಗಳೆಂದಡೆ ಮೆಚ್ಚರಯ್ಯಾ ನಿಮ್ಮ ಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬ್ರಹ್ಮಾಬ್ರಹ್ಮರಿಲ್ಲದಂದು, ವಿಷ್ಣು ಮಾಯಾಜಾಲವಿಲ್ಲದಂದು ಸೃಷ್ಟ್ಯಸೃಷ್ಟಿಯಿಲ್ಲದಂದು, ಕಾಳಿಂಗ ಕರೆಕಂಠರಿಲ್ಲದಂದು, ಉಮೆಯ ಕಲ್ಯಾಣವಿಲ್ಲದಂದು, ದ್ವಾದಶಾದಿತ್ಯರಿಲ್ಲದಂದು, ನಂದಿಕೇಶ್ವರನಿಲ್ಲದಂದು ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವಿಲ್ಲದಂದು ದೇಹಾಹಂಕಾರ ಪ್ರಕೃತಿಯಿಲ್ಲದಂದು, ಕೂಡಲಚೆನ್ನಸಂಗಯ್ಯ ತಾನೆನ್ನದಿರ್ದನಂದು
--------------
ಚನ್ನಬಸವಣ್ಣ
ಎನ್ನಂತರಂಗದೊಳಗೆ ಅರಿವಾಗಿ, ಎನ್ನ ಬಹಿರಂಗದೊಳಗೆ ಆಚಾರವಾಗಿ ನೀನೆಡೆಗೊಂಡು, ಎನ್ನ ಮನದೊಳಗೆ ಘನ ನೆನಹಾಗಿ ಮೂರ್ತಿಗೊಂಡು, ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವೆಂಬ ಚತುರ್ವಿಧವನೂ ಎನಗೆ ಸ್ವಾಯತವ ಮಾಡಿ ತೋರಿ, ಪ್ರಾಣಲಿಂಗವೆಂಬ ಹಾದಿಯ ಸೆರಗ ತೋರಿಸಿ, ಎಲ್ಲಾ ಅಸಂಖ್ಯಾತರನೂ ಪಾವನವ ಮಾಡಿದಿರಾಗಿ- ಕೂಡಲಸಂಗಮದೇವಾ, ನಿಮ್ಮಿಂದ ಸಕಲ ಸನುಮತವ ನಾನರಿದೆನಲ್ಲದೆ, ಎನ್ನಿಂದ ನೀನಾದೆ ಎಂಬುದ ನಿಮ್ಮ ಪ್ರಮಥರು ಮೆಚ್ಚರು ನೋಡಯ್ಯಾ.
--------------
ಬಸವಣ್ಣ
ಇನ್ನಷ್ಟು ... -->