ಒಟ್ಟು 35 ಕಡೆಗಳಲ್ಲಿ , 1 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕತ್ತೆಯಂತೆ ಬತ್ತಲೆಯಿದ್ದಡೆನು, ಇಷ್ಟಲಿಂಗಸಂಬಂಧಿಯಾಗಬಲ್ಲನೆ ? ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದಡೇನು, ನಿತ್ಯನಾಗಬಲ್ಲನೆ ? ಅನಿತ್ಯವ ಹೊತ್ತುಕೊಂಡು ತಿರುಗುವ ಅಘೋರಿಗಳ ಕಂಡಡೆ ಮಾಗಿಯ ಕೋಗಿಲೆಯಂತೆ ಮೋರೆಯ ತೋರೆನು ಅಮುಗೇಶ್ವರಾ.
ನಿಜವನರಿದ ವಿರಕ್ತನು ನಿಜಾನುಭಾವಿಯೆಂದು ನುಡಿವನೆ ? ಅತ್ಯತಿಷ್ಠದ್ದಶಾಂಗುಲನೆಂಬ ಘನವನರಿದು ಕತ್ತಲೆಯ ಮನೆಯಲ್ಲಿ ಮಧುರವ ಸವಿದಂತೆ ಇರಬೇಕು, ಕಾಣಾ ಅಮುಗೇಶ್ವರಾ.
ಕಾಲಾಡಿಯಂತೆ ದೇಶದೇಶಕ್ಕೆ ತಿರುಗಲೇತಕ್ಕೆ ? ಪರಸಮಯದ ಜೈನನಂತೆ ನುಡಿಯಲೇತಕ್ಕೆ ? ಅರಿವುಳ್ಳವರ ಕಂಡು ಅಗಮ್ಯವ ನುಡಿಯಲೇತಕ್ಕೆ ? ಲಿಂಗವನಪ್ಪಿದ ನಿಜಮಹಿಮರ ಮಾತ ಕಲಿತು ಮಂಡೆಯ ಬೋಳಿಸಿಕೊಂಡು ಈಶನ ವೇಷವ ತೊಟ್ಟು, ಗ್ರಾಸಕ್ಕೆ ತಿರುಗುವ ವೇಷಧಾರಿಗಳ ಲಿಂಗೈಕ್ಯರೆಂದಡೆ ಅಘೋರನರಕ ತಪ್ಪದು ಕಾಣಾ, ಅಮುಗೇಶ್ವರಾ.
ನಿತ್ಯನಾಗಿ ಇಷ್ಟಲಿಂಗವನಪ್ಪಿದ ಶರಣನಿರವ ಭ್ರಷ್ಟಭವಿಗಳೆತ್ತ ಬಲ್ಲರೊ ? ನೆಟ್ಟನೆ ನಿಂದು ಮುಟ್ಟಿದೆನು ಶಿವನ ಪಾದವ; ಎನ್ನಲಿ ಕೆಟ್ಟಗುಣ ಹೊದ್ದಲಿಲ್ಲವೆಂದು ಮುಟ್ಟಿದೆನು ಎನ್ನ ಇಷ್ಟಲಿಂಗವ. ಕೆಟ್ಟ ಭವಭಾರಿಗಳ ಕಂಡಡೆ ಭ್ರಷ್ಟರೆಂದು ನಿಮ್ಮನಪ್ಪಿಕೊಂಬೆನು ಅಮುಗೇಶ್ವರಾ.
ದೇಶದೇಶವ ತಿರುಗಿ ಮಾತುಗಳ ಕಲಿತು, ಗ್ರಾಸಕ್ಕೆ ತಿರುಗುವ ದಾಸಿವೇಶಿಯ ಮಕ್ಕಳ ವಿರಕ್ತರೆಂಬೆನೆ ? ತನುವಿನಲ್ಲಿಪ್ಪ ತಾಮಸವ ಕಳೆಯದೆ ಕಾಬವರ ಕಂಡು ವಿರಕ್ತರೆಂದಡೆ, ಕುಂಭೀಪಾತಕ ನಾಯಕನರಕ ತಪ್ಪದು ಅಮುಗೇಶ್ವರಾ.
ಒಡೆಯರ ಕಂಡಡೆ ಬಡಿವುದಯ್ಯಾ ಬಾಲವನು ಸುನಿ. ಕೊಡುವ ಕೊಂಬುವರ ಕಂಡು ಅವರಡಿಗೆರಗುವರಯ್ಯಾ. ಮೃಡನ ವೇಷವ ತೊಟ್ಟು ಕುರಿಗಳಂತೆ ತಿರುಗುವ ಜಡಜೀವಿಗಳ ಕಂಡಡೆ, ಮೃಡನ ಶರಣರು ಮೋರೆಯನೆತ್ತಿ ನೋಡರು ಕಾಣಾ ಅಮುಗೇಶ್ವರಾ.
ಚಿನ್ನಗಣೆಯ ಕಟ್ಟಿದವರೆಲ್ಲ ಹೊನ್ನಿನ ನೋಟವ ಬಲ್ಲರೆ ? ಕರ್ಮಕೆ ಗುರಿಯಾದವರು ನಿಮ್ಮನೆತ್ತ ಬಲ್ಲರೊ ಅಮುಗೇಶ್ವರಾ ¯
ಒಡೆಯನ ಹೆಸರ ಹೇಳಿ ಒಡಲ ಹೊರೆವವರು ಕೋಟ್ಯಾನುಕೋಟಿ. ಮೃಡನ ವೇಷವ ಧರಿಸಿ ಕಡುಗಲಿಗಳಾಗಿ ಚರಿಸುವರ ಕಣ್ಣಿನಲ್ಲಿ ಕಾಣೆ. ನುಡಿವರು, ಮಾತಿನಲ್ಲಿ ಬ್ರಹ್ಮವ ನುಡಿದಲ್ಲಿ ಫಲವೇನು ¯ ಎನ್ನೊಡೆಯಾ, ಎನ್ನ ಬಿಡದೆ ಕಡುಗಲಿಯ ಮಾಡಯ್ಯಾ ಅಮುಗೇಶ್ವರಾ.
ಸಂತೆಗೆ ಬಂದವರೆಲ್ಲ ಸಾವಧಾನಿಯಾಗಬಲ್ಲರೆ ? ಪಸರವ ಹರಡುವರೆಲ್ಲ ರತ್ನದ ಬೆಲೆಯ ಬಲ್ಲರೆ ? ಕುದುರೆಯ ಹಿಡಿದವರೆಲ್ಲ ರಾವುತಿಕೆಯ ಮಾಡಬಲ್ಲರೆ ಅಮುಗೇಶ್ವರಾ ?
ಉದರಪೋಷಣಕ್ಕೆ ಗಿಡುಗಿಡುದಪ್ಪದೆ ತಿರುಗುವ ಕುನ್ನಿ ಒಡೆಯನ ಗುರುತಬಲ್ಲುದೆ ? ಮಳೆಗಾಲದಲ್ಲಿ ಮೀನು ಮಿಡಿಚೆಯ ತಿಂಬ ನರಿ ಕತ್ತಲೆಯಬಲ್ಲುದೆ ? ಸತ್ತ ಹಂದಿಯ ತಿಂಬ ನಾಯಿ ಬೆಳುದಿಂಗಳಬಲ್ಲುದೆ ? ಕರ್ತನನರಿಯದ ವೇಷಧಾರಿಗಳು ನಿಮ್ಮನೆತ್ತ ಬಲ್ಲರು ಅಮುಗೇಶ್ವರಾ ?
ಅಂಗದ ಆಪ್ಯಾಯನಕ್ಕೆ ಲಿಂಗವ ಮರೆದು ತಿರುಗುವ ಭಂಡಭವಿಗಳನೇನೆಂಬೆನಯ್ಯಾ ? ಲಿಂಗದಲ್ಲಿ ನಿತ್ಯರಲ್ಲ ; ಜಂಗಮದಲ್ಲಿ ಪ್ರೇಮಿಗಳಲ್ಲ ; ಹಿಡಿದ ಛಲದಲ್ಲಿ ಕಡುಗಲಿಗಳಲ್ಲ. ಮೃಡನ ಕಂಡೆಹೆನೆಂಬ ಮೂರ್ಖರ ಮುಖವ ನೋಡಲಾಗದು ; ಅವರಡಿಯ ಮೆಟ್ಟಲಾಗದು ಕಾಣಾ ಅಮುಗೇಶ್ವರಾ.
ಎಲ್ಲರೂ ಓದುವುದು ವಚನಂಗಳು; ಎಲ್ಲರೂ ನುಡಿವರು ಬೊಮ್ಮವ. ಎಲ್ಲರೂ ಕೇಳುವುದು ವಚನಂಗಳು ; ಹೇಳುವಾತ ಗುರುವಲ್ಲ, ಕೇಳುವಾತ ಶಿಷ್ಯನಲ್ಲ. ಹೇಳಿಹೆ ಕೇಳಿಹೆನೆಂಬನ್ನಕ್ಕರ ವಿರಕ್ತಿಸ್ಥಲಕ್ಕೆ ಭಂಗನೋಡಾ, ಅಮುಗೇಶ್ವರಾ.
ನಿಶ್ಚಿಂತಂಗೆ ಅಚ್ಚುಗದ ಮಾತೇಕೆ ? ಬಟ್ಟಬೋಳರಂತೆ ಹುಚ್ಚುಗೆಲೆಯಲೇಕೆ ? ಹೋಗಿ ಬರುವವರ ಮಚ್ಚಿ ಒಂದೂರಲ್ಲಿ ಇಚ್ಫೆಯ ನುಡಿದವಂಗೆ ಬಿಚ್ಚಬಣ್ಣನೆಯ ಮಾತೇಕೆ, ಅಮುಗೇಶ್ವರಾ ?
ಚಂದ್ರಸೂರ್ಯರಿಬ್ಬರೂ ಬಂಧನಕ್ಕೆ ಬಪ್ಪುದ ಕಂಡೆ. ಬ್ರಹ್ಮ ವಿಷ್ಣು ಭವಕ್ಕೆ ಗುರಿಯಾದುದ ಕಂಡೆ. ದೇವ ದಾನವ ಮಾನವರು ಮಾಯಾಯೋನಿಮುಖವಾದುದ ಕಂಡೆ. ಬಟ್ಟಬಯಲಲ್ಲಿ ನಿಂದು ನಿಮ್ಮ ಮುಟ್ಟಿದೆನಯ್ಯಾ ಅಮುಗೇಶ್ವರಾ.
ಮೊತ್ತದ ಮಾಮರ ಉರಿಯಿತ್ತ ಕಂಡೆ. ಉಪ್ಪರಿಗೆ ಬೆಂದು ಕರ್ಪೂರವಾದುದ ಕಂಡೆ. ಬೆಟ್ಟಸುಟ್ಟು ಸರ್ಪನ ಶಿರ ಹರಿದುದ ಕಂಡೆ. ನೋಡಿ ನೋಡಿ ನಿಮ್ಮ ಕೂಡಿಕೊಂಡೆನಯ್ಯಾ ಅಮುಗೇಶ್ವರಾ.