ಅಷ್ಟಮೂರ್ತಿಗಳು ದೇವರೆಂಬ
ಭ್ರಷ್ಟಭವಿಗಳ ಮಾತ ಕೇಳಲಾಗದು.
ಅದೇನು ಕಾರಣವೆಂದೊಡೆ :
ಪೃಥ್ವಿದೇವರಾದಡೆ, ಅಪ್ಪುವಿನ ಪ್ರಳಯದಲ್ಲಿ ಕರಗುವುದೆ ?
ಅಪ್ಪು ದೇವರಾದಡೆ, ಅಗ್ನಿಯ ಪ್ರಳಯದಲ್ಲಿ
ಅರತು ಹೋಗುವುದೆ ?
ಅಗ್ನಿ ದೇವರಾದಡೆ, ವಾಯುವಿನ ಪ್ರಳಯದಲ್ಲಿ
ಆರಿ ಹೋಗುವುದೆ ?
ವಾಯು ದೇವರಾದಡೆ, ಆಕಾಶದ ಪ್ರಳಯದಲ್ಲಿ ಲಯವಪ್ಪುದೆ ?
ಆಕಾಶ ದೇವರಾದಡೆ ಆತ್ಮನಲ್ಲಿ ಅಡಗಿಹೋಗುವುದೆ ?
ಆತ್ಮದೇವರಾದಡೆ, ದ್ವಂದ್ವಕರ್ಮಂಗಳನುಂಡು
ಜನನಮರಣಂಗಳಲ್ಲಿ ಬಂಧನವಡೆವನೆ ?
ಚಂದ್ರಸೂರ್ಯರು ದೇವರಾದಡೆ
ಭವಬಂಧನದಲ್ಲಿ ಸಿಲ್ಕಿ ತೊಳಲಿ ಬಳಲುವರೆ ?
ಇದು ಕಾರಣ ಇಂತೀ ಅಷ್ಟತನುಗಳು
ಎಂತು ದೇವರೆಂಬೆನು ?
ದೇವರದೇವ ಮಹಾದೇವ ಮಹಾಮಹಿಮ
ಎನ್ನೊಡೆಯ ಅಖಂಡೇಶ್ವರ ಒಬ್ಬನೆ ದೇವನಲ್ಲದೆ
ಉಳಿದವರೆಲ್ಲ ಹುಸಿ ಹುಸಿ ಎಂಬೆನು ನೋಡಾ !