ಕಾಯವಿಲ್ಲದ ಪುರುಷನು ಕಸವಿಲ್ಲದ ಭೂಮಿಯಲ್ಲಿ
ಕಾಮಿತವಿಲ್ಲದ ಬೀಜವ ಬಿತ್ತಲು
ಅದು ಅಂಕುರಿಸಿ ಎಲೆ ಎರಡಾಯಿತ್ತು.
ಶಾಖೆ ಮೂರಾಯಿತ್ತು, ತಳಿರು ಆರಾಯಿತ್ತು,
ಕುಸುಮ ಮೂವತ್ತಾರಾಯಿತ್ತು,
ಕಾಯಿ ಇನ್ನೂರಹದಿನಾರಾಯಿತ್ತು,
ಹಣ್ಣು ವಿಶ್ವಪರಿಪೂರ್ಣವಾಯಿತ್ತು .
ಅದು ಅಖಂಡ ರಸತುಂಬಿ ಬಟ್ಟಬಯಲಲ್ಲಿ ತೊಟ್ಟುಬಿಟ್ಟಿತ್ತು.
ಆ ಹಣ್ಣ ನಾನು ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಮುಟ್ಟಿ,
ಬಾಯಿಲ್ಲದೆ ಸವಿದು, ಮನವಿಲ್ಲದೆ ಪರಿಣಾಮಿಸಿದೆನಾಗಿ,
ಅಖಂಡೇಶ್ವರನು ತನ್ನೊಳಗೆ ಇಂಬಿಟ್ಟುಕೊಂಡನು.