ಒಟ್ಟು 16 ಕಡೆಗಳಲ್ಲಿ , 1 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪಾಷಾಣದುದಕ ಏತರಿಂದ ದ್ರವ ?ಪಾಷಾಣದ ಪಾವಕ ಅದೇತರಿಂದ ಕ್ರೋಧ ?ಅಪ್ಪುವಿನ ಸಂಚಾರದ ರೂಪು ಅದೇತರ ಒಪ್ಪದಿಂದ ?ಅರಿದರುಹಿಸಿಕೊಂಬ ಅರ್ಕೇಶ್ವರಲಿಂಗನ ಇರವು ಅದೇತರಿಂದ?
ಶಿಲೆಯೊಳಗಣ ಉರಿ ಅಡಗಿಪ್ಪಂತೆ,ಬಲುಗೈಯನ ಕೋಲೆ ಉಡುಗಿಪ್ಪಂತೆ,ಸಲೆ ಗರಳ ಕೊರಳೊಳಗೆ ಹೊರಹೊಮ್ಮದಂತೆ,ಅರ್ಕೇಶ್ವರಲಿಂಗನ ತೊಡಿಗೆ ಹೀಗಾಗಬೇಕು.
ಪೂಜಿಸಿಕೊಂಡೆಹೆವೆಂದು, ಘನಗಂಬ್ಥೀರದಲ್ಲಿ ರಾಗಿಸಿಕೊಂಡಿಪ್ಪಆತ್ಮ ತೇಜದ ಮಾತಿನ ವೇಷದ ಗರ್ವಿಗಳು,ಆಡುವ ವಾಚಕ, ಭೇಕನ ಬಾಯಲ್ಲಿ ಸಿಕ್ಕಿದ ಮಕ್ಷಿಕ,ಶ್ರೋಣಿತದಾಸೆಗೆ ಮಚ್ಚಿದಂತೆ.ಮತ್ತುಂಟೆ ಅರ್ಕೇಶ್ವರಲಿಂಗನ ಕೂಟ ?
ಮೊದಲು ಬೀಜ ಬಲಿದು,ಕಡೆಯಲ್ಲಿ ಬೀಜ ಅಳಿದಲ್ಲದೆ ಅಂಕುರವಾಗದು.ಕ್ರೀಯಲ್ಲಿ ಆಚರಿಸಿ, ಅರಿವಿನಲ್ಲಿ ವಿಶ್ರಮಿಸಿ,ತುರೀಯ ಆತುರ ಸಮನವೆಂಬತ್ರಿವಿಧ ಲೇಪವಾಗಿ ಕಂಡ ಉಳುಮೆ,ಅರ್ಕೇಶ್ವರಲಿಂಗನ ಅರಿಕೆ.
ನಾ ನಿನ್ನನರಿವಲ್ಲಿ, ನೀನೆನ್ನ ಕೈಯಲ್ಲಿಅರಿಯಿಸಿಕೊಂಬಲ್ಲಿ, ಅದೇನು ಭೇದ ?ನಾನೆಂದಡೆ ನಿನ್ನ ಸುತ್ತಿದ ಮಾಯೆ.ನೀನೆಂದಡೆ ನನ್ನ ಸುತ್ತಿದ ಮಾಯೆ.ನಾ ನೀನೆಂಬಲ್ಲಿ ಉಳಿಯಿತ್ತು, ಅರ್ಕೇಶ್ವರಲಿಂಗನ ಅರಿಕೆ.
ಧಾರೆ ಮೊನೆ ಕಟ್ಟಿದಂತೆ, ಮೀರಿ ತಾಗಬಲ್ಲುದೆ ಅಸಿಕೂರಲಗು ?ನಿಪುಣ ಕ್ರೀಭಾವ ಶುದ್ಧವಾಗಿಯಿದ್ದವಂಗೆಬೇರೆ ಇಂದ್ರಿಯಂಗಳು ಗತಿಗೆಡಿಸಬಲ್ಲವೆ ?ಅವು, ಅರ್ಕೇಶ್ವರಲಿಂಗನ ಗೊತ್ತ ಮುಟ್ಟಲರಿಯವು.
ಕಂಜನಾಭನ ಸುತನ ರಂಜಿಸಿದಲ್ಲಿಯೆಕಾಯಗುಣ ಕೇಡಾಯಿತ್ತು.ಮನಸಿಜನ ಪಿತನ ಹಾಯವ ಬಿಟ್ಟಾಗಲೆಸುಖ ಲಯವಾಯಿತ್ತು.ಚಿತ್ತ ವಿಶ್ರಾಂತಿಯನೆಯ್ದಿದಲ್ಲಿ[ಯೆ]ಸುಳಿದಾಡುವನ ಲಯ ಕೆಟ್ಟಿತ್ತು.ತ್ರಿವಿಧ ಲೇಪವಾದಲ್ಲಿಯೆಅರ್ಕೇಶ್ವರಲಿಂಗನ ಭಾವ, ಬ್ರಹ್ಮಕ್ಕೊಳಗಾಯಿತ್ತು.
ಮಾತಿನ ನಿಪುಣರೆಲ್ಲರೂಸೋತು ಕುಳಿತರು ಅವಳ ಪೀಠಕ್ಕಾಗಿ.ಪೀಠದ ಆಟದವರುಅರ್ಕೇಶ್ವರಲಿಂಗನ ಕೂಟವ ಬಲ್ಲರೆ ?
ಪರಮೂರ್ತಿಯಾದಡೆ ಪರಮನ ಸಂಚವನರಿಯಬೇಕು.ವಿರಕ್ತನಾದಡೆ ಇಹಪರ ನಾಸ್ತಿ, ಪರಮ ಪರಿಣಾಮಿಯಾಗಿರಬೇಕು.ಜ್ಞಾನಿಯಾದಡೆ ಸರ್ವಜೀವದ ಚೇತನವನರಿಯಬೇಕು.ಸಾಕು ಮಾತಿನ ಮಾಲೆಯ ನೀತಿಯ ನುಡಿ.ಅರ್ಕೇಶ್ವರಲಿಂಗನ ಬೆಚ್ಚಂತೆ ಇರಬೇಕು.
ಮಾಡುವ ಕ್ರೀ ಕರ್ಮಕಾಂಡ, ಅರಿವ ಚಿತ್ತ ಭಾವಕಾಂಡ.ಉಭಯ ಲೇಪವಾಗಿ ನಿಂದಲ್ಲಿ ಜ್ಞಾನಕಾಂಡ.ತ್ರಿವಿಧ ಲಯವಾದಲ್ಲಿ, ಅರ್ಕೇಶ್ವರಲಿಂಗನ ಕೂಡವ ಕೂಟ.
ಓಗರ ಹಸಿದು ಆಪ್ಯಾಯನವನುಂಡುದನಾರೂ ಅರಿಯರು.ನೀರು ಬಾಯಾರಿ ಭೂಮಿಯ ಕುಡಿದುದನಾರೂ ಅರಿಯರು.ದೇವರು ರೂಪಾಗಿ ಸಕಲರೊಳಗೆ ಗತಿಗೆಡುವುದನಾರೂ ಅರಿಯರು.ವಿಪರೀತ ಕುರುಹಾಯಿತ್ತು, ಅರ್ಕೇಶ್ವರಲಿಂಗನ ಗೊತ್ತಿಗೆ ಬಂದ ಕಾರಣ.
ಕಂಜನಾಭಿಯಲ್ಲಿ ಕುಂಜರ ಬಂದು,ಮಂದಿರದವರೆಲ್ಲರ ಕೊಂದಿತ್ತು.ಕುಂಜರನ ಬೆಂಬಳಿಯವರಲ್ಲದೆಕುಂಜರನ ಸಂದ ಮುರಿವರಿಲ್ಲ.ಅರ್ಕೇಶ್ವರಲಿಂಗನ ಒಲುಮೆಯಿದ್ದವರಿಗಲ್ಲದೆ ಸಾಧ್ಯವಾಗದು.
ಬಾಹ್ಯ ರಚನೆಯಲ್ಲಿ ಸತ್ಕಿøಯಾಮಾರ್ಗ,ಅಂತರಂಗ ಮಾರ್ಗದಲ್ಲಿಕರಣಂಗಳ ಸಂಚ ವಿಸಂಚವನರಿಯಬೇಕು.ಇದು ವಸ್ತುವ ಮುಂಚುವ ಭೇದ,ಅರ್ಕೇಶ್ವರಲಿಂಗನ ಸಂಚಿತದ ಅಂಗ.
ಬೆತ್ತಲೆಯ ಹುತ್ತದಲ್ಲಿ ಕತ್ತಲೆಯ ಹೆಡೆಯ ಸರ್ಪ,ತೆಕ್ಕೆ ಮಡಿಯಲರಿಯದೆ ಸಿಕ್ಕಿ,ಅದೇ ಹುತ್ತದ ಬಾಯಲ್ಲಿ ಕಪ್ಪೆ ಹರಿದು ಬಂದು,ಸರ್ಪನ ನುಂಗಿತ್ತು.ಹುತ್ತ ಬಚ್ಚಬಯಲಾಯಿತ್ತು, ಅರ್ಕೇಶ್ವರಲಿಂಗನ ಗೊತ್ತು.
ತ್ರಿವಿಧ ಘಟಿಸಿ ಕುರುಹಾದಲ್ಲಿ,ಕುರುಹು ಅರಿವನರಿದುದಿಲ್ಲ.ಆ ಅರಿವಿಂದ ಕುರುಹ ಪ್ರಮಾಣಿಸಿ,ಮಧುರದಂಡದಂತೆ ಉಭಯವನರಿ.ಅರಿದಲ್ಲಿ ಅರ್ಕೇಶ್ವರಲಿಂಗನ ಭಾವದ ಕೂಟ.