ಒಟ್ಟು 17 ಕಡೆಗಳಲ್ಲಿ , 1 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬಾಹ್ಯದಲ್ಲಿ ಶ್ರದ್ಧೆಭಾವ, ಭಾವದಲ್ಲಿ ಬಳಕೆ ನಾಸ್ತಿಯಾಗಿ,ಅಮಳಕಫಲ ಕರದಲ್ಲಿದ್ದಂತೆ ಕಲೆದೋರದಿರು,ಅರ್ಕೇಶ್ವರಲಿಂಗವನರಿವುದಕ್ಕೆ.
ಮತ್ಸ್ಯ ಹೊಳೆಯ ನುಂಗಿ,ಮೊಸಳೆ ಮಡುವ ನುಂಗುವಾಗ ಅಡಗಿರ್ದು ನೋಡಿ ಕಂಡೆ.ಕೊಡಗೂಸು ಅಡಗುವ ಠಾವ, ಒಡಗೂಡಿದಲ್ಲದೆ ಕಾಣಬಾರದು,ಅರ್ಕೇಶ್ವರಲಿಂಗವನರಿವುದಕ್ಕೆ.
ರಣದಲ್ಲಿ ಧನು ಮುರಿದ ಮತ್ತೆ, ಸರವೇನ ಮಾಡುವುದು ?ಅಂಗ ಲಿಂಗವ ಮರೆದಲ್ಲಿ,ಅರಿವುದಕ್ಕೆ ಆಶ್ರಯ ಇನ್ನಾವುದು ಹೇಳಿರಣ್ಣಾ ?ಅರಿವಿಂಗೆ ಕುರುಹು, ಅರಿವು ಕುರುಹಿನಲ್ಲಿ ನಿಂದು,ಕಾಷ್ಠದಿಂದೊದಗಿದ ಅಗ್ನಿ ಕಾಷ್ಠವ ಸುಟ್ಟು,ತನಗಾಶ್ರಯವಿಲ್ಲದಂತಾಯಿತ್ತು.ಹಾಗಾಗಬೇಕು, ಅರ್ಕೇಶ್ವರಲಿಂಗವನರಿವುದಕ್ಕೆ.
ಅಂಗೈಯದು ಹೆಂಗಳಾಗಿ, ನೋಡುವ ಕಂಗಳು ಪುರುಷನಾಗಿಉಭಯವನರಿವುದು, ಪ್ರಜಾಪತಿಯಾಗಿ.ಚಿದ್ಘನಶಕ್ತಿ ಯೋನಿಯಲ್ಲಿ ಕೂಡಿ,ಬಿಂದು ವಿಸರ್ಜನವಾಯಿತ್ತು.ಅದು ಲೀಯವಾಗಲ್ಪಟ್ಟುದು ಲಿಂಗವಾಯಿತ್ತು.ಅದು ಅಂಗೈಯಲ್ಲಿ ಅರಿಕೆ, ಕಂಗಳಿಂಗೆ ಕುರುಹು.ಮಂಗಳಮಯ ಅರ್ಕೇಶ್ವರಲಿಂಗವನರಿವುದಕ್ಕೆ ಇಷ್ಟದ ಗೊತ್ತೆ ?ಅರ್ಕೇಶ್ವರಲಿಂಗವು ತಾನು ತಾನೆ.
ಕುದುರೆಯ ನರಿ ಕೊಂದು,ನರಿಯ ಇರುಹೆ ತಿಂದು,ಆ ಇರುಹೆ ತನ್ನ ತಾ ಸತ್ತಿತ್ತು,ಅರ್ಕೇಶ್ವರಲಿಂಗವನರಿವುದಕ್ಕೆ.
ಮನ ಮಹದಲ್ಲಿ ನಿಂದು,ತನುವಿನ ವಿಕಾರವ ಬಿಟ್ಟ ಮತ್ತೆಭವ ಬಂಧದವರ ಒಲವರವೇಕೆ ?ಅದು ಸಲೆ ನೆಲೆಯಲ್ಲ, ಅರ್ಕೇಶ್ವರಲಿಂಗವನರಿವುದಕ್ಕೆ.
ಆಕಾಶದ ಮಧ್ಯದಲ್ಲಿ ಒಂದು ಭೇಕ ನುಡಿಯುತ್ತದೆ.ಅದು ಅನೇಕ ಗೀತ ವಾದ್ಯ ನೃತ್ಯಂಗಳಿಂ[ದಾಡುತ್ತಿದ್ದಿತ್ತು].ಎನ್ನಾಟವ ನೋಡುವರಿಲ್ಲಾಯೆಂದು ನೇತಿಗಳೆಯಿತ್ತು ತನ್ನಂಗವ.ಅದು ನಿರ್ಜಾತನ ಒಲುಮೆ.ಅರ್ಕೇಶ್ವರಲಿಂಗವನರಿವುದಕ್ಕೆ ತೆರಪಾಗಿರಣ್ಣಾ.
ಘಟದ ಮರೆಯಲ್ಲಿ ಅಸುವಿಪ್ಪಂತೆ,ಫಲದ ಮರೆಯಲ್ಲಿ ರಸವಿಪ್ಪಂತೆ,ಶಿಲೆಯ ಮರೆಯಲ್ಲಿ ಕಾಲ ಲಯನ ಲೀಲೆ ತೋರುತ್ತದೆ.ಲೀಲೆ ನಿರ್ವಯಲಾಗಿ, ಆ ಬಯಲ ಬಂಧನವನರಿ,ಅರ್ಕೇಶ್ವರಲಿಂಗವನರಿವುದಕ್ಕೆ.
ಜಾತಿ ಜಾತಿಯ ಕೊಂದು, ನಿಹಿತ ಅನಿಹಿತವ ಕೆಡಿಸಿ,ಜಾತ ಅಜಾತನ ಕಂಡು ನಿಹಿತವಾಗಿರಿ,ಅರ್ಕೇಶ್ವರಲಿಂಗವನರಿವುದಕ್ಕೆ.
ಆಕಾಶದ ಮಳೆಯನರಿತು,ಭೂಮಿಯ ಬೆಳೆಯನರಿತು,ಹುಟ್ಟುವ ಬೀಜವನರಿತು,ದೃಷ್ಟವ ಕಂಡು ಹೊತ್ತಾಡಿ,ಅರ್ಕೇಶ್ವರಲಿಂಗವನರಿವುದಕ್ಕೆ.
ಆತ್ಮ ಶಯನನಾಗಿದ್ದಲ್ಲಿ ತನುವಿನ ಸಂಚಾರವ ಮರೆದು,ಸ್ವಪ್ನಾವಸ್ಥೆಯಲ್ಲಿ ಜಾಗ್ರದಿರವನರಿವಂತೆ,ಸ್ವಪ್ನದ ಭೇದವ ಸುಷುಪ್ತಿಯರಿದು ವಿಶ್ರಮಿಸುವಂತೆ,ಕಾಯದ ಇಷ್ಟದ ಭೇದವನರಿ.ಅರ್ಕೇಶ್ವರಲಿಂಗವನರಿವುದಕ್ಕೆ ಉಳುಮೆಯ ಗೊತ್ತು.
ಕ್ರಿಯಾಭಾವದಲ್ಲಿ ನಿಂದು ಮಾಡುವನ ಅರ್ಚನೆಕಾರ್ಪಾಸದಂತಿರಬೇಕು.ಕಲ್ಪದ್ರುಮದ ಬಿತ್ತಿನ ಸಿಪ್ಪೆಯಂತಿರಬೇಕು.ವರುಣಕಿರಣದ ಸಂಚಾರ ಸಂಚರಿಸುವಂತಿರಬೇಕು.ಇದು ಕ್ರೀಶುದ್ಧತೆ, ಅರ್ಕೇಶ್ವರಲಿಂಗವನರಿವುದಕ್ಕೆ.
ಪೂಜೆ ಪುಣ್ಯದ ಮಾಟ, ಭವದ ಕೂಟ, ಅರಿವು ಸಂದೇಹ.ಅರಿಯದೆ ಮರೆಯದೆ ಕರಿಗೊಂಡಿರು,ಅರ್ಕೇಶ್ವರಲಿಂಗವನರಿವುದಕ್ಕೆ.
ಮಾಡುವ ಸತ್ಕ್ರೀಮಾರ್ಗ, ಇದಿರಿಗಲ್ಲದೆಲಿಂಗವ ಮುಟ್ಟಲರಿಯವು.ಸರ್ಪ ಹೆಡೆಯಲ್ಲಿ ಹೊಯಿದಡೆವಿಷ ಹತ್ತಬಲ್ಲುದೆ, ದಷ್ಟವಾಗಿಯಲ್ಲದೆ ?ಮನ ಭಾವ ಕ್ರೀ ತ್ರಿಕರಣ ಶುದ್ಧವಾಗು,ಅರ್ಕೇಶ್ವರಲಿಂಗವನರಿವುದಕ್ಕೆ.
ತನು ನಿರ್ವಾಣ, ಮನ ಸಂಸಾರ.ಮಾತು ಬ್ರಹ್ಮ, ನೀತಿ ಅಧಮ.ಅದೇತರ ಅರಿವು ?ಘಾತಕನ ಕೈಯ ಕತ್ತಿಯಂತೆ,ಇದು ನಿಹಿತವಲ್ಲ, ಅರ್ಕೇಶ್ವರಲಿಂಗವನರಿವುದಕ್ಕೆ.