ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ. ಹೊತ್ತು ಹೋರಿ ಭೂಮಿಯ ಅಗೆವಲ್ಲಿ ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ ಮಾಡುವ ಮಾಟ ನಷ್ಟ. ಇದನರಿತು ವಿರಕ್ತರಾಗಿ ಹೋದಲ್ಲಿ, ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವದು ಕಷ್ಟ. ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ, ಆತುರವೈರಿ ಮಾರೇಶ್ವರಾ.
ಹಿಂದೆ ಬಂದವರೆಲ್ಲರೂ ಯೋನಿಯ ಹಂಗು. ಸಕಲ ಶಾಸ್ತ್ರಜ್ಞರೆಲ್ಲಾ, ವೇದ ವೇದಾಂತರೆಲ್ಲಾ, ಹಿಂದೆ ಬಂದ ಯೋನಿಯ ಮರೆದು, ಮುಂದಕ್ಕೆ ಯೋನಿಗಾಗಿ ಲಂದಳಗಿತ್ತಿಯಂತೆ ಬಂದ ನಿಂದ ಭಕ್ತರಲ್ಲಿ ಹೊಸತನದಂದವ ಹೇಳಿ, ಎಡಗಾಲಸಂದಿಯ ಮಚ್ಚಿ, ಅನಂಗನ ಬಲೆಯೊಳಗಾದವರಿಗೆ ಘನಲಿಂಗನ ಸುದ್ಧಿಯೇಕೆ, ಆತುರವೈರಿ ಮಾರೇಶ್ವರಾ.
ಕೆಲ ಜೀವದ ಒಲವು ತಲೆಯ ಕಡಿದು ಬೇರೆ ಮಾಡಿದಲ್ಲಿ ಆಡುತ್ತದೆ ಅಂಗ; ಮತ್ತೆ ನರಜೀವದ ಒಲವು ರುಜೆಯಡಸಿ ಪ್ರಾಣ ಬಿಟ್ಟಾಗ ಅಡಿ ಕರವಾದದ ಪರಿಯ ನೋಡಾ! ಘಟ ಜೀವವೊಂದೆಂಬರು ಅಸು ಬೇರಾಗಿದೆ. ಇದರ ಹುಸಿ ಕವಲ ಹೇಳಾ, ಆತುರವೈರಿ ಮಾರೇಶ್ವರಾ.
ಮನ ಮಹದಲ್ಲಿ ನೆಮ್ಮಿ ಮತ್ತೊಂದು ಜಿನುಗುವ ನೇಮವೇತಕ್ಕೆ? ತಲೆ ಪೂಣ್ಯದ ತತ್ತಿಂಗೆ ಪೂಜೆ. ಆಗಣ್ಯನನರಿವುದಕ್ಕೆ ತ್ರಿಕರಣ. ಅಣ್ಣಾ, ಇವ ತಿಳಿದು ನೋಡಿ ಪ್ರಸನ್ನನರಿ, ಆತುರವೈರಿ ಮಾರೇಶ್ವರಾ.