ಜಂಗಮವೆಂದು ಭಕ್ತನಾಶ್ರಯಕ್ಕೆ ಹೋದಲ್ಲಿ
ಉಪಾಧಿಕನಂಗೀಕರಿಸಿ ಮಜ್ಜನ ಭೋಜನ ಪರಿಮಳಂಗಳಲ್ಲಿ ಕೀಳಾಗಿ
ಪೂಜಿಸುವಲ್ಲಿ ಮೇಲಾದ ಪರಿಯಿನ್ನೆಂತಯ್ಯಾ?
ಆತ ಮಾಡುವುದಕ್ಕೆ ಮುನ್ನವೆ ಬೇಡದಿಪ್ಪುದೆ ವಸ್ತುಗುಣ.
ಆತ ಕಾಡುವುದಕ್ಕೆ ಮುನ್ನವೆ ಮಾಡುತ್ತಿಪ್ಪುದೆ ಭಕ್ತಿಗುಣ.
ಉಭಯದಾರೈಕೆಯನರಿದು ಆರೈದಾಗಲೆ ಉಭಯಸ್ಥಲ ನಿರುತ.
ಆ ಗುಣವಾದಲ್ಲಿ ಉಭಯ ಏಕೀಕರವಾಯಿತ್ತು.
ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ.