ಅಥವಾ

ಒಟ್ಟು 8 ಕಡೆಗಳಲ್ಲಿ , 8 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗಜೇಶ ಅಜಹರಿಸುರರೊಂದ್ಯ, ಜಗದಗಲಾತ್ಮ ಅಮೃತಕರ ಅಘಗಿರಿಗೊಜ್ರ ಅನಲಾಕ್ಷ ಅನಾಮಯ ಅಚಲ ಅಗಣಿತ ಅತಿಸತ್ಯ ಅಭವ ಅಭಂಗ ಅತಿಪರಾಕ್ರಮ ಆನಂದ ಅಪರಂಪಾರ ಆದಿಸ್ವಯಂಭೂ ಆಧ್ಯಾತ್ಮಪರಂಜ್ಯೋತಿ ಅಕಳಂಕ ಅಮಲ ಅದೃಶ್ಯ ಅಕಲ್ಪ ಅಭವ ಅರುಣೋದಯ ಅನುಪಮ ಅಘಟಿತ ಅಚರಿತ್ರ ಐಶ್ವರ್ಯ ಅದ್ಭುತ ಆದ್ಯ ಆರಾಧ್ಯ ಅಂಗಸಂಗ ಅಮರಗಣವಂದ್ಯ ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಯ್ಯಾ, ಸರ್ವಮೂಲಹಂಕಾರವಿಡಿದು ಕುಲಭ್ರಮೆ ಛಲಭ್ರಮೆ ಜಾತಿಭ್ರಮೆ, ನಾಮ ವರ್ಣ ಆಶ್ರಮ ಮತ ಶಾಸ್ತ್ರಭ್ರಮೆ, ತರ್ಕಭ್ರಮೆ ರಾಜ್ಯಭ್ರಮೆ, ಧನ ಧಾನ್ಯ ಪುತ್ರ ಮಿತ್ರಭ್ರಮೆ, ಐಶ್ವರ್ಯ ತ್ಯಾಗ ಭೋಗ ಯೋಗಭ್ರಮೆ, ಕಾಯ ಕರಣ ವಿಷಯಭ್ರಮೆ, ವಾಯು ಮನ ಭಾವ ಜೀವ ಮೋಹಭ್ರಮೆ, ನಾಹಂ ಕೋಹಂ ಸೋಹಂ ಮಾಯಾಭ್ರಮೆ ಮೊದಲಾದ ಬತ್ತೀಸ ಪಾಶಭ್ರಮಿತರಾಗಿ ತೊಳಲುವ ವೇಷಧಾರಿಗಳ ಕಂಡು ಶಿವಶಕ್ತಿ ಶಿವಭಕ್ತ ಶಿವಪ್ರಸಾದಿ ಶಿವಶರಣ ಶಿವೈಕ್ಯ ಶಿವಜಂಗಮವೆಂದು ನುಡಿಯಲಾರದೆ ಎನ್ನ ಮನ ನಾಚಿ ನಿಮ್ಮಡಿಗಬ್ಥಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಲಿಂಗದೇವನ ನಂಬಿದವಂಗೆ ಜ್ಞಾನವಿದೆ, ಅಷ್ಟಮಹದೈಶ್ವರ್ಯ ಲಿಂಗಭೋಗ ಆವುದೂ ಕೊರತೆ ಇಲ್ಲ. ಸುಖಪರಿಣಾಮಿ, ಆ ಮಹಿಮಂಗೆ ಮಾನವರಾರೂ ಪಡಿಯಲ್ಲ. ಲಿಂಗದೇವನ ನಂಬದವಂಗೆ ಜ್ಞಾನವಿಲ್ಲ, ಐಶ್ವರ್ಯ ಭೋಗ ಆವುದೂ ಇಲ್ಲ, ಇಹಪರವಿಲ್ಲ. ಇದನರಿದು ತನ್ನ ತಾನು ವಿಚಾರಿಸಿಕೊಂಬುದಯ್ಯಾ. ಲಿಂಗವ ನಂಬಿದಡೆ ಸರ್ವಸಿದ್ಧಿ, ಲಿಂಗವ ನಂಬದಿರ್ದಡೆ ನಾಯಕನರಕ. ಇನ್ನಾದಡೂ ನಂಬಿ ಬದುಕಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಐಶ್ವರ್ಯ ದುಃಖದಲ್ಲಿ ಬೇಯುವ ಹೊಲೆ ಸಂಸಾರವನೆ ಕಚ್ಚಿ ಕೊಲೆಗೀಡಾಗದೆ, ಸಲೆ ಸತ್ಯ ಸದಾಚಾರದಲ್ಲಿ ನಡೆ. ಸಟೆಯನು ಬಿಡು, ದಿಟವನೆ ಹಿಡಿ. ಈ ಘಟವುಳ್ಳನಕ ಕಾಲದಲ್ಲಿ ಶಿವಭಕ್ತಿಯ ನಟಿಸಿ ನಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕೂತಾಗ ಭಕ್ತ ಮುನಿದಾಗ ಮಾನವನಾದ ಪಾತಕರ ನುಡಿಯ ಕೇಳಲಾಗದು. ಅಂಥ ಪಾತಕರ ಉಲುಹೆಂಬುದು, ಉಲಿವ ಕಬ್ಬಕ್ಕಿಯ ಉಲುಹಿನಂತೆ. ಅದನು ಮಹಂತರು ಕೇಳಲಾಗದು. ಅದಕ್ಕದು ಸ್ವಭಾವವೆಂಬುದ ಬಲ್ಲರಾಗಿ, ಮತಿಗೆಟ್ಟು ನುಡಿವ ಮತ್ತರಹ ಮತ್ರ್ಯರ ನುಡಿಯ ಗಡಣೆ, ಭ್ರಾಂತಿವಿಡಿದ ಭ್ರಮಿತರಿಗೆ ಯೋಗ್ಯವಲ್ಲದೆ, ಸಜ್ಜನ ಸಾತ್ವಿಕ ಜ್ಞಾನವೇದ್ಯರಹ ಸದ್ಭಕ್ತರು ಮೆಚ್ಚವರೆ ? ಅಸತ್ಯವೆ ರೂಪಾಗಿಪ್ಪ ಶೂನ್ಯವಾದಿಗಳೆತ್ತಲೂ ಸಲ್ಲರಾಗಿ ಅವರುಗಳು ಪ್ರೇತಗಾಮಿಗಳು. ಅಮೇಧ್ಯ ಕೂಪದಲ್ಲಿ ಉತ್ಪನ್ನವಾದ ಕ್ರಿಮಿಗಳಂತಪ್ಪ ಜೀವಿಗಳು ತಾವಾರೆಂದರಿಯರು. ಇಂದು ನಿಂದ ಗತಿಯ ತಿಳಿಯರು, ಮುಂದಣ ಗತಿಯನೆಂತೂ ಎಯ್ದಲರಿಯರು. ಆತ್ಮನು ಶ್ವೇತ ಪೀತ ಹರಿತ ಕಪೋತ ಮಾಂಡಿಷ್ಟ ಕೃಷ್ಣರೆಂಬ ಷಡ್ವರ್ಣದೊಳಗಾವ ವರ್ಣವೆಂದೂ ವಿಚಾರಿಸಲರಿಯರಾಗಿ, ಭ್ರಾಂತುವಿಡಿದು ಆತ್ಮೋಹಮೆಂದು ಅಹಂಕರಿಸಿ, ಅಜ್ಞಾನ ತಲೆಗೇರಿ, ಮತ್ತತನದಿಂದಜಾತ ಶಿವಶರಣರ ದೂಷಿಸಿ, ಮಿಥ್ಯವಾದದಿಂದ ನುಡಿವರು ತಾವೆ ಘನವೆಂದು, ಬಯಲಬೊಮ್ಮದ ಹಮ್ಮಿನ ನೆಮ್ಮುಗೆವಿಡಿದು, ಸಹಜ ಸಮಾಧಾನ ಶಿವೈಕ್ಯರ ಹಳಿದು ನುಡಿವರು. ಆದಿಯಲ್ಲಿ ಅಹಂ ಬ್ರಹ್ಮವೆಂದು ಬ್ರಹ್ಮನೆ ವಿಧಿಯಾದನು. ಹರಗಣಂಗಳೊಳಗೆ ಅಗ್ರಗಣ್ಯ ಗಣೇಶ್ವರನಹ ನಂದಿಕೇಶ್ವರನ ಉದಾಸೀನಂ ಮಾಡಿ, ಆ ನಂದಿಕೇರ್ಶವರನ ಶಾಪದಿಂದ ಸನುತ್ಕುಮಾರನೆ ವಿಧಿಯಾದನು. ಕರ್ಮವೆ ಅಧಿಕವೆಂದು ಕೆಮ್ಮನೆ ಕೆಟ್ಟ ಹೆಮ್ಮೆಯಲ್ಲಿ, ದ್ವಿಜ ಮುನಿಗಳ ನೆರಹಿ ಕ್ರತುವ ಮಾಡಿ, ಆ ದೇವ ಮುನಿಗಳೊಳಗಾಗಿ, ದಕ್ಷಂಗೆ ಬಂದ ಅಪಾಯವನರಿದು ಮರೆದರಲ್ಲಾ. ಕುಬೇರನಿಂದಧಿಕವಹ ಧನ, ದೇವೇಂದ್ರನಿಂದಧಿಕವಹ ಐಶ್ವರ್ಯ, ಸೂರ್ಯನಿಂದಧಿಕವಹ ತೇಜಸ್ಸು, ಗಜ ಪಟೌಳಿ ಸೀತಾಂಗನೆಗತ್ಯಧಿಕವಹ ರೂಪು ಲಾವಣ್ಯ ಸೌಂದರ್ಯವನುಳ್ಳ ಸ್ತ್ರೀಯರುಂಟು. ಕೋಟಿವಿದ್ಯದಲ್ಲಿ ನೋಡುವಡೆ ಸಹಸ್ರವೇದಿಯೆನಿಸುವ ರಾವಣನು ಪಾರದ್ವಾರಕಿಚ್ಛೈಸಿ ಪರವಧುವಿನ ದೆಸೆಯಿಂದಲೇನಾದನರಿಯರೆ ! ತನು ಕೊಬ್ಬಿನ ಮನ, ಮನ ವಿಕಾರದ ಇಂದ್ರಿಯ ವಿಷಯಂಗಳ ಅಂದವಿಡಿದ ವಿಕಳತೆಯಲ್ಲಿ ನುಡಿವ ಸಟೆಗರ ಕಾಯಲರಿವವೆ ? ನಿಮ್ಮಯ ಮನ ಸನ್ನಿಧಿಯಲ್ಲಿ, ಇಂತಿವೆಲ್ಲವ ಕಂಡೂ ಕೇಳಿಯೂ ಅರಿಯರು. ಹರನ ಸದ್ಭಕ್ತರ ಕೂಡೆ ವಿರೋಧಿಸಿ, ನರಕವನು ಮುಂದೆ ಅನುಭವಿಸಿ, ಇಂದು ಅಪಖ್ಯಾತಿಗೊಳಗಾಗಿ ಕೆಟ್ಟುಹೋಗಬೇಡ. ಅತ್ಯಧಿಕ ಶಿವನೆ ಸತ್ಸದಾಚಾರವಿಡಿದು, ನಿತ್ಯಪದವ ಪಡೆಯಿರೆ ಘಾಸಿ ಮಾಡುವನು ನಿಮ್ಮ ಸೋಜಿಗ. ಸದಾಶಿವ ಬಲ್ಲಿದನೆನ್ನ ದೇವ ಮಹಾಲಿಂಗ ಕಲ್ಲೇಶ್ವರನು ತನ್ನ ಭಕ್ತರೆ ಕೆಡೆನುಡಿದವರ ಬಿಡದೆ ದಂಡಿಸುವನು.
--------------
ಹಾವಿನಹಾಳ ಕಲ್ಲಯ್ಯ
ಹುತ್ತಕ್ಕೆ ಸರ್ಪನಾಗಿ, ಉದಕಕ್ಕೆ ಒಳ್ಳೆಯಾಗಿ, ಕೊಂಬೆಗೆ ಕೋಡಗನಾಗಿ ಅವರವರ ಬೆಂಬಳಿಯಲ್ಲಿ ಅಜಬೀಜವ ಕಾವ ಜಂಬುಕನಂತೆ ತಿರುಗಲೇತಕ್ಕೆ? ಆಯುಷ್ಯ ತೀರಿದಲ್ಲಿ ಮರಣ, ಐಶ್ವರ್ಯ ಹೋದಲ್ಲಿ ದಾರಿದ್ರ ್ಯ ಬಪ್ಪುದು ಎಲ್ಲಿದ್ದಡೂ ತಪ್ಪದೆಂದರಿದ ಮತ್ತೆ ಬಾಯಿಮುಚ್ಚಿ ಸತ್ತಂತಿಪ್ಪ ತೆರ. ಇದು ಭಕ್ತಿವಿರಕ್ತಿಯ ಪಥ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 100 ||
--------------
ದಾಸೋಹದ ಸಂಗಣ್ಣ
ಅಕಾರದಾದಿಯನರಿ, ಕ್ಷಕಾರದಂತ್ಯವ ತಿಳಿ. ಅಕಾರ ಉಕಾರ ಮಕಾರದೊಳಗಣ ಓಂಕಾಪ್ರಭೆಯ ತಿಳಿ. ವೇದಾದಿ ಪಂಚಕದಾದಿಯನರಿ. ಐಶ್ವರ್ಯ ಮೊದಲಾದೈದು ನಾಮವನುಳ್ಳ ವಿಭೂತಿ ಭಸಿತ ಭಸ್ಮ ಕ್ಷಾರ ರಕ್ಷೆ ಎಂಬೈದು ನಿನ್ನಭಿಮುಖದಿಂದ ಜನನವೆ ಹೇಳು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಪಾತಾಳದಿಂ ಕೆಳಗೆ ಪಾದ, ಸತ್ಯರ್ಲೋಕದಿಂ ಮೇಲೆ ಉತ್ತಮಾಂಗ, ಬ್ರಹ್ಮಾಂಡವೇ ಮುಕುಟ, ಗಗನವೇ ಮುಖ, ಚಂದ್ರಾರ್ಕಾಗ್ನಿಗಳೇ ನೇತ್ರ, ದಶದಿಕ್ಕುಗಳೇ ಬಾಹುಗಳು, ಮಹದಾಕಾಶವೇ ಶರೀರ, ತರುಗಳೇ ತನೂರುಹ, ಶೂನ್ಯವೇ ಕರಸ್ಥಲದ ಲಿಂಗ, ನಕ್ಷತ್ರವೇ ಪುಷ್ಪ, ನಿತ್ಯವೇ ಪೂಜೆ, ಮೇಘವೇ ಜಡೆ, ಬೆಳ್ದಿಂಗಳೇ ವಿಭೂತಿ, ಪರ್ವತಂಗಳೇ ರುದ್ರಾಕ್ಷಿಗಳು, ಪಂಚಬ್ರಹ್ಮವೇ ಪಂಚಾಕ್ಷರ, ತತ್ವಂಗಳೇ ಜಪಮಾಲೆ, ಮೇರುವೇ ದಂಡಕೋಲು, ಸಮುದ್ರವೇ ಕಮಂಡಲು, ಶೇಷನೇ ಕಟಿಸೂತ್ರ, ಜಗವೇ ಕಂಥೆ. ಅನಂತವೇ ಕೌಪೀನ, ತ್ರಿಗುಣವೊಂದಾದುದೇ ಖರ್ಪರ, ಚತುರ್ಯುಗವೇ ಗಮನ, ಮಿಂಚೇ ಅಂಗರುಚಿ, ಸಿಡಿಲೇ ಧ್ವನಿ, ವೇದಾಗಮವೇ ವಾಕ್ಯ, ಜ್ಞಾನಮುದ್ರೆಯೇ ಉಪದೇಶ, ಪೃಥ್ವಿಯೇ ಸಿಂಹಾಸನ, ದಿವಾರಾತ್ರಿಯೇ ಅರಮನೆ, ಶಿವಜ್ಞಾನವೇ ಐಶ್ವರ್ಯ, ನಿರಾಳವೇ ತೃಪ್ತಿ. ಇಂತಪ್ಪ ಚೈತನ್ಯಜಂಗಮಕ್ಕೆ ಆನು ನಮೋ ನಮೋ ಎನುತಿರ್ದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
-->