ಸುಖ ದುಃಖ ಭೋಗಾದಿ ಭೋಗಂಗಳೆಲ್ಲವೂ ಗುರು ಲಿಂಗ ಜಂಗಮದ ಒಡಲಾಗಿ ಬೆಳೆವುತ್ತಿಹವು. ತಾನವ ಒಡಲುಗೊಂಡು ಮಾಡುವ ಕಾರಣ ತನ್ನ ಬೆಂಬಳಿಯ ಮಾಯೆ. ಅವ ಹಿಂಗಿ ತನ್ನ ತಾನರಿತಲ್ಲಿ ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಕಾಣಬಂದಿತ್ತು.
ಒಡಲುಗೊಂಡು ಹುಟ್ಟಿದ ಘಟ್ಟಕ್ಕೆ ಅಷ್ಟೋತ್ತರಶತವ್ಯಾಧಿ. ಅದಕ್ಕೆ ನಾನಾ ಔಷಧಿಯ ತಂದು ಹೊರೆವರು, ಆ ಪರಿಯ ನಾನದ ಹೊರಿಯೆನು. ಅದೇನು ಕಾರಣವೆಂದೆಡೆ : ಭವರೋಗವೈದ್ಯ, ಭವಹರನೆಂಬ ಬಿರಿದು ನಿಮ್ಮದಾಗಿ. ಇದು ಕಾರಣ ಕೂಡಲಸಂಗಮದೇವಾ, ನಿಮ್ಮ ಪುರಾತನರ ಪ್ರಸಾದವಲ್ಲದೆ ಕೊಂಡಡೆ ನಿಮ್ಮಾಣೆ.
ಗುರುವಿಲ್ಲವೆಂದೆ, ಶಿಕ್ಷೆಯೊಳಗಣ ನಿಳಯವನರಿಯನಾಗಿ. ಲಿಂಗವಿಲ್ಲವೆಂದೆ, ಜಂಗಮದ ತ್ರಿಕರಣವನರಿಯನಾಗಿ. ಜಂಗಮವಿಲ್ಲವೆಂದೆ, ಗುರುವಿನ ಅನಾದಿಸಂಸಿದ್ಧಿಯನರಿಯನಾಗಿ. ಈ ತ್ರಿವಿಧವಿಲ್ಲವೆಂದೆ, ತನ್ನ ತಾನರಿಯನಾಗಿ. ತನ್ನ ತಾನರಿದಲ್ಲಿಯೆ, ನಿಃಕಳಂಕ ಮಲ್ಲಿಕಾರ್ಜುನನ ಒಡಲುಗೊಂಡು, ಕುರುಹಾದ ಭೇದ.