ಅಥವಾ

ಒಟ್ಟು 13 ಕಡೆಗಳಲ್ಲಿ , 6 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕಾಯದ ಕಣ್ಣಿನಲ್ಲಿ ನೋಡಿ ವಿಕಾರವಳಿದು ಸುಖಪಟ್ಟಣವ ಕಂಡೆ. ಆ ಪಟ್ಟಣದರಸಿಂಗೆ ಭಾವ ಕಾಲಿಲ್ಲ. ಪ್ರಧಾನಂಗೆ ಪಾರುಪತ್ಯಕ್ಕೆ ನುಡಿವಡೆ ಬಾಯಿಲ್ಲ. ತಳವಾರ ತಿರುಗುವುದಕ್ಕೆ ಕಣ್ಣಿಲ್ಲ. ಆ ಪಟ್ಟಣದಲ್ಲಿ ಮೂವರಿಗೆ ಕರ್ತನೊಬ್ಬ ಅರಸು. ಆ ಅರಸ ಕಣ್ಣಿನಲ್ಲಿ ಕಾಣಲಿಲ್ಲ, ಎಲ್ಲಿದ್ದಹರೆಂದು ಕೇಳಲಿಲ್ಲ. ಇದ್ದ ಠಾವಿಂಗೆ ಒಬ್ಬರೂ ಹೊದ್ದಲಿಲ್ಲ. ಅರಸಿನ ಆಜ್ಞೆ, ಬಲುಹ, ಓಲಗಕ್ಕೆ ತೆರಪಿಲ್ಲ. ಜೀವಿತಕ್ಕೆ ಅಡಹಿಲ್ಲ, ಎನ್ನ ಬಡತನವ ಇನ್ನಾರಿಗೆ ಹೇಳುವೆ? ಬಂಟರು ಸತ್ತರು, ಅರಸು ನಷ್ಟವಾದ. ಆ ಉಭಯದ ಬೇಧವ ನಾನರಿಯೆ, ನೀ ಹೇಳು. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಊರೊಳಗಿನ ಬೆಂಕಿ ಅಬ್ಬರಿಸಿ ಆವರಿಸಿದಲ್ಲಿ ಒಬ್ಬರೂ ಮುಖವಂತರಿಲ್ಲ ನೋಡಾ. ಊರಡವಿವೊಂದಾಗಿ ಉರಿಯುತ್ತಿರಲು ವ್ಯಾಘ್ರನ ಪ್ರಾಯವಳಿಯದು ನೋಡಾ. ಮೂರು ದೊರೆಗಳು ಮುಂತಾದ ಸಕಲರ ಸಂಬಂಧವ ನೋಡಾ. ಇದನೊಂದು ಮುಖದಲ್ಲಿ ನೋಡಲು ಹೊರಗಣ ಬೆಂಕಿ ಒಳಗೆದ್ದು ಉರಿವಲ್ಲಿ ಹೊಳಪಗೆಡಿಸಿ ಒಳಹೊರಗೆ ತಾನಲ್ಲದೆ ನೆಳಲಿಲ್ಲದ ಸುಖರೂಪ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಲಿಂಗ ಜಂಗಮವೆಂಬರಲ್ಲದೆ ಅರಿವುದಕ್ಕೆ ಒಬ್ಬರೂ ಇಲ್ಲವಯ್ಯ. ಕರುವ ಕಟ್ಟಿ ಎರದಲ್ಲದೆ ಕಂಚಿನ ಸ್ವರೂಪು ಅಪ್ಪುದೆ ? ಸ್ಥಿರಚಿತ್ತದಿಂದ ಜೀವನೆ ಪರಮ, ಪರಮನೆ ಜೀವನೆಂದು ಅರಿವುದು. ಪರಿಪೂರ್ಣವಪ್ಪುದೇ ವಿರಹಿತ ಲೋಕಕ್ಕೆ ? ಅದಲ್ಲದೆ ಏಕವಾಕ್ಯನು ಅಲ್ಲ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಪ್ರಾಣಲಿಂಗ ಸಂಗ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಇರುವರಯ್ಯಾ, ಒಂದು ಲಕ್ಷ ಶೀಲಸಂಪನ್ನರು. ಇರುವರಯ್ಯಾ, ಒಂದು ಲಕ್ಷ ವ್ರತಸಂಪನ್ನರು. ಇರುವರಯ್ಯಾ, ಒಂದು ಲಕ್ಷ ಅರ್ಥಸಂಪನ್ನರು, ಪ್ರಾಣಾಭಿಮಾನ ವೈರಾಗ್ಯದಿಂದ ಕೊಟ್ಟವರು. ಇವರೆಲ್ಲರು ಫಲಸಮರ್ಥರಲ್ಲದೆ ಲಿಂಗಸಮರ್ಥರು ಒಬ್ಬರೂ ಇಲ್ಲ, ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ ತಂದೆ.
--------------
ಸಿದ್ಧರಾಮೇಶ್ವರ
ಹಲವರಿಪ್ಪರು ನೋಡಾ ಮೂಲೋಕದಲ್ಲಿ ಲಿಂಗಭಕ್ತರು. ಕೆಲವರಿಪ್ಪರು ನೋಡಾ ಮೂಲೋಕದಲ್ಲಿ ಸ್ಥಾವರಭಕ್ತರು. ಸಲುಗೆಯುಳ್ಳವರಿಪ್ಪರು ನೋಡಾ ಅನೇಕ ಕೋಟಿ ಭಕ್ತರು. ಒಬ್ಬರೂ ಇಲ್ಲಿ ನೋಡಾ ಅಜಾಂಡಕಾಂಡದಲ್ಲಿ ಜಂಗಮಭಕ್ತರು, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ವಿಷ್ಣು ಪರಿಪೂರ್ಣನಾದಡೆ, ಸೀತೆ ಕೆಟ್ಟಳೆಂದು ಅರಸಲೇಕೊ ? ವಿಷ್ಣು ಪರಿಪೂರ್ಣನಾದಡೆ, ವಟಪತ್ರದ ಮೇಲೆ ಕುಳಿತು, ಜಲಪ್ರಳಯದಲ್ಲಿ ಅಡಗಿದನೆಂಬ ಮಾತೇಕೋ? ವಿಷ್ಣುವಿನ ಬಾಣ ಸಮುದ್ರಕಡ್ಡಕಟ್ಟಿಯಾದಡೆ, ಕಪಿ ಕೋಡಗವ ಹಿಡಿತಂದು, ಬೆಟ್ಟಗಟ್ಟಂಗಳ ಹಿಡಿತಂದು, ಸೇತುವೆಯ ಕಟ್ಟಲೇಕೋ? ವಿಷ್ಣು ಪರಿಪೂರ್ಣನಾದಡೆ, ರಾವಣನ ವಧೆಗಂಜಿ, ಧರೆಯ ಮೇಲೆ ಲಿಂಗಪ್ರತಿಷೆ*ಗಳ ಮಾಡಿ ಪೂಜಿಸಲೇಕೋ ? ಇಂತು ಬ್ರಹ್ಮಾಂಡದೊಳಗೆ ಸಿಕ್ಕಿ. ಸತ್ತುಹುಟ್ಟುತ್ತಿಹ ದೇವತೆಗಳು ಒಬ್ಬರೂ ಪರಿಪೂರ್ಣರಲ್ಲ. ಮಹಾದಾನಿ ಸೊಡ್ಡಳನೊಬ್ಬನೆ ಪರಿಪೂರ್ಣನು.
--------------
ಸೊಡ್ಡಳ ಬಾಚರಸ
ಹುಟ್ಟಿ ಹುಟ್ಟಿ ಹೋಗುವದದು ಬಹುಕಷ್ಟವಯ್ಯಾ ; ಕೆಟ್ಟು ಕೆಟ್ಟು ಹೋಗುವದದು ಬೆಟ್ಟದ ಸಾಮಥ್ರ್ಯವಯ್ಯಾ. ಹುಟ್ಟಿ ಹೋದವರು ಕೋಟಾನುಕೋಟಿ, ಕೆಟ್ಟು ಹೋದವರು ಒಬ್ಬರೂ ಇಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲಿಂಗವ ಪೂಜಿಸಿದವರು ಹಲವರುಂಟು, ಅಂಗದ ಪೂಜಿಸಿದವರು ಒಬ್ಬರೂ ಇಲ್ಲ; ಕಾಮವ ತೊರೆದವರು ಹಲವರುಂಟು, ನಿಃಕಾಮವನಳಿದವರು ಒಬ್ಬರೂ ಇಲ್ಲ, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
--------------
ಸಿದ್ಧರಾಮೇಶ್ವರ
ಲಿಂಗಪೂಜೆ ಮಾಡಿ ಲಿಂಗದ ಕರುಣದ ಹಡೆಯಿರೆಂದು ಹೇಳುವರಲ್ಲದೆ, ನೀನಾ ಲಿಂಗವಾಗೆಂದು ಹೇಳುವರಲ್ಲದೆ, ಲಿಂಗದ ಲೀಲೆಯ ಹೇಳುವರಿಲ್ಲ ನೋಡಯ್ಯಾ, ಲಿಂಗದ ಲೀಲೆಯ ಹೇಳುವರಲ್ಲದೆ, ಲಿಂಗ ತಾನಾದವರಿಲ್ಲ ನೋಡಯ್ಯಾ. ಲಿಂಗ ತಾವಾದವರು ಇಹರಲ್ಲದೆ, ಲಿಂಗ ಶಬ್ದಮುಗ್ಧವಾದವರು ಒಬ್ಬರೂ ಇಲ್ಲ, ಕಪಿಲಸಿದ್ಧಮಲ್ಲಯ್ಯಾ.
--------------
ಸಿದ್ಧರಾಮೇಶ್ವರ
ಶ್ರುತಿ ಸ್ಮøತಿ ಪುರಾಣಗಮೋಪನಿಷದ್ವಾಕ್ಯಂಗಳನರಿವರಲ್ಲದೆ, ಶ್ರುತ್ಯತೀತಮೂರ್ತಿಯನರಿದವರು ಒಬ್ಬರೂ ಇಲ್ಲ ನೋಡಯ್ಯಾ, `ಸರ್ವಂ ಖಲ್ವಿದಂ ಬ್ರಹ್ಮ' ಎಂದರಿದು ಮತ್ತೇನನರಿಯದೆ ಹೋದೆನಯ್ಯಾ, ನಿಮ್ಮ ಮಹಾಬಯಲಲ್ಲದೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪತ್ರೆಯ ನೇಮದವರು ಒಂದು ಕೋಟಿ. ಲಿಂಗಾರ್ಚನೆಯ ನೇಮದವರು ಒಂದು ಕೋಟಿ. ಜಂಗಮ ತೃಪ್ತಿಯವರು ಒಂದು ಕೋಟಿ. ತನ್ನ ತಾ ತಿಳಿಯುವ ನೇಮದವರು ಒಬ್ಬರೂ ಇಲ್ಲವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸುಖವ ನಿಶ್ಚೆ ೈಸಲಿಲ್ಲ, ಅದು ದುಃಖಕ್ಕೆ ಬೀಜ. ದುಃಖವ ನಿಶ್ಚೆ ೈಸಲಿಲ್ಲ, ಸುಖದೊಡಲು. ಸುಖದುಃಖವೆರಡು ಕಾಲನ ಸುಂಕಕ್ಕೆ ಒಳಗು. ಬಂಕೇಶ್ವರಲಿಂಗದೊಳಗೆ ಒಬ್ಬರೂ ಇಲ್ಲ.
--------------
ಸುಂಕದ ಬಂಕಣ್ಣ
-->