ಅಕಾರ ಉಕಾರ ಮಕಾರಂಗಳು ಪ್ರಕೃತಿಯಲ್ಲಿ ನಾದ ಬಿಂದು ಕಳೆಯಾದವು.
ಅಕಾರ ನಾದ, ಉಕಾರ ಬಿಂದು, ಮಕಾರ ಕಳೆ.
ಅಕಾರ ರುದ್ರ, ಉಕಾರ ಈಶ್ವರ, ಮಕಾರ ಸದಾಶಿವ.
ಅಕಾರ ಉಕಾರ ಮಕಾರಂಗಳಿಗೆ ನಾದ ಬಿಂದು ಕಳೆಯೇ ಆಧಾರ.
ನಾದ ಬಿಂದು ಕಳೆಗಳಿಗೆ ಪ್ರಕೃತಿಯೇ ಆಧಾರ.
ಆ ಪ್ರಾಣಕ್ಕೆ ಲಿಂಗವೇ ಆಧಾರ.
ಅ ಎಂಬಲ್ಲಿ ನಾದವಾಯಿತ್ತು.
ಉ ಎಂಬಲ್ಲಿ ನಾದ ಉಳಿದಿತ್ತು.
ಮ ಎಂಬಲ್ಲಿ ಬಿಂದು ಒಂದುಗೂಡಲು ಓಂಕಾರಶಕ್ತಿಯಾಗಿ ತೋರಿತ್ತು.
ಆ ಓಂಕಾರಶಕ್ತಿಯಲ್ಲಿ ನಕಾರ ಮಕಾರ ಶಿಕಾರ ವಕಾರ
ಯಕಾರಗಳೆಂಬ ಪಂಚಾಕ್ಷರಗಳುದಯಿಸಿದವು.
ನಕಾರವೇ ಬ್ರಹ್ಮ, ಮಕಾರವೇ ವಿಷ್ಣು, ಶಿಕಾರವೇ ರುದ್ರ,
ವಕಾರವೇ ಈಶ್ವರ, ಮಕಾರವೇ ಸದಾಶಿವ. ಈ ಪಂಚ ಶಾಖೆಗಳ
ವಕಾರವೇ ದೇವನ ನೆತ್ತಿಯಲ್ಲಿ ಆ ಓಂಕಾರ ಶಕ್ತಿ ಸ್ವರೂಪಿಯಾಗಿ ಕಾಣಿಸಿತ್ತು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.