ಹಳ್ಳ ಮೇರೆದಪ್ಪಿದರೆ ಇಳಿವುದು, ಹೊಳೆ ಮೇರೆದಪ್ಪಿದರೆ ಇಳಿವುದು,
ಸಮುದ್ರ ಮೇರೆದಪ್ಪಿದರೆ ಇಳಿವುದು.
ಮನ ಮೇರೆದಪ್ಪಿದರೆ ಏರಿ ಇಳಿದು ಕಾಡುತ್ತಿದೆ.
ಅದು ಎಂತೆಂದರೆ :
ಹಳ್ಳ ಮೇರೆದಪ್ಪಿದರೆ ಸಂಗಡ ಕಾಯಿಯಿಂದ ನಡೆವುದು.
ಹೊಳೆ ಮೇರೆದಪ್ಪಿದರೆ ಹರುಗೋಲು ನಡೆವುದು.
ಸಮುದ್ರ ಮೇರೆದಪ್ಪಿದರೆ ಭೈತ್ರ ನಡೆವುದು.
ಮನ ಮೇರೆದಪ್ಪಿದರೆ ಎನ್ನ ಕೊಂಡು ಮುಳುಗಿತ್ತು.
ಈ ಮನ ವೇದ ಶಾಸ್ತ್ರ ಆಗಮದ ಕಟ್ಟಳೆಗೆ ನಿಲ್ಲುವುದೆ ?
ನಿಲ್ಲದು.
ಓದುವುದು ಮನ, ಹೇಳುವುದು ಮನ, ಕೇಳುವುದು ಮನ,
ಕೇಳಿ ನರಕಕ್ಕಿಳಿವುದು ಕೆಡುವುದು ಮನ.
ಈ ಮನದಂದುಗದ ದಾಳಿಯಲ್ಲಿ ನೊಂದು ಬೆಂದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.