ಮಕ್ಕಳು ಮರಿಗಳು ಸತ್ತು ನಷ್ಟವಾಗಿ, ಕಷ್ಟ ದುಃಖ ನೆಲೆಗೊಂಡಿತ್ತೆಂದು ತನ್ನಿಷ್ಟಲಿಂಗಪೂಜೆಯನಗಲಿಸಿ, ಬಿಟ್ಟಿಯ ಮಾಡಬಹುದೇನಯ್ಯಾ? ಜಂಗಮವು ಬಂದು ತನ್ನ ವ್ರತ ನೇಮಕ್ಕೆ ಬೇಡಿದಡೆ ನಿಮ್ಮ ಉಪದ್ರವೇನೆಂದು ಭಕ್ತಿಯ ಮಾಡಬಹುದೇನಯ್ಯಾ? ಸಕಲದುಃಖಂಗಳು ತಮ್ಮಿಂದ ತಾವೇ ಬರಲರಿಯವು. ಭಕ್ತಿಯನ್ನು ಮರೆದು, ಮರವೆಯಲ್ಲಿ ಬೆರೆದು, ಭವಭವದಲ್ಲಿ ಬರುವುದು ಅದೇ ದುಃಖವು, ನಿಶ್ಚಯವೆಂದಾತ ನಮ್ಮ ಅಂಬಿಗರ ಚೌಡಯ್ಯ.
ಬೆಂಕಿ ಸುಡಬಲ್ಲಡೆ ಕಲ್ಲು ನೀರು ಮರಂಗಳಲ್ಲಡಗಬಲ್ಲುದೆ ? ಅರಿವು ಶ್ರೇಷ್ಠವೆಂದಡೆ ಕುರುಹಿನಲ್ಲಡಗಿ ಬೇರೊಂದೆಡೆಯುಂಟೆಂದು ನುಡಿವಾಗ ಅದೇತರಲ್ಲಿ ಒದಗಿದ ಅರಿವು ? ಪಾಷಾಣದಲ್ಲಿ ಒದಗಿದ ಪ್ರಭೆಯಂತೆ, ಆ ಪಾಷಾಣ ಒಡೆಯೆ ಆ ಪ್ರಭೆಗೆ ಕುರುಹುಂಟೆ ? ಇಂತೀ ಲೇಸಪ್ಪ ಕುರುಹನರಿಯಬೇಕು ಕಾಣಾ, ನಮ್ಮ ಗುಹೇಶ್ವರನುಳ್ಳನ್ನಕ್ಕ ಅಂಬಿಗರ ಚೌಡಯ್ಯ.
ಕತ್ತೆಯ ಮೇಲೆ ತಿತ್ತಿಯ ಮಾಡಿ ಕಳ್ಳು ಹೇರುವರು, ಅದಕ್ಕದು ಸತ್ಯವಯ್ಯ. ಎತ್ತಿನ ಮೇಲೆ ತಿತ್ತಿಯ ಮಾಡಿ ತೈಲ ತುಪ್ಪವ ಹೇರುವರು, ಅದಕ್ಕದು ಸತ್ಯವಯ್ಯ. ಆ ತಿತ್ತಿಯ ಒಳಗಣ ತೈಲ ತುಪ್ಪವ ತಂದು, ನಿತ್ಯ ಗುರು-ಲಿಂಗ-ಜಂಗಮಕ್ಕೆ ನೀಡುವ ಭಕ್ತನ ಭಕ್ತಿ ಎಂತಾಯಿತ್ತೆಂದಡೆ: ಆ ಕತ್ತೆಯ ಮೇಲೆ ಹೇರುವ ಕಳ್ಳುಗುಂಡಿಗಿಂದ ಕಡೆಯೆಂದಾತ ನಮ್ಮ ಅಂಬಿಗ ಚೌಡಯ್ಯ.
ಹಾಡಿ ಹಾಡುವ ಹರಕೆಯ ಕೇಡು, ಕೂಡಿ ಮಾಡುವ ಕೂಡಿಕೆಯ ಕೇಡು, ಹಾಡಿ ಮಾಡಿ, ಕೂಡಿ ಮಾಡಿ ಬದುಕಿಗೆ ಕೇಡು ತಂದುಕೊಳ್ಳಲೇತಕೊ? ತನ್ನ ಬೇಡಲಿಕ್ಕೆ ಬಂದ ಜಂಗಮದ ಇರವನರಿತು, ನೀಡ ಕಲಿತರೆ ರೂಡ್ಥಿಯೊಳಗೆ ಆತನೆ ಜಾಣನೆಂದಾತ ನಮ್ಮ ಅಂಬಿಗರ ಚೌಡಯ್ಯ.