ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಜ್ಜೆ ಇಲ್ಲದ ಪುರುಷ, ಆ ಸಜ್ಜನಸ್ತ್ರೀ, ಷಡುಪಂಚಮರುದ್ರ, ಕಾಳಾಂಧರ, ವಾರಿದ್ಥಿ, ಆತ್ಮಾನಾತ್ಮ ಇಂತಿವೇನೂ ಇಲ್ಲದಂದು, ಅತ್ತತ್ತಲಿರ್ದ ಬೆಳಗಿನ ಚಿನ್ಮೂರ್ತಿಯಲ್ಲಿ ಚಿದ್ವಿಭೂತಿ ಇದ್ದಿತ್ತು. ಆ ಚಿದ್ವಿಭೂತಿ ಚಿದ್ಘನಾತ್ಮಕ ರತ್ನವಾಯಿತ್ತು. ಆ ಚಿದ್ಘನಾತ್ಮಕ ರತ್ನವೆ ಚಿಚ್ಛಕ್ತಿಯಾಯಿತ್ತು. ಆ ಚಿಚ್ಛಕ್ತಿ ಸಕಲಚೈತನ್ಯಾತ್ಮಕ ಶರಣನಾಯಿತ್ತು. ಆ ಶರಣನೊಳಗೊಂದು ಕೋಳಿ ದ್ವಾದಶವರ್ಣದ ಸುನಾದವಾಗಿ ಕೂಗಿತ್ತು. ಆ ಸುನಾದಂಗಳ ಝೇಂಕಾರವು ಚತುರ್ದಶ ಸಾವಿರಕ್ಷರ ರೂಪಕವಾಗಿ, ಆ ಶರಣನ ಸಪ್ತಚಕ್ರದ ಕಮಲದೊಳಗೆ ಪ್ರವೇಷ್ಟಿಸಿ, ಗೋಪ್ಯವಾಗಿದವು. ಆ ಶರಣನಲ್ಲಿ ಷಡುಶಿವಮೂರ್ತಿಗಳುದಯಿಸಿದರು. ಆ ಮೂರ್ತಿಗಳಲ್ಲಿ ಷಡುಸ್ಥಲ ಸತ್ಕ್ರಿಯೆಗಳು ತೋರಿದವು. ಅವರೆಲ್ಲರಲ್ಲಿ ಅನಂತಕೋಟಿ ಮೂರ್ತಿಗಳ ಮೇಲೆ, ತೊಂಬತ್ತಾರುಸಾವಿರ ಶಿವಮೂರ್ತಿಗಳುದಯಿಸಿದರು. ಆ ಶರಣನ ನಾಡಿಗಳೊಳಗೆ ಚಿದ್ಮಣಿ, ಚಿದ್ಭಸ್ಮ, ಚಿಲ್ಲಿಂಗ ಇಂತಿವೆಲ್ಲ ತೋರಿದವು. ಇವನೆಲ್ಲವ, ಶಿವಗಣಂಗಳಲ್ಲಿ ಆ ಶರಣನು, ಉಪದೇಶಮಾರ್ಗದಿಂ ಧರಿಸಿಕೊಂಡು, ನೂರೊಂದರ ಮೇಲೆ ನಿಂದು, ದ್ವಾದಶ ಸಪ್ತವಿಂಶತಿ ಛತ್ತೀಸದ್ವಯವೆ ಎಪ್ಪತ್ತು ಶತಾಷ್ಟವೆಂಬ ಪಂಚಜಪಮಾಲೆಗಳಿಗೆ ಹನ್ನೆರಡು ಸಿಡಿಲ ಸುನಾದವನೊಡದು, ತ್ರಿ ಆರುವೇಳೆ ಕೂಡಿ, ನೂರೆಂಟಕ್ಕೆ ಸಂದಾನಿಸಿ ಜಪಿಸುತ್ತಿಪ್ಪ ಅನಂತ ಪ್ರಮಥರಂ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಕಂಡು ಸುಖಿಯಾದೆನು.
--------------
ಸಂಗಮೇಶ್ವರದ ಅಪ್ಪಣ್ಣ
ದಶನಾದಗಳು ಇಲ್ಲದಂದು, ಸುನಾದಗಳು ನೆಲೆಗೊಳ್ಳದಂದು, ಝೇಂಕಾರವು ಮೊನೆದೋರದಂದು, ಅತ್ತತ್ತಲೆ ನಿಶ್ಚಿಂತ ನಿರಾಕುಳನಾಗಿದ್ದನಯ್ಯ. ತನ್ನ ನೆನವಿನ ಮಂತ್ರದಲ್ಲಿ ಓಂಕಾರನೆಂಬ ಮೂರ್ತಿಯಾದನಯ್ಯ. ಆ ಓಂಕಾರನೆಂಬ ಮೂರ್ತಿಂಗೆ ಚಿಚ್ಫಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಪರಶಿವನಾದ. ಆ ಪರಮಶಿವಂಗೆ ಪರಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಸದಾಶಿವನಾದ, ಆ ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಈಶ್ವರನಾದ, ಆ ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ರುದ್ರನಾದ, ಆ ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ವಿಷ್ಣುವಾದ, ಆ ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಬ್ರಹ್ಮನಾದ, ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ನರಲೋಕಾದಿ ಲೋಕಂಗಳು ಆದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->