ಅಂಗದ ಗುಣವಳಿದು ಲಿಂಗಾಗಿಯಾದ ನಿಜಶರಣನು,
ಜಗದ ಠಕ್ಕರಾದ ಜಂಗುಳಿಗಳ ಬಾಗಿಲುಗಳಿಗೆ ಹೋಗನು ನೋಡ.
ಹೋದಡೆ ಗುರುವಾಕ್ಯವಿಡಿದು ಹೋಗಿ,
`ಲಿಂಗಾರ್ಪಿತ ಭಿಕ್ಷಾ' ಎಂದು ಭಿಕ್ಷವ ಬೇಡಿ, ಲಿಂಗಾಣತಿಯಿಂದ ಬಂದ ಭಿಕ್ಷವ,
ಲಿಂಗ ನೆನಹಿನಿಂದ ಲಿಂಗನೈವೇದ್ಯವಾಗಿ ಕೈಕೊಂಡು,
ಬಂದಬಂದ ಸ್ಥಲವನರಿದು, ಲಿಂಗಾರ್ಪಿತವ ಮಾಡಬೇಕು.
ಅದೆಂತೆಂದಡೆ :
ರಾಜಾನ್ನಂ ನರಕಶ್ಚೈವ ಸೂತಕಾನ್ನಂ ತಥೈವ ಚ |
ಮೃತಾನ್ನಂ ವರ್ಜಯೇತ್ ಜ್ಞಾನೀ ಭಕ್ತಾನ್ನಂ ಭುಂಜತೇ ಸದಾ ||
ಇಂತೆಂದುದಾಗಿ, ಲಿಂಗಾಂಗಿಗೆ, ಲಿಂಗಾಭಿಮಾನಿಗೆ, ಲಿಂಗಪ್ರಾಣಿಗೆ
ಇದೇ ಪಥವಯ್ಯಾ, ಸಕಳೇಶ್ವರದೇವಾ ನಿಮ್ಮಾಣೆ.