ಸರ್ವರಲ್ಲಿ ಹುಸಿಯನಾಡಿದರೆ ಆಡಲಿ,
ಗುರುವಿನೆಡೆಗೆ ಹುಸಿಯಿಲ್ಲದಿರಬೇಕು.
ಸರ್ಪ ಕಡೆಯಲೆಲ್ಲ ಡೊಂಕಾಗಿ ಚರಿಸುತ್ತ
ಹುತ್ತದೆಡೆಗೆ ಸಸಿನವಾಗಿ ಹೋದಂತೆ.
ಅನ್ಯರೆಡೆಗೆ ಹುಸಿ ಠಕ್ಕು ಠೌಳಿ ಇದ್ದರೂ ಇರಲಿ,
ಗುರುವಿನೆಡೆಗೆ ಹುಸಿಬೇಡ.
ಕೊಟ್ಟೆ ಕೊಂಡೆನೆಂದು ನುಡಿದು ಕೊಡದೆ ವಾಚಾಳತ್ವವಾದರೆ
ಬ್ರಾಹ್ಮಣನ ಕೊಂದ ಪಾಪದಷ್ಟು ಪಾಪ
ನಿಮಗಂಡಲೆವವು ಕಾಣಿರೊ !
ಸಾಕ್ಷಿ :``ಯೋ ಶುದ್ಧಿ ಗೋಪಾದಪ್ರೋಕ್ತಂ ಗುರುರಂಘ್ರಿನುತಸ್ಯ ಚ |
ವಾಗ್ವಿದನ್ಯಪ್ರದಾನೇನ ಬ್ರಹ್ಮಹತ್ಯಾಸಮಾಹಿತಃ (?) ||''
ಎಂದುದಾಗಿ,
ಇಂತಪ್ಪ ಗುರುವಿನೆಡೆಗೆ ಹುಸಿ[ದು] ಜೀವಿಸೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.