ಅಥವಾ

ಒಟ್ಟು 19 ಕಡೆಗಳಲ್ಲಿ , 9 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪರಸ್ಥಾನದಲ್ಲಿ ಆನಂದಬ್ರಹ್ಮವ ಭೇದ್ಥಿಸುವ ಪರಿಯೆಂತೋ? ಪೂರ್ವದಕ್ಷಿಣವೆಂಬ ದಿಕ್ಕುಗಳಲ್ಲಿ ಸಮನಿಸುವ ಆತ್ಮ ಅಂತರ್ಯಾತ್ಮ ಭೂತಾತ್ಮ ಸರ್ವಾತ್ಮ ಪರಮಾತ್ಮವೆಂಬ ಆತ್ಮ ಪಂಚಕಗಳೆಂಬವನು ಹಿಂದು ಮುಂದರಿಯದೆ, ಮುಂದು ಹಿಂದೆಂದರಿಯದೆ ಸಂಯೋಗದಲಿಕ್ಕಿ ಪ್ರಯೋಗಿಸಿಹೆನೆಂಬ ಯೋಗಿ ಕೇಳಾ; ಪೂರ್ವವಾವುದು? ದಕ್ಷಿಣವಾವುದು? ಪೂರ್ವದಲ್ಲಿ ದಿವಾಕರರು ಹನ್ನೆರಡರ ಆನಂದ ಪ್ರಭೆಯಲ್ಲಿ ಭವಿಸಲ್ಪಟ್ಟ ನಯನದ ಕಿರಣದ ಕೊನೆಯ ಮೊನೆಯ ಮೇಲೆ ದಿವ್ಯಾಂಗಯೋಗ ಸಮನಿಸುವ ಪರಿಯೆಂತು ಹೇಳಾ? ದಕ್ಷಿಣದಲ್ಲಿ ದಿಗ್ವಳಯ ಹದಿನಾಲ್ಕರ ವ್ಯಾಪ್ತಿಯ ಸಂಚರಿಸದೆ ಸಮನಿಸುವ ಕೋಹಂ ತತ್ವಾರ್ಥದಿಂದತ್ತ ನಾಹಂ ಪರಮಾರ್ಥದಿಂದತ್ತ ಸೋಹಂ ಸದ್ಭಕ್ತಿಯ ಮುಟ್ಟಿದ ದಾಸೋಹ ನಿನ್ನಲ್ಲಿ ಸಂಯೋಗವ ಎಂತು ಮಾಡುವೆ ಹೇಳಾ? ಯೋಗಿ ನೀನು ಯೋಗಕ್ಕೆ ಹರಿವಾವುದು? ಯೋಗಕ್ಕೆ ನೆಲೆ ಯಾವುದು? ಮತ್ತೆ ಪೆರತನರಿಯದೆ ಶಾಶ್ವತವು ನೀನೆ ನೀನೆ ಎಂದೆನ್ನು, ಸಕಲನಿಷ್ಕಲದೊಳಗೆ ನೀನೆ ನೀನೆಯೆನ್ನಾ ತಾತ್ಪರ್ಯವರ್ಮ ಕಳೆಗಳೊಳಗೆ ನೀನೆ ನೀನೆಯೆಂದೆನ್ನಾ. ಓಂ ಗ್ರಾಂ ಘ್ರೀಂ ಘ್ರೂಂ ಎಂಬಕ್ಷರ ಚತುಷ್ಟಯದ ಮೇಲೆ ಶುದ್ಧ ಸಂಯೋಗವೆಂಬ ಗದ್ದುಗೆಯಿಕ್ಕಿ ಅಕ್ಷರದ್ವಯದ ಆನಂದರಾಜ ಕುಳ್ಳಿದ್ದೆ ೈದಾನೆ ಜಪಿಸುತ. ಆ ಜಪವು ನಿತ್ಯ, ಅದು ಮುಕ್ತಿ, ಅದು ಸತ್ಯ. ಅದು ಪದಕ್ಕೆ ಫಲಕ್ಕೆ ಭವಕ್ಕೆ ದೂರ, ವರ್ಣಾಶ್ರಯವ ಮೀರಿತ್ತು ತತ್ವ ಪ್ರಾಪಂಚಿಕವ ಜರಿಯಿತ್ತು. ಮಂತ್ರಂಗಳ ಕೈಯಿಂದ ವಂದಿಸಿಕೊಂಡಿತ್ತು. ಮೂರರಲ್ಲಿ ಭವಿಸಿತ್ತು, ಆರರಲ್ಲಿ ಫಲವಾಯಿತ್ತು. ಮೂವತ್ತಾರರಲ್ಲಿ ಹಣಿತಿತ್ತು ಯೋಗಿಗಳ ನಡೆಸಿತ್ತು ತತ್ವಮಸಿ ಸಂಗಮವಾಯಿತ್ತು. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯದಲ್ಲಿ ನಿತ್ಯವಾಯಿತ್ತು.
--------------
ಸಿದ್ಧರಾಮೇಶ್ವರ
ಭಕ್ತನೆಂಬ ಭೂಮಿಯಲ್ಲಿ ಗುರೂಪದೇಶವೆಂಬ ನೇಗಲಿಯಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಸೆಳೆಗೋಲಂ ಪಿಡಿದು, ಉತ್ತರ ಕ್ರಿಯೆಯೆಂಬ ಹಂಸನೇರಿ, ದುಷ್ಕರ್ಮದ ಕಾಟದ ಕುಲವಂ ಕಡಿದು, ಅರಿವೆಂಬ ರವಿಕಿರಣದಲ್ಲಿ ಒಣಗಿಸಿ, ಜ್ಞಾನವೆಂಬ ಬೆಂಕಿಯಲ್ಲಿ ಸುಟ್ಟುರುಹಿ, ಆ ಹೊಲನ ಹಸನವ ಮಾಡಿ, ಅದಕ್ಕೆ ಬಿತ್ತುವ ಭೇದವೆಂತೆಂದಡೆ: ಈಡಾ ಪಿಂಗಳ ಸುಷುಮ್ನವೆಂಬ ನಾಳವಂ ಜೋಡಿಸಿ, ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲಿಯೆಂಬ ಹಗ್ಗವಂ ಬಿಗಿದು, ಹಂಸನೆಂಬ ಎರಡೆತ್ತನ್ನೇ ಹೂಡಿ, ಶಾಂತಿ ನಿರ್ಮಲವೆಂಬ ಮಳೆಗಾಲದ ಮೇಘಮಂ ಸುರಿದು, ಆ ಬೀಜ ಪಸರಿಸಿ, ಪ್ರಜ್ವಲಿಸಿ ಫಲಕ್ಕೆ ಬಂದು ನಿಂತಿರಲು, ಅದಕ್ಕೆ ಒತ್ತುವ ಕಸ ಆವಾವೆಂದಡೆ : ಅಷ್ಟಮದದ ಹಲವಂ ಕಿತ್ತು, ಸಪ್ತವ್ಯಸನದ ಸೆದೆಯಂ ಕಳೆದು, ಮನೋರಥವೆಂಬ ಮಂಚಿಗೆಯನ್ನೇರಿ, ಬಾಲಚಂದ್ರನೆಂಬ ಕವಣಿಯಂ ಪಿಡಿದು, ಪ್ರಪಂಚವೆಂಬ ಹಕ್ಕಿಯಂ ಹೊಡೆದು, ಆ ಭತ್ತ ಬಲಿದು ನಿಂದಿರಲು, ಅದನ್ನು ಕೊಯ್ಯುವ ಭೇದವೆಂತೆಂದಡೆ : ಇಷ್ಟವೆಂಬ ಕುಡುಗೋಲಿಗೆ, ಪ್ರಾಣವೆಂಬ ಹಿಡಿಯ ಜೋಡಿಸಿ, ಭವಭವವೆಂಬ ಹಸ್ತದಿಂದ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವಡಂ ಕಟ್ಟಿ, ಸುಜ್ಞಾನಪಥವೆಂಬ ಬಂಡಿಯ ಹೇರಿ, ಮುಕ್ತಿ ಕೋಟಾರಕ್ಕೆ ತಂದು, ಉನ್ನತವೆಂಬ ತೆನೆಯಂ ತರಿದು, ಷಡುವರ್ಣವೆಂಬ ಬೇಗಾರರಂ ಕಳೆದು, ಅಂಗಜನೆಂಬ ಕಾಮನಂ ಕಣ್ಕಟ್ಟಿ, ಮಂಗಲನೆಂಬ ಕಣದಲ್ಲಿ ಯಮರಾಜನಿಗೆ ಕೋರ ಹಾಕದೆ, ಚಿತ್ರಗುಪ್ತರ ಸಂಪುಟಕ್ಕೆ ಬರಿಸದೆ, ಈ ಶಂಕರನೆಂಬ ಸವಿಧಾನ್ಯವನುಂಡು, ಸುಖಿಯಾಗಿರುತಿರ್ಪ ಒಕ್ಕಲಮಗನ ಎನಗೊಮ್ಮೆ ತೋರು ತೋರಯ್ಯಾ, ಅಮರಗುಂಡದ ಮಲ್ಲಿಕಾರ್ಜುನ ಪ್ರಭುವೆ.
--------------
ಪುರದ ನಾಗಣ್ಣ
ಆವನೊಬ್ಬನು ಉಪಪಾತಕ ಮಹಾಪಾತಕಂಗಳ ಮಾಡಿ, ಶ್ರೀ ರುದ್ರಾಕ್ಷಿಯ ನಾಮೋಚ್ಚರಣೆಯ ಮಾಡಿದಡೆ ಆ ಪಾತಕಂಗಳು ಪರಿಹಾರವಾಗಿ ಹತ್ತುಸಾವಿರ ಗೋದಾನದ ಫಲವು ಕೈಸಾರುತಿಪ್ಪುದು ನೋಡಾ. ಆ ರುದ್ರಾಕ್ಷಿಯ ಸ್ವರೂಪವನು ಕಂಗಳು ತುಂಬಿ ನೋಡಿದಡೆ ಶತಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ. ಆ ರುದ್ರಾಕ್ಷಿಯ ಮುಟ್ಟಿ ಮುಟ್ಟಿ ಪೂಜಿಸಿದಡೆ ಸಹಸ್ರಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ. ಆ ರುದ್ರಾಕ್ಷಿಯ ತತ್ ಸ್ಥಾನಂಗಳಲ್ಲಿ ಭಕ್ತಿಯಿಂದೆ ಧರಿಸಿದಡೆ ಲಕ್ಷಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ. ಆ ರುದ್ರಾಕ್ಷಿಯ ಮಣಿಗಳಿಂದೆ ಜಪವ ಮಾಡಿದಡೆ ಅನಂತಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ. ಅದೆಂತೆಂದೊಡೆ : ``ಸಪ್ತಕೋಟಿಶತಂ ಪುಣ್ಯಂ ಲಭತೇ ಧಾರಣಾತ್ ನರಃ | ಲಕ್ಷಕೋಟಿಸಹಸ್ರಾಣಿ ಲಕ್ಷಕೋಟಿಶತಾನಿ ಚ | ತಜ್ಜಪಾತ್ ಲಭತೇ ಪುಣ್ಯಂ ನಾತ್ರ ಕಾರ್ಯವಿಚಾರಣಾ ||' ಎಂದುದಾಗಿ, ಇಂತಪ್ಪ ರುದ್ರಾಕ್ಷಿಯ ಧರಿಸಿದ ಫಲಕ್ಕೆ ಇನ್ನಾವ ಫಲವು ಸರಿಯಿಲ್ಲವೆಂದು ಸಕಲಾಗಮಂಗಳು ಸಾರುತಿಪ್ಪವು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹಸಿವ ಕೊಂದಿಹೆವೆಂದು ತುಪ್ಪ ಹಾಲು ಸಕ್ಕರೆ ಹಣ್ಣು ಮುಂತಾದ ಫಲಾಹಾರಮಂ ಕೊಂಡು, ಫಲಕ್ಕೆ ಬಾರೆವೆಂದು ಬಲೋತ್ತರವ ನುಡಿದು, ಬಲ್ಲವರಾದೆವೆಂಬ ಗೆಲ್ಲಗೂಳಿಗಳು ನೀವು ಕೇಳಿರೊ. ಉರಿವ ಬೆಂಕಿಗೆ ತರಿದುಪ್ಪ ತಿಲ ಮೊದಲಾದವರು ಹಾಕಿ, ಅನಲನ ಕೆಡಿಸಿಹೆವೆಂಬ ಕಲಿಕೆಯ ಮಾತಿನ ನೆರೆ ಬಾಲಕರ ಕಂಡು, ಇವರಿಗೆ ಅರಿಕೆಯಿಲ್ಲವೆಂದೆ. ಗರಿಕೆಯನಗೆದು ಕೊರಡನಿರಿಸಿದಂತೆ, ಇದಾರಿಗೆಯೂ ಅಘಟಿತ ನೋಡಾ. ಪ್ರಕಟದೂರ ಸಕೀಲಸಾರ ಮುಕುರಗುಣನಿಧಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಸುನಗೆಯ ಢಾಳದಲ್ಲಿ ಎಸೆದಿಪ್ಪ ನನ್ನ ನಲ್ಲನೆ. ಹೊಸ ಕುಸುಮದ ಕಾಣಿಕೆಯ ತಂದೆನು; ಶಿಶುವೆಂದು ಮನ್ನಿಸಿದ ಶಿಶು ಸಸಿಯ ಫಲಕ್ಕೆ ಮೂಲಸ್ವಾಮಿಯಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಪುಷ್ಪಕ್ಕೆ ಗಂಧ ಬಲಿವಲ್ಲಿ, ಫಲಕ್ಕೆ ರಸ ತುಂಬುವಲ್ಲಿ, ತರಳೆಗೆ ವಿಷಯ ತೋರುವಲ್ಲಿ, ಇವು ಋತುವಲ್ಲದೆ ಸ್ವಯವಲ್ಲ. ತನ್ನನರಿವುದಕ್ಕೆ ಮುನ್ನವೆ ಲಿಂಗತನ್ಮಯವಾಗಿರಬೇಕು. ಹೇಮದ ಪುತ್ಥಳಿಯ ಕರಗಿ [ಸಿ] ಮರಳಿ ರೂಪನರಸಲುಂಟೆ? ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕೊಡುವ ಲಿಂಗವನು ಬೇಡಿಕೊಳಲರಿಯದೆ ಕೊಡದ ಮಾನವರನಾಸೆಗೈದ ಲಿಂಗವಂತನನೇನೆನಬಹುದು? ಕೊಟ್ಟನು ನೋಡಿರೆ ಲಿಂಗವು, ಮಾರ್ಕಂಡೇಯಂಗೆ ಮಳೆಯರಾಜಂಗೆ ಆಯುಷ್ಯವ. ಕೊಟ್ಟನು ನೋಡಿರೆ ಲಿಂಗವು, ಲಿಂಗವಂತರು ಕುಡ ಹೇಳಿದವರಿಗೆ ಆಯಷ್ಯವ. ಮುಸುಟೆಯ Zõ್ಞಡಿರಾಯ, ಮಡಿವಾಳ ಮಾಚಿದೇವರು ಬಸವರಾಜದೇವರು ಹೇಳಿದವರಿಗೆ ಆಯುಷ್ಯವ ಕೊಟ್ಟನು ನೋಡಿರೆ, ಚೋಳಂಗೆ ಹೊನ್ನಮಳೆಯನೂ, ದಾಸಂಗೆ ತವನಿಧಿಯನೂ ದೇವದಾನವ ಮಾನವರಿಗೆ ಇಚ್ಛೆಯನರಿದು. ಬೇಡಿದವರಿಗೆ ಬೇಡಿದ ಪದವ ಕೊಟ್ಟ ಆಯುಷ್ಯ ಭಾಷೆಯ ಫಲವ ನೋಡಯ್ಯಾ: ಲಿಂಗವೂ ಸಾಧ್ಯವಾಯಿತ್ತು, ಗುರುಲಿಂಗವೆಂದರಿದು ಲಿಂಗಾರ್ಚನೆಯ ಮಾಡಿದ ಫಲವ ನೋಡಯ್ಯಾ. ಜಂಗಮ ಸಾಧ್ಯವಾಯಿತ್ತು, ಲಿಂಗ ಜಂಗಮವೆಂದರಿದು ಜಂಗಮಾರ್ಚನೆಯ ಮಾಡಿದ ಫಲವ ನೋಡಯ್ಯಾ. ಪ್ರಸಾದ ಸಾಧ್ಯವಾಯಿತ್ತು, ಪ್ರಸಾದ ಪ್ರಜ್ಞಾನಪರ ಕೇವಲ ಮುಕ್ತಿಯೆಂದು ಗ್ರಹಿಸಿದ ಫಲವ ನೋಡಯ್ಯಾ. ಶ್ರೀಗುರು ಲಿಂಗ ಜಂಗಮ ಒಂದೇ ಎಂದು ಪ್ರಸಾದ ಒಂದೇ ಎಂದು ಅರಿದೆನು. ಇದೇ ಜ್ಞಾನ, ಇದೇ ಮುಕ್ತಿ, ಇದೇ ಪದ, ಇದೇ ಮಹಾಫಲ. ಇನ್ನು ಮೇಲೆ ಈ ಪದಕ್ಕೆ ಪದ ಉಂಟೇ? ಈ ಫಲಕ್ಕೆ ಫಲ ಉಂಟೇರಿ ಇಲ್ಲ. ನಿಮ್ಮಾಣೆ ಇದೇ ಮಹತ್ಪರಿಣಾಮವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವೈದಿಕರಪ್ಪ ವೇದವಿತ್ತುಗಳೊಂದು ಕೋಟಿಗೆ ಅನ್ನವನಿಕ್ಕಿದ ಫಲಕ್ಕೆ ಕೋಟಿ ಮಿಗಿಲು ಶಿವಶರಣಂಗೆ ಒಂದು ಭಿಕ್ಷವನಿಕ್ಕಿದ ಫಲ. ಕೋಟಿ ಯಜ್ಞ ಕೋಟಿ ಕನ್ಯಾದಾನದ ಫಲಕ್ಕೆ ಮಿಗಿಲು ಒಬ್ಬ ಭಸ್ಮಾಂಗಿಯ ಒಂದು ವೇಳೆಯ ತೃಪ್ತಿ. ಅದೆಂತೆಂದೊಡೆ: ಕ್ಷೀರಕುಂಭಸಹಸ್ರೇಣ ಘೃತಕುಂಭಶತೇನ ಚ ಭಸ್ಮಧಾರಿಣಿನಸುಫಭಿಕ್ಷಾತಃ ಕೋಟಿಯಜ್ಞ ಫಲಂ ಭವೇತ್ ಎಂದುದಾಗಿ, ಚತುರ್ವೇದಿಗಳಿಗೆ ಮೃಷ್ಟಾನ್ನವನಿಕ್ಕಿ ಅಕ್ಷಪಾದಂಗೆ ಗೋವೇಧೆಯಾಯಿತ್ತು. ಒಬ್ಬ ಶಿವಗಣನಾಥಂಗೆ ಚೋಳ ದಾಸರು ಉಣಲುಡಲಿತ್ತು, ಯೊಡನೆ ಹೊಮ್ಮಳೆ ತವನಿಧಿಯ ಪಡೆದರು. ಇದು ಕಾರಣ, ನೆಮ್ಮುಗೆವಿಡಿದು ಮಾಡುವ ಭಕ್ತಂಗಿದೆ ಮಾಟವಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಚತುರ್ವೇದಿಗಳಾದ ಶತಕೋಟಿ ಬ್ರಾಹ್ಮಣರಿಗೆ ನಿತ್ಯ ಭೋಜನ ಮಾಡಿಸಿದ ಫಲವು, ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ ! ಸಪ್ತಕೋಟಿ ಕೆರೆಯ ಕಟ್ಟಿಸಿದ ಫಲವು, ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ ! ಅಶ್ವಯಜ್ಞಂಗಳ ಸಹಸ್ರಕೋಟಿ ಮಾಡಿದ ಫಲವು, ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ ! ಅದೆಂತೆಂದೊಡೆ : ``ಶತಕೋಟಿ ವೇದವಿಪ್ರಾಣಾಂ ತಟಾಕ ಸಪ್ತಕೋಟಿನಾಮ್ | ವಾಜಿಕೋಟಿ ಸಹಸ್ರಾಣಾಮೇಕಭಿಕ್ಷಾ ಸಮರ್ಪಣಮ್||'' ಎಂದುದಾಗಿ, ನಮ್ಮ ಅಖಂಡೇಶ್ವರಸ್ವರೂಪವಾದ ನಿಜಜಂಗಮಕ್ಕೆ ನೀಡಿದ ಫಲಕ್ಕೆ ಇನ್ನಾವ ಫಲವು ಸರಿಯಿಲ್ಲ ನೋಡಿರೊ !
--------------
ಷಣ್ಮುಖಸ್ವಾಮಿ
ದಯವೆ ಭಕ್ತಿಗೆ ಬೀಜ, ಭಕ್ತಿಯೆ ಮುಕ್ತಿಗೆ ಬೀಜ. ಮುಕ್ತಿಯೆ ಸತ್ಯಕ್ಕೆ ಬೀಜ, ಸತ್ಯವೆ ಫಲಕ್ಕೆ ಬೀಜ. ಫಲವೆ ಭವಕ್ಕೆ ಬೀಜ. ಇಂತೀ ಭೇದವ ಭೇದಿಸಿ ಶ್ರುತಿಸ್ಮøತಿತತ್ವಂಗಳಿಂದ ಬೇಡಿದವರಿಗೆ ಬಯಕೆಯ ಕೊಟ್ಟು, ಬೇಡದವರಿಗೆ ನಿಜವನಿತ್ತು, ಲೇಸು ಕಷ್ಟವೆಂಬುದ ಸಂಪಾದಿಸದೆ, ಉಭಯದ ತೆರನ ಸಂದನರಿದಿಪ್ಪ ಲಿಂಗಾಂಗಿಗೆ ಆತನಂಗಕ್ಕಿನ್ನಾವುದು ಸರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರನಾದವೆಂಬ ಸೆಳೆಕೋಲಂ ಪಿಡಿದು ಉತ್ತರ ಕ್ರೀಯೆಂಬ ಸಾಲನೆತ್ತಿ ದುಃಕರ್ಮವೆಂಬ ಕಂಟಕದ ಗುಲ್ಮವಂ ಕಡಿದು ಅರುಹೆಂಬ ರವಿಯ ಕಿರಣದಿಂದ ಒಣಗಿಸಿ ಅವಂ ಕೂಡಲೊಟ್ಟಿ, ಜ್ಞಾನಾಗ್ನಿಯೆಂಬ ಅಗ್ನಿಯಿಂದ ಸುಟ್ಟುರುಹಿ ಆ ಹೊಲನಂ ಹಸಮಾಡಿ, ಬಿತ್ತುವ ಪರಿ ಇನ್ನಾವುದಯ್ಯಾ ಎಂದಡೆ: ನಾದ. ಬಿಂದು, ಕಳೆ, ಮಳೆಗಾಲದ ಹದಬೆದೆಯನರಿದು ಸ್ಥೂಲವೆಂಬ ದಿಂಡಿಗೆ ತ್ರಿದೇವರೆಂಬ ತಾಳ ನಟ್ಟು ಇಡಾಪಿಂಗಳ ಸುಷುಮ್ನಾನಾಳವೆಂಬ ಕೋವಿಗಳ ಜೋಡಿಸಿ, ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ, ಹಂಸನೆಂಬ ಎತ್ತಂ ಹೂಡಿ, ಪ್ರಣವನೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ, ಸರ್ವಶಾಂತಿ ನಿರ್ಮಲವೆಂಬ ಮೇಘ ಸುರಿಯಲ್ಕೆ ನೀಲಬ್ರಹ್ಮವೆಂಬ ಸಸಿ ಹುಟ್ಟಿತ್ತ. ಆ ಸಸಿಯ ಮುಟ್ಟುವ ಸಪ್ತವರ್ಣದ ಸದೆಯ ಕಳೆದು ಅಷ್ಟವರ್ಣದ ಅಲಬಂ ಕಿತ್ತು, ದಶವಾಯುವೆಂಬ ಕಸಮಂ ತೆಗೆದು, ಆ ಸಸಿ ಪಸರಿಸಿ ಪ್ರಜ್ವಲಿಸಿ ಫಲಕ್ಕೆ ಬರಲಾಗಿ ಚತುರ್ವಿಧವೆಂಬ ಮಂಚಿಗೆಯಂ ಮೆಟ್ಟಿ ಬಾಲಚಂದ್ರನೆಂಬ ಕವಣೆಯಂ ಪಿಡಿದು ಪ್ರಪಂಚುವೆಂಬ ಹಕ್ಕಿಯಂ ಸೋವಿ ಆ ಬತ್ತ ಬಲಿದು ನಿಂದಿರಲು, ಕೊಯ್ದುಂಬ ಪರಿ ಇನ್ನಾವುದಯ್ಯಾ ಎಂದಡೆ: ಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ, ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವುಡ ಕಟ್ಟಿ, ಆಕಾಶವೆಂಬ ಬಣವೆಯನೊಟ್ಟಿ ಉನ್ಮನಿಯೆಂಬ ತೆನೆಯನ್ನರಿದು, ಮನೋರಥವೆಂಬ ಬಂಡಿಯಲ್ಲಿ ಹೇರಿ, ಮುಕ್ತಿಯೆಂಬ ಕೋಟಾರಕ್ಕೆ ತಂದು, ಅಷ್ಟಾಂಗಯೋಗವೆಂಬ ಜೀವಧನದಿಂದೊಕ್ಕಿ, ತಾಪತ್ರಯದ ಮೆಟ್ಟನೇರಿ, ಪಾಪದ ಹೊಟ್ಟ ತೂರಿ, ಪುಣ್ಯದ ಬೀಜಮಂ [ತ]ಳೆದು ಷಡುವರ್ಗ ಷಡೂರ್ಮೆಯೆಂಬ ಬೇಗಾರಮಂ ಕಳೆದು ಅಂಗಜಾಲನ ಕಣ್ಣ[ಮು]ಚ್ಚಿ, ಚಿತ್ರಗುಪ್ತರೆಂಬ ಕರಣಿಕರ ಸಂಪುಟಕೆ ಬರಿಸದೆ ಯಮರಾಜನೆಂಬರಸಿಗೆ ಕೋರನಿಕ್ಕದೆ ಸುಖ ಶಂಕರೋತಿ ಶಂಕರೋತಿ ಎಂಬ ಸಯಿದಾನವನುಂಡು ಸುಖಿಯಾಗಿಪ್ಪ ಒಕ್ಕಲಮಗನ ತೋರಿ ಬದುಕಿಸಯ್ಯಾ, ಕಾಮಭೀಮ ಜೀವಧನದೊಡೆಯ ಪ್ರಭುವೆ ನಿಮ್ಮ ಧರ್ಮ, ನಿಮ್ಮ ಧರ್ಮ..
--------------
ಒಕ್ಕಲಿಗ ಮುದ್ದಣ್ಣ
ಆದಿನಿರಾಳ, ಮಧ್ಯನಿರಾಳ, ಊಧ್ರ್ವನಿರಾಳ ಅಂತೆ ನಿನ್ನ ಪರಿಯಯ್ಯಾ. ಅನಾಮಯಶೂನ್ಯನೆಂದು ಹೊಗಳುತ್ತೈದಾರೆ ನಿನ್ನ ಹಲಬರು, ನೀನು ಭಕ್ತಕಾರಣ ಪರಶಿವಮೂರ್ತಿಯೆಂಬುದನರಿಯರಾಗಿ. ಎಲೆ ಅಯ್ಯಾ, ಸುಚಿತ್ತವಾದ ಲೋಕಂಗಳಲ್ಲಿ ನೀನು ಉರುತರ ನಿತ್ಯನೆಂಬುದನರಿಯರು ಕಾಣಾ ಎಲೆ ಅಯ್ಯಾ, ಅಯ್ಯ ನಿನ್ನ ಅನಾಹತ ಪಟ್ಟಣದಲ್ಲಿ ಶೂನ್ಯಕಾಯನೆಂಬ ಮಹಾಗಣೇಶ್ವರನ ಮನೆಯಲ್ಲಿ ಪದನಾಶನೆಂಬ ಯೋಗಿಯಾಗಿ ಬಂದು, ಫಲಕ್ಕೆ ಬಿತ್ತಲಿದ್ದ ಬೀಜಂಗಳ ನೀನು ಸಂಗ್ರಹಿಸಿ ಸ್ವಯಂಪಾಕವ ಮಾಡಿ, ಆತ ಕಿಂಕಿಲದಿಂ ಸದ್ಭಾವವೆಂದೆಂಬ ಪರಿಯಾಣದಲ್ಲಿ ಅಷ್ಟಪಾದಂಗಳನುಳ್ಳ ಆಧಾರವಂ ತಂದಿಟ್ಟು ಮಥಿತ ಮರ್ಧನ, ಸುಚಿತ್ತ ಸುಗುಣಂಗಳೆಂಬ ಓಗರವಂ ತಂದು ಎನಗೆ ಬಡಿಸಲಾಗಿ, ನಿತ್ಯವೆಂಬ ದೀಪ್ತಿಯ ಬೆಳಗಿನಲ್ಲಿ ಸುಚಿತ್ತಂ ಆರೋಗಣೆಯಂ ಮಾಡಿ, ರೇತೋದಾರನೆಂಬ ಗಣೇಶ್ವರ ಲೆಕ್ಕ ಮೂವತ್ತಾರು ಸಾವಿರ ಪಟ್ಟಣಂಗಳಲ್ಲಿ ಪ್ರವೇಶಿಸಿ ಬಂದ ಕಾಲದಲ್ಲಿ, ನಿನ್ನ ಸುಮತಿ ಪ್ರಸನ್ನತೆ ಪರಿಣಾಮ ಪ್ರಯೋಗವೆಂಬ ಪ್ರಸಾದ ಸ್ವೀಕಾರಂ ಮಾಡಲ್ಕಾಗಿ, ಆತನ ಮೂರರಿಂ ಮೇಲೆ ಹತ್ತರಿಂದೊಳಗೆ ಇದ್ದಂಥ ಹಲವೆಲ್ಲವೂ ಏಕೀಭವಿಸಿದವು. ಆತ ನಿತ್ಯನಾದ, ಆತ ಫಲಕ್ಕೆ ಪದಕ್ಕೆ ಭವಕ್ಕೆ ತುರೀಯ ಸಿದ್ಧ ತ್ವಮಸಿಯನೆಯ್ದಿ ಸಂದು ಹರಿದ, ಹಂಗು ಹರಿದ, ಆನಂದವೆಂಬ ಶ್ವೇತಜಲದಲ್ಲಿ ಚಂದ್ರಕಾಂತದ ಮಂಟಪವನಿಕ್ಕಿ, ಅರ್ಚನೆ ಪೂಜನೆ ವ್ಯವಹರಣೆಯೆಂಬವನತಿಗಳೆದು ಸದ್ಧಲಿಂಗಾರ್ಚನೆಯ ಮಾಡಿ ಸುಖಸಂಯೋಗದಲ್ಲಿ ಎರಡಿಲ್ಲದೆ ಮೂರ್ಚಿತವೋಗೈದಾನೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಚಿತ್ತವಸ್ತುವಿನಲ್ಲಿ ನಿಂದು ತನ್ನಯ ಗುಣದ ಭಿತ್ತಿಯನರಿಯಬೇಕೆಂಬರು. ಅರಿದ ಮತ್ತೆ ಹೊರಗಾದವ ಬೇರೆ ಕುರುಹಿಡಲೇಕೆ ? ಕಳೆದು ಬೀಳುವ ಫಲಕ್ಕೆ ಹಿಡಿಗಲ್ಲುಂಟೆ ? ಅರಿದು ನಿಶ್ಚಯವಾದವಂಗೆ ಬೇರೊಂದೆಡೆಯುಂಟೆ ? ಏಣಾಂಕಧರ ಸೋಮೇಶ್ವರಲಿಂಗಕ್ಕೆ ಪಡಿಪುಚ್ಚವಿಲ್ಲ.
--------------
ಬಿಬ್ಬಿ ಬಾಚಯ್ಯ
ನೀಲಕಂಧರ ನಿನ್ನ ಶೂಲ ಮಸ್ತಕದಲ್ಲಿ ತೋರಿಪ್ಪ ಬೆಟ್ಟವೆಂಟು, ಹರಿದು ಹಬ್ಬಿತ್ತು ನಿನ್ನಯ ನಾಮದ ಪರಿಣತೆಯ ಸುಧೆಯ ಬಳ್ಳಿ ಫಲವಾಯಿತು. ಮೂರರಲ್ಲಿ ಮರಳಿ ಬಿತ್ತಿದಡಿಲ್ಲದಂತೆ ಕುರುಹುಗೆಟ್ಟು ಹೋಯಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ ನಿನ್ನ ನುಂಗಿದ ಫಲಕ್ಕೆ ಭವವಿಲ್ಲ ನೋಡಾ.
--------------
ಸಿದ್ಧರಾಮೇಶ್ವರ
-->