ಅಯ್ಯಾ, ಗುರುದ್ರವ್ಯ, ಗಣದ್ರವ್ಯ, ಭಕ್ತದ್ರವ್ಯ,
ಚರದ್ರವ್ಯ, ಪರದ್ರವ್ಯ, ರಾಜದ್ರವ್ಯ,
ತಂದೆ-ತಾಯಿ ಬಂಧು-ಬಳಗ ಭಾವ-ಮೈದುನ ನಂಟುತನದ ದ್ರವ್ಯ,
ಕುಂತ ನಿಂತ ಸಹಾಸದ್ರವ್ಯ, ನೋಡಕೊಟ್ಟದ್ರವ್ಯ,
ನೂರೊಂದುಕುಲ ಹದಿನೆಂಟು ಜಾತಿಯ ದ್ರವ್ಯ,
ಬೀದಿ ಬಾಜಾರದಲ್ಲಿ ಬಿದ್ದ ದ್ರವ್ಯ, ಹಾದಿಪಥದಲ್ಲಿ ಬಿದ್ದ ದ್ರವ್ಯ,
ಹಕ್ಕಿಪಕ್ಕಿ ತಂದಿಟ್ಟ ದ್ರವ್ಯ,
ಮದುವೆ ಶುಭಶೋಭನದಾಸೋಹದ ದ್ರವ್ಯ ಮೊದಲಾಗಿ
ಕಳ್ಳಕಾಕರ ಸಂಗದಿಂದ ಚೋರತನದಿಂದಪಹರಿಸಿ,
ಜನ್ಮ ಜನ್ಮಾಂತರದಲ್ಲಿ ಭವಪಾತಕಕ್ಕೆ ಗುರಿಯಾಯಿತಯ್ಯ
ಎನ್ನ ಪಾಣೇಂದ್ರಿಯವು.
ಇಂಥ ಅಜ್ಞಾನದಿಂದ ತೊಳಲುವ ಜನ್ಮ ಜಡತ್ವವನಳಿದುಳಿದು
ನಿಮ್ಮ ಸದ್ಭಕ್ತ ನಿಜಶರಣ ದೇವರದಾಸಿಮಯ್ಯನ ದಾಸಿಯ
ಪಾದವನೊರಸಿ ಬಾಳುವಂತೆ ಮಾಡಯ್ಯ ಕರುಣಾಳಿ
ಎನ್ನಾಧಾರಮೂರ್ತಿ ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.