`ಯಸ್ಯ ಕ್ರಿಯಾ ತಸ್ಯ ಭವತಿ' ಎಂದು ಕಟ್ಟಾಚಾರದಲು ಇದ್ದು,
ನಾನು ಅನುಸರಿಸಿಕೊಂಡು ನಡೆವನ್ನಕ್ಕ ಕರ್ಮಕಾಂಡಿಯಲ್ಲ.
ಉತ್ಪತ್ತಿ-ಸ್ಥಿತಿ-ಭೋಗ-ಭುಕ್ತಿ ಕಾಯವುಳ್ಳನ್ನಕ್ಕ ಭಕ್ತಿಕಾಂಡಿಯಲ್ಲ,
ಪರವು ಸಾಧ್ಯವಾಯಿತ್ತೆಂದು ಕ್ರೀಯೆಲ್ಲವ ಮೀರಿ ನಡೆವೆನು.
ಪರತತ್ವವನರಿದೆಹೆನೆಂಬನ್ನಕ್ಕ ಜ್ಞಾನಕಾಂಡಿಯಲ್ಲ.
ಇನ್ನು ಕರ್ಮಕಾಂಡ, ಭಕ್ತಿಕಾಂಡ, ಜ್ಞಾನಕಾಂಡ
ಈ ತ್ರಿವಿಧದಲ್ಲಿ ವಂಚಕನಾದಡೆ
ಈಸು ವಿಧದೊಳಗೆ ಅಂಗವಿಲ್ಲ,
ಮೇಲೆ ಸತ್ಪುರುಷರ ಸಂಗವಿಲ್ಲ,
ಯುಕ್ತಿಯಿಲ್ಲ, ಭಕ್ತಿಯೆಂತಹುದಯ್ಯಾ
ಬಲ್ಲವರ ಬೆಸಗೊಂಡಡೆ ಎನ್ನ ಬಿಮ್ಮು ಕೆಟ್ಟಿಹುದೆಂದು
ಮೆಲ್ಲನೆ ಪ್ರಸಂಗದಿಂದ ತಿಳಿದು ನೋಡುವೆ.
ಕೂಡಲಸಂಗಮದೇವಾ,
ಎನ್ನ ಗುಣವ ನೋಡದೆ
ಶಿವರಾತ್ರಿಯ ಸಂಕಣ್ಣಗಳಿಗೆ ಕರುಣಿಸಿದಂತೆ
ಎನಗೆ ಕೃಪೆಮಾಡಯ್ಯಾ.