ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಗುರುಕರುಣಕಟಾಕ್ಷದೊಳ್ ಚಿದ್ಘನಲಿಂಗ ಅಂಗಸಂಬಂಧದಾಚರಣೆಯ ಸರ್ವಾಚಾರಸಂಪದವೆಂಬ ಪರಮಾಮೃತಮಂ ಸವಿದುಂಡುಪವಾಸಿ ಬಳಸಿಬ್ರಹ್ಮವಾಗಿ, ಪರಮಪಾತಕವೆಂಬ ಕಾಲ ಕಾಯ ಮಾಯಾಪಾಶ ಭವಸಾಗರವ ದಾಂಟಿ, ದೃಢಚಿತ್ತಿನೊಳ್ ನಿಂದ ನಿತ್ಯಸುಖಿಗಳು, ತಮ್ಮ ನಡೆ ನುಡಿ ತಮಗೆ ಸ್ವಯವಾಗಿ, ಸತ್ಯಶುದ್ಧದಿಂದ ಹಸ್ತಪಾದವ ದುಡಿಸಿ, ಮಾಡುಂಬ ಭಕ್ತನಾಗಲೀ, ಬೇಡುಂಬ ಮಹೇಶನಾಗಲೀ, ಅಂಗವಿಕಾರದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅವಲಕ್ಷಣಮಂ ಜರಿದು ಮರೆದು ನಿರಾಸತ್ವದಿಂದ, ದೇಹಮೋಹಮನ್ನಳಿದುಳಿದು, ಅಪರಾಧ ಪ್ರಾಣಿಗಳಾಗಲಿ, ನಿರಪರಾಧ ಪ್ರಾಣಿಗಳಾಗಲಿ, ಕೊಲ್ಲದಿರ್ಪುದೆ ಧರ್ಮ, ಗಂಧ ರಸ ಮೊದಲಾದ ಪರದ್ರವ್ಯ ಒಲ್ಲದಿಪ್ಪುದೆ ಶೀಲ, ಗುರುಹಿರಿಯರುಗಳಿಗೆ ಪ್ರತಿ ಉತ್ತರವ ಕೊಡದಿಪ್ಪುದೆ ವ್ರತ, ಕ್ಷುತ್ತು ಪಿಪಾಸಾದಿಗಳಿಗೆ ಅಳುಕದಿಪ್ಪುದೆ ನೇಮ, ಕುಲಾದಿ ಅಷ್ಟಮದಗಳಿಗೆಳಸದಿಪ್ಪುದೆ ನಿತ್ಯ. ಇಂತೆಸೆವ ಪಂಚಪರುಷವ ಬಾಹ್ಯಾಂತರಂಗದಲ್ಲಿ ಪರಿಪೂರ್ಣಭಾವದಿಂದ ತುಂಬಿತುಳುಕಾಡುತ, ಶ್ರಿಗುರುಲಿಂಗಜಂಗಮದ ಷಟ್ಸಾ ್ಥನದಲ್ಲಿ ಷಡ್ವಿಧಲಿಂಗ ಮಂತ್ರಪ್ರಣಮಂಗಳು ಸಂಬಂಧವಾಗಿಪ್ಪುದ ಶ್ರುತಿಗುರುಸ್ವಾನುಭಾವದಿಂದರಿದು, ತನ್ನ ಬಳಿವಿಡಿದು ಬಂದ ಸುಪದಾರ್ಥವ ಆ ಗುರುಚರಪರಕ್ಕೆ ಪುಷ್ಪ ಮೊದಲಾದ ಸುಗಂಧವ ಪವಿತ್ರಮುಖದಿಂದ ನಿವೇದಿಸಿದಲ್ಲಿ ಆಚಾರಲಿಂಗಕ್ಕೆ ಸಮರ್ಪಣೆಯಾಗಿಪ್ಪುದು. ಹಣ್ಣು ಮೊದಲಾದ ಸುರಸದ್ರವ್ಯವ ಸುಪವಿತ್ರಗಳಿಂದ ಸುಪವಿತ್ರಮುಖದೊಳ್ ಸಮರ್ಪಿಸಿದಲ್ಲಿ ಗುರುಲಿಂಗಕ್ಕೆ ಸಮರ್ಪಣೆಯಾಗಿಪ್ಪುದು. ಪೀತ ಶ್ವೇತ ಮೊದಲಾದ ಸಮಸ್ತ ಚಿತ್ರವಿಚಿತ್ರಂಗಳ ಸ್ವರೂಪವನು ಮಹಾಜ್ಞಾನಸೂತ್ರವಿಡಿದು ಯೋಗ್ಯವೆನಿಸಿ ನಿವೇದಿಸಿದಲ್ಲಿ ಶಿವಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಕೌಪ ಕಟಿಸೂತ್ರ ಮೊದಲಾದ ವಸ್ತ್ರಾಭರಣಗಳ ಯೋಗ್ಯವೆನಿಸಿ ತಟ್ಟುವ ಮುಟ್ಟುವ ಶೀತುಷ್ಣಾದಿ ಸತ್ಕ್ರಿಯವಿಡಿದು ಸಮರ್ಪಿಸಿದಲ್ಲಿ ಚರಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಶಿವಾನುಭಾವಪ್ರಸಂಗ ಘಂಟೆ ತಂತಿ ಚರ್ಮ ಮೊದಲಾದ ಸುಶಬ್ದಂಗಳ ಸತ್ಯಶುದ್ಧ ತ್ರಿಕರಣವಿಡಿದು ಪವಿತ್ರತೆಯಿಂದ ನಿವೇದಿಸಿದಲ್ಲಿ ಪ್ರಸಾದಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಈ ಸಕಲ ಸಂತೋಷವಾದ ಮತ್ತೆ ಹೊನ್ನು ಹೆಣ್ಣುಗಳ ಗಣಸಾಕ್ಷಿಯಾಗಿ, ಸತ್ಯಸಾವಧಾನದಿಂದೆ ಧಾರೆಯನೆರೆದು, ಶಿವದೀಕ್ಷೋಪದೇಶಗಳಿಂದ ಸುಪವಿತ್ರವೆಂದೆನಿಸಿ ನಿವೇದಿಸಿದಲ್ಲಿ ಮಹಾಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಈ ಪ್ರಕಾರದಿಂದ ಸತ್ಯಶುದ್ಧಕಾಯಕದೊಳು ತನಗುಳ್ಳ ಸುಪದಾರ್ಥದ್ರವ್ಯವ ನಿಜೇಷ್ಟಾರ್ಪಣ ಪರದಿಂದೆ ಲಿಂಗಾರ್ಪಣವ ಸಮರ್ಪಿಸಬಲ್ಲಾತನೆ ಷಟ್‍ಸ್ಥಲಭಕ್ತ ಮಹೇಶ್ವರರೆಂಬೆನು. ಈ ಷಡ್ವಿಧ ದ್ರವ್ಯಪದಾರ್ಥಂಗಳು ದೊರೆಯದಿದ್ದರೆ ಮೂಲಚಿತ್ತ ಮೊದಲಾದ ಅಂಗ ಮನ ಪ್ರಾಣ ಇಂದ್ರಿಯ ಕರಣ ವಿಷಯಂಗಳ ಆ ಶ್ರೀಗುರುವಿಂಗೆ ಜಂಗಮದ ಸೊಮ್ಮುಸಂಬಂಧದಲ್ಲಿ ನಿಲಿಸುವುದೆ ಸರ್ವಾಂಗಲಿಂಗಾರ್ಪಣವಾಗಿರ್ಪುದು. ಇದರೊಳಗೆ ತನು ನೋಯದೆ, ಮನ ಕರಗದೆ, ಭಾವ ಬಳಲಿಸದೆ, ಅತಿ ಸುಯಿಧಾನದಿಂದ ನಿಃಕಳಂಕ ಪರಶಿವ ಪಾದೋದಕ ಪ್ರಸಾದ ಮಂತ್ರದ ಪರಶಿವತತ್ವದಲ್ಲಿ ಪರಿಪೂರ್ಣರಾಗಿರ್ಪುದೆ ಅನಾದಿಪ್ರಮಥಗಣಮಾರ್ಗವು. ಇಂತೆಸೆವ ಸಚ್ಚಿದಾನಂದದ ಪರಮಾನುಭಾವ ಸನ್ಮಾರ್ಗವನುಳಿದು ಸರ್ವಾಚಾರಸಂಪನ್ನ ಬಾಹ್ಯರಾದ ಕಿರಾತರಂತೆ, ಭಂಗಿ ಗಾಂಜಿ ಗುಡಾಕು ತಂಬಾಕದ ಚಿಲುಮೆ ಕಡ್ಡಿ ಹುಡಿ ನಾಸಿಬುಕುಣಿಯೆಂದು ಭುಂಜಿಸಿ, ಹುಚ್ಚನಾಯಿ ಎಲುವ ಕಚ್ಚಿದಂತೆ, ದಿವರಾತ್ರಿಗಳಲ್ಲಿ ಪಾದೋದಕಪ್ರಸಾದದ್ವಾರವಾಗಿ ಪರಿಶೋಭಿಸುವಂತೆ ಪರಶಿವ ಪ್ರಾಣಲಿಂಗದ ಭೋಗಾಂಗದಲ್ಲಿಟ್ಟುಕೊಂಡು, ಭ್ರಾಂತು ಭೋಗಿಗಳಾಗಿ, ನಿಜಗೆಟ್ಟು, ತಮ್ಮ ತಾವರಿಯದೆ, ಪಿಶಾಚಿಮಾನವರಂತೆ ಇಂದ್ರಾದಿ ಹರಿಸುರಬ್ರಹ್ಮಾದಿಗಳು ಹೊಡೆದಾಡಿದ ಕರ್ಮದೋಕುಳಿಯಲ್ಲಿ ಬಿದ್ದೊದ್ದಾಡಿ ತೊಳಲುವ, ವನಿತಾದಿ ಆಸೆ, ಭೋಗದ ಆಸೆ ಪಾಶದೋಕುಳಿಯೆಂದರಿದು ಮರೆದು ನರಗುರಿಗಳಾಗಿ, ಬಾಯಿಗೆ ಬಾಯಿ ಹಚ್ಚಿ ಬೊಗಳಾಡುವುದೊಂದು ದುರಾಚಾರ. ರಾಜರಿಗೆ ರೊಕ್ಕವ ಕೊಟ್ಟು, ಯಂತ್ರ ಮಂತ್ರ ತಂತ್ರಗಳಿಂದೋಲೈಸಿ, ಮಲತ್ರಯವಿದೂರರೆಂದು ಪತ್ರ ಉತ್ರಗಳಲ್ಲಿ ಹೆಮ್ಮೆ ಹಿರಿತನಕ್ಕೆ ಬಿದ್ದು, ಅಂದಿನವರೆ ಇಂದಿನವರೆಂದು ಒಪ್ಪವಿಟ್ಟು, ನುಡಿನಡೆಹೀನರಾಗಿ, ಬಿಟ್ಟಿಮಲವನುಸರಿಸಿ, ತಥ್ಯ ಮಿಥ್ಯ ತಾಗುದ್ವೇಷಗಳಿಂದೆ ದಿವರಾತ್ರಿಗಳಲ್ಲಿ ತ್ರಿವಿಧವಸ್ಥೆಗಳ ಕಳೆದು, ಒಬ್ಬರೊಬ್ಬರು ಹೊಡೆದಾಡುವುದೊಂದು ದುರಾಚಾರ. ಇಂತಲ್ಲದೆ, ಮಿಲಂಚರಾಕ್ಷಸರ ಅರವತ್ತುನಾಲ್ಕು ವಿದ್ಯೆ ಬತ್ತೀಸಾಯುಧಗಳ ಕಟ್ಟಿ, ತಳ್ಳಿತಗಾದಿಗಳಿಂದ ಹೊಲ ಗದ್ದೆ ಬಣಮೆಗಳ ಸುಟ್ಟು, ಅನಂತ ಹಿಂಸೆಗಳ ಮಾಡಿ, ಊರು ಕೇರಿ ಪೇಟೆ ಪಟ್ಟಣಗಳ ಸುಲಿದು, ಹಾದಿ ಬೀದಿಯ ಬಡಿದು, ಮತ್ತೆ ನಾಚಿಕೆಯಿಲ್ಲದೆ ನಾವು ವೀರಶೈವಘನದ ಭಕ್ತಮಹೇಶ್ವರರೆಂದು, ನಡೆಗೆಟ್ಟು ನುಡಿಯ ನುಡಿವುದೊಂದು ಅತಿಕಠಿಣವಾದ ದುರಾಚಾರವು. ವಿಭೂತಿ ರುದ್ರಾಕ್ಷಿ ಗುಣತ್ರಯಗಳಳಿದುಳಿದ ಶಿವಲಾಂಛನ ಮುದ್ರಾಧರ್ಮಗಳ ಹೊದೆದು, ಜಡೆ ಮಕುಟಗಳ ಬಿಟ್ಟು, ಕೌಪ ಕಟಿಸೂತ್ರವ ಧರಿಸಿ, ನಿಜಮೋಕ್ಷಪದವನರಿಯದೆ, ಅರ್ಥೇಷಣ ಪುತ್ರೇಷಣ ಧಾರೇಷಣ ಈಷಣತ್ರಯದ ಮೋಹಾಭಿರತಿಯಿಂದ, ಅಂತಜ್ರ್ಞಾನ ಬಹಿಕ್ರ್ರಿಯಾಚಾರವ ಮೆರೆದು, ಕಾಲತ್ರಯ ಕಾಮತ್ರಯ ಕರ್ಮತ್ರಯ ದೋಷತ್ರಯ ಪಾಪತ್ರಯ ರೋಗತ್ರಯ ಅಜ್ಞಾನತ್ರಯ ಅನಾಚಾರತ್ರಯ ಮೊದಲಾದ ಭವಪಾಶದಲ್ಲಿ ಮುಳುಗುಪ್ಪಿಯಾಗಿ ಭರಿಸುವಂಥಾದ್ದೆ ಐದನೆಯ ಪಾತಕವು. ಇದಕ್ಕೆ ಹರನಿರೂಪ ಸಾಕ್ಷಿ : ``ತಸ್ಕರಂ ಪರದಾರಂಚ ಅನ್ಯದೈವಮುಪಾಸನಂ | ಅನೃತಂ ಇಂದಕಶ್ಚೆ ೈವ ತಸ್ಯ ಚಾಂಡಾಲವಂಶಜಃ || ಪರಾರ್ಥಹಿಂಸಕಶ್ಚೈವ ಭಕ್ತದ್ರೋಹೀ ಚ ನಿಂದಕಃ | ಪ್ರಾಣಘಾತಕದೇಹಾನಾಂ ತಸ್ಮಾತ್‍ಚಾಂಡಾಲವಂಶಜಃ || ಅಲ್ಪಜೀವೀ ಭವಪ್ರಾಣೀ ಅಲ್ಪಭೋಗನಿರರ್ಥಕಃ | ಅಲ್ಪಾಶ್ರಯಂ ನ ಕರ್ತವ್ಯಂ ಮಹದಾಶ್ರಯಃ || ಅಜ್ಞಾನಾಚ್ಚ ಕೃತಂ ಪಾಪಂ ಸುಜ್ಞಾನಾಚ್ಚ ವಿನಶ್ಯತಿ | ಸುಜ್ಞಾನಾಚ್ಚ ಕೃತಾತ್ ಪಾಪಾತ್ ರೌರವಂ ನರಕಂ ವ್ರಜೇತ್ ||'' ಎಂದುದಾಗಿ, ಪರಿಪೂರ್ಣ ಶ್ರೀಗುರುಮಾರ್ಗಾಚಾರ ನಡೆನುಡಿಯಿಂದಾಚರಿಸಿ, ನಿಜಮುಕ್ತಿಮಂದಿರವ ಸೇರಬೇಕೆಂಬ ಸದ್ಭಕ್ತಮಹೇಶ್ವರರು ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವನೈದಿ, ಪರಮಪಾತಕಂಗಳಿಗೆ ಮಹಾಜ್ಞಾನಾಯುಧವ ಹಿಡಿದು, ನಿತ್ಯ ನಿತ್ಯ ಇತರೇತರ ದುಶ್ಚಾಷ್ಟಿ ಬಿಟ್ಟು ಘನಲಿಂಗಾಂಗಸಮರಸಮನೋಲ್ಲಾಸ ಸದ್ಭಕ್ತಿ ಜ್ಞಾನವೈರಾಗ್ಯ ನಿಜನಿಷಾ*ಪರತ್ವಮಂ ಸಾಧಿಸಿ, ತಮ್ಮ ತಾವರಿತವರೆ ಪರಶಿವಯೋಗಾನಂದಭರಿತರೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
-->