ಲಿಂಗವೆ ಹಸಾದ ಶುಚಿಯೆಂದ ಬಳಿಕ
ಸೂತಕ ಪಾತಕ ಸಂಕಲ್ಪಿಸಿಕೊಂಡು ಹೊಲೆಮನೆಯೆನ್ನಿರಿ.
ಆ ಹೊಲೆಯರ ಮನೆಯಲ್ಲಿ ಸತ್ತ ದನದ ಮಾಂಸ
ಕಂಡ ಹೆಂಡವಲ್ಲದೆ ಅಲ್ಲೇನು ಪ್ರಯೋಜನವಿಲ್ಲ.
ನೀನು ಅವನ ಮನೆಯ ಪೆಸರ್ಗೊಂಬೆ,
ನೀನೇನು ಹೊಲೆಯನೆ ?
ನೀನು ಹೊಲೆಯನಾದರೆ ನಿನ್ನ ಮನೆಯೊಳಗಿರುವ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ
ವಿಭೂತಿ ರುದ್ರಾಕ್ಷಿ ಶಿವಮಂತ್ರ ಹೊಲೆ.
ಮಾನವನೆ ಕೇಳು, ಉಪ್ಪುಗೂಡಿ ಒಂಬತ್ತು ಪದಾರ್ಥವ
ಗಡಗಿ ಗುಡಾಣಿಗಳ ಮನೆಯೊಳಗಿಟ್ಟುಕೊಂಡು,
ನವೀನ ವನದ ಹೊದರ ಪೆಟ್ಟಿಗೆಯೊಳಗಿಟ್ಟು
ಸೀರಿ ಕೌದಿ ತೊಳೆದುಹಾಕಿ, ಗೋಡೆ ತೊಳೆದು,
ಹೊಲೆ ಹೋಯಿತೆಂದು ಮನೆಯಲ್ಲಿ ಇದ್ದ
ಮುನ್ನಿನ ಗಡಿಗೆಯಲ್ಲಿಅಡಿಗೆಯ ಮಾಡಿ,
ಗುರುಲಿಂಗಜಂಗಮಕ್ಕೆ ಭಕ್ತಜನಂಗಳಿಗೆ
ಸಲಿಸ ನೀಡಿದೆನೆಂಬ ಶುನಕಮಾನವ ಕೇಳು.
ಅದೆಂತೆಂದಡೆ : ಶ್ಲೋಕ-
'ತದ್ದಿನಂ ದಿನದೋಷೇಣ ಶ್ರೋಣಿತಂ ಸುರಮಾಂಸಯೇ |
ಸಂಕಲ್ಪ ವಿಕಲ್ಪನಾ ನರಕೇ ಕಾಲಮಕ್ಷಯಂ ||'
ಎಂದುದಾಗಿ, ಇಂತಪ್ಪ ಸೂತಕ ಪಾತಕದಲ್ಲಿ
ಹೊರಳಾಡುವ ಪಾತಕದ ವಿಪ್ರರ ಮಾತುಕೇಳಿ ಮಾಡುವ
ಶಿವಭಕ್ತರಿಗೆ ಅಘೋರನರಕ ತಪ್ಪದು ಕಾಣಾ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.