ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (4) (0) (0) (0) (2) (0) (0) (0) (1) (0) (5) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರೀಮತ್ಸಜ್ಜನ ಶುದ್ಧಶಿವಾಚಾರರಾಗಿ ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಬಸವೇಶ್ವರದೇವರ ಸಾಂಪ್ರದಾಯಕರೆಂದು ನುಡಿದು ನಡೆದರೆ ಭಕ್ತರೆಂಬೆ, ಪುರಾತನರೆಂಬೆ. ಅಂತಪ್ಪ ಭಕ್ತಂಗೆ ಈ ಮೂಜಗವೆಲ್ಲ ಸರಿಯಲ್ಲವೆಂಬೆ. ಆ ಭಕ್ತಂಗೆ ಶಿವನ ಗದ್ದುಗೆಯೆ ಕೈಲಾಸವಾಗಿಪ್ಪುದು ನೋಡಾ. ಈ ಶಿವಾಚಾರದ ಪಥವನರಿಯದೆ ಇರುಳು ಹಗಲು ಅನಂತ ಸೂತಕಪಾತಕಂಗಳೊಳಗೆ ಮುಳುಗಾಡಿ ಮತಿಗೆಟ್ಟು ಪಂಚಾಂಗವ ಬೊಗಳುವ ಭ್ರಷ್ಟ ಮಾದಿಗರ ಮಾತು ಅಂತಿರಲಿ. ಪಂಚಾಂಗ ಕೇಳಿದ ದಕ್ಷಬ್ರಹ್ಮನ ತಲೆಯೇಕೆ ಹೋಯಿತು ? ಪಂಚಾಂಗ ಕೇಳಿದ ಪಂಚಪಾಂಡವರು ದೇಶಭ್ರಷ್ಟರಾದರೇಕೆ ? ಪಂಚಾಂಗ ಕೇಳಿದ ಶ್ರೀರಾಮನ ಹೆಂಡತಿ ರಾವಣಗೆ ಸೆರೆಯಾದಳೇಕೆ ? ಪಂಚಾಂಗ ಕೇಳಿದ ಇಂದ್ರನ ಶರೀರವೆಲ್ಲ ಯೋನಿಮಂಡಲವೇಕಾಯಿತು ? ಪಂಚಾಂಗ ಕೇಳಿದ ದ್ವಾರಾವತಿ ಪಟ್ಟಣದ ನಾರಾಯಣನ ಹೆಂಡಿರು ಹೊಲೆಮಾದಿಗರನ್ನು ಕೂಡಿದರೇಕೆ ? ಪಂಚಾಂಗ ಕೇಳಿದ ಸರಸ್ವತಿಯ ಮೂಗು ಹೋಯಿತೇಕೆ ? ಪಂಚಾಂಗ ಕೇಳಿದ ಕಾಮ ಸುಟ್ಟು ಭಸ್ಮವಾದನೇಕೆ ? ಪಂಚಾಂಗ ಕೇಳಿದ ಬ್ರಹ್ಮ ವಿಷ್ಣು ಇಂದ್ರ ಮೊದಲಾದ ಮೂವತ್ತುಮೂರುಕೋಟಿ ದೇವರ್ಕಳು ತಾರಕಾಸುರನಿಂದ ಬಾಧೆಯಾಗಿ ಕಂಗೆಟ್ಟು ಶಿವನ ಮೊರೆಯ ಹೊಕ್ಕರೇಕೆ ? ಕುರುಡ ಕುಂಟ ಹಲ್ಲುಮುರುಕ ಗುರುತಲ್ಪಕನ ಬಲವ ಕೇಳಲಾಗದು. ಶುಭದಿನ ಶುಭಲಗ್ನ ಶುಭವೇಳೆ ಶುಭಮುಹೂರ್ತ ವ್ಯತಿಪಾತ ದಗ್ಧವಾರವೆಂದು ಸಂಕಲ್ಪಿಸಿ ಬೊಗಳುವರ ಮಾತ ಕೇಳಲಾಗದು. ಗುರುವಿನಾಜ್ಞೆಯ ಮೀರಿ, ಸತ್ತರೆ ಹೊಲೆ, ಹಡೆದರೆ ಹೊಲೆ, ಮುಟ್ಟಾದರೆ ಹೊಲೆ ಎಂದು ಸಂಕಲ್ಪಿಸಿಕೊಂಬುವಿರಿ. ನಿಮ್ಮ ಮನೆ ಹೊಲೆಯಾದರೆ ನಿಮ್ಮ ಗುರುಕೊಟ್ಟ ಲಿಂಗವೇನಾಯಿತು ? ವಿಭೂತಿ ಏನಾಯಿತು ? ರುದ್ರಾಕ್ಷಿ ಏನಾಯಿತು ? ಮಂತ್ರವೇನಾಯಿತು ? ಪಾದೋದಕ ಪ್ರಸಾದವೇನಾಯಿತು ? ನಿಮ್ಮ ಶಿವಾಚಾರವೇನಾಯಿತು ? ನೀವೇನಾದಿರಿ ಹೇಳಿರಣ್ಣಾ ? ಅರಿಯದಿದ್ದರೆ ಕೇಳಿರಣ್ಣಾ. ನಿಮ್ಮ ಲಿಂಗ ಪೀತಲಿಂಗ; ನೀವು ಭೂತಪ್ರಾಣಿಗಳು. ನಿಮ್ಮ ಮನೆಯೊಳಗಾದ ಪದಾರ್ಥವೆಲ್ಲ ಹೆಂಡಕಂಡ ಅಶುದ್ಧ ಕಿಲ್ಬಿಷವೆನಿಸಿತ್ತು. ಇದ ಕಂಡು ನಾಚದೆ, ಮತ್ತೆ ಮತ್ತೆ ಶುಭಲಗ್ನವ ಕೇಳಿ, ಮದುವೆಯಾದ ಅನಂತ ಜನರ ಹೆಂಡಿರು ಮುಂಡೆಯರಾಗಿ ಹೋದ ದೃಷ್ಟವ ಕಂಡು ಪಂಚಾಂಗವ ಕೇಳಿದವರಿಗೆ ನಾಯಿ ಮಲವ ಹಂದಿ ಕಿತ್ತುಕೊಂಡು ತಿಂದಂತಾಯಿತ್ತು ಕಾಣಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗಪ್ರಸಾದವ ಚೆಲ್ಲದಿರುವುದೆ ಪಂಚಾಂಗ. ತನ್ನ ಲಿಂಗವಲ್ಲದೆ ಭೂದೇವರ ಅಲ್ಲಗಳೆವುದೆ ಪಂಚಾಂಗ. ಎಲ್ಲ ಕಾಲ ವೇಳೆಯಲ್ಲಿ ನಿಲ್ಲದೆ ನೆನೆವುದೆ ಶುಭದಿನ ಶುಭಲಗ್ನ ಶುಭಮುಹೂರ್ತ ಗುರುಬಲ ಚಂದ್ರಬಲ ಸೂರ್ಯಬಲವೆನಿಸುವುದಯ್ಯ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಶ್ರೀಗುರುಪ್ರಸನ್ನ ಪಂಚಾಕ್ಷರಿಯ ನಾಮವ ನೆನೆದು ಪಂಚಭೂತದ ಕಾಯವನಳಿದು, ಪಂಚಭೂತದಲ್ಲಿ ಪಂಚಾಕ್ಷರಿಯ ತುಂಬಿ, ಆ ಪಂಚಾಕ್ಷರಿಯ ಬೆಸನವ ನೆಲೆಗೊಂಬುವುದೆ ಪಂಚಾಂಗ. ಪಂಚಾಂಗದಲ್ಲಿ ಸಂಚರಿಸುವ ವಂಚನೆಯ ಇಂದ್ರಿಯವ ಲಿಂಗದ ಸಂಚಿನಲ್ಲಿ ಇರಿಸುವುದೆ ಪಂಚಾಂಗ. ಇಂತೀ ಭೇದವ ಭೇದಿಸಿ ತಿಳಿಯಲರಿಯದೆ ಅನಂತ ಹಿರಿಯರು ಕೆಟ್ಟರು ನೋಡಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗವ ಕರ ಮನ ಭಾವದೊಳಗಿಟ್ಟು ಪೂಜೆಮಾಡಲರಿಯದೆ ಭ್ರಷ್ಟ ವಿಪ್ರನ ಮಾತು ಕೇಳಿ ನಷ್ಟಕ್ಕೊಳಗಾಗುವ, ಕಂಚು ತಾಮ್ರ ಮೊದಲಾದ ಅನಂತದೇವರ ಭಜನೆಯ ಮಾಡುವ ಮಡ್ಡ ಜಡಮಾದಿಗರ ಎನಗೊಮ್ಮೆ ತೋರದಿರಯ್ಯ ನಿಸ್ಸಿಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಶಿವನು ಜಗದ್ಭರಿತನೆಂದೆಂಬರ ಬಾಯಲ್ಲಿ ಇಕ್ಕಿರೊ ಹನ್ನೆರಡು ವರ್ಷದ ಹಳೆಯ ಪಾದರಕ್ಷೆಯನು. ಅದೇನು ಕಾರಣವೆಂದಡೆ : ಶಿವನು ಜಗದ್ಭರಿತನೆ ? ಅಲ್ಲ. ಶಿವನು ಜಗದ್ಭರಿತನಾದೊಡೆ ಜೀವಕ್ಕೆ ಜೀವ ಭಕ್ಷಿಸಲೇತಕೊ ? ಶಿವನು ಜಗದ್ಭರಿತನಾದೊಡೆ ಪ್ರಾಣಕ್ಕೆ ಪ್ರಾಣ ವಿರೋಧಿಸಲೇತಕೊ ? ಶಿವನು ಜಗದ್ಭರಿತನೆಂದರಿಯದೊಡೆ ತಾನೆ ಗುರು ತಾನೆ ಲಿಂಗ ತಾನೆ ಜಂಗಮ ತಾನೆ ಪಾದೋದಕ ತಾನೆ ಪ್ರಸಾದ ಕಾಣಾ ನಿಸ್ಸಂಗ ನಿರಾಳಪ್ರಭುವೆ.
--------------
ನಿರಾಲಂಬ ಪ್ರಭುದೇವ