ಶಿವನಿಂದಧಿಕ ದೈವ ಇಲ್ಲ,
ಶಿವಭಕ್ತಂಗಧಿಕ ಕುಲಜನಿಲ್ಲವೆಂದು
ಹೇಳುವುವು ಆಗಮ ಶ್ರುತಿ.
ಅದು ಎಂತೆಂದಡೆ :
ಸರ್ವ ಅಪ್ಸರರು ಸರ್ವ ಗಂಧರ್ವರು
ಸರ್ವ ಯತಿಗಳು ಸರ್ವ ಜತಿಗಳು
ಎಲ್ಲಾರು, ಎಲಾ ಈ ಶಿವಲಿಂಗಮಂ ಪೂಜಿಸಿ
ಮೋಕ್ಷವ ಪಡೆದೆನೆಂಬೋ ಭಕ್ತರು ನೀವು ಕೇಳಿರಯ್ಯಾ :
ಈ ಶಿವಲಿಂಗಮಂ ಬ್ರಹ್ಮ ಪೂಜಿಸಿ ಭವ ಹಿಂಗಿಸಿದ ;
ವಿಷ್ಣು ಪೂಜಿಸಿ ಹತ್ತು ಅವತಾರದ ದೋಷವನೀಡಾಡಿದ ;
ಇಂದ್ರ ಪೂಜಿಸಿ ಅಯಿಶ್ವರ್ಯಮಂ ಪಡೆದ ;
ಋಷಿಗಳು ಪೂಜಿಸಿ ಕುಲವಂ ಕಳೆದು
ಬ್ರಹ್ಮರೆನಿಸಿ ನಿಶ್ಚಿಂತರಾದರು ;
ಮಹಾಗಣಾಧೀಶ್ವರರೂ ಪೂಜಿಸಿ
ಕೈಲಾಸಕ್ಕೆ ಸೋಪಾನವ ಕಟ್ಟಿದರು ;
ಮಿಕ್ಕ ನರರು ಪೂಜಿಸಿ [ಸು]ರಲೋಕವನೈದಿದರೆಂಬೋ
ಶಾಸ್ತ್ರವಂ ಕೇಳಿ, ಓದಿ, ಹಾಡಿ, ತಿಳಿದು,
ಪರಮ ವಿರಕ್ತಿಯ ನಿಟ್ಟಿಸಲಾರದೆ
ಪರದೈವಕಡ್ಡ ಬಿದ್ದು
ಹಿಂದೆ ಅವ ಕಟ್ಟಿದ ಲಿಂಗವು
ಕೋಣನ ಕೊರಳಿಗೆ ಗುದಿಗೆ ಕಟ್ಟಿದಂತಾಯಿತು ಕಾಣಾ
ಕೂಡಲಾದಿ ಚನ್ನಸಂಗಮದೇವಾ.