ಸೂಳೆಯ ತನುಮನದ ಕೊನೆಯಲ್ಲಿ
ವಿಟಗಾರನೇ ಪ್ರಾಣಲಿಂಗ;
ಶೀಲವಂತನ ತನುಮನದ ಕೊನೆಯಲ್ಲಿ
ಭವಿಯೇ ಪ್ರಾಣಲಿಂಗ ;
ನಿತ್ಯ ಪ್ರಸಾದಿಯ ತನುಮನದ ಕೊನೆಯಲ್ಲಿ
ಬೆಕ್ಕೇ ಪ್ರಾಣಲಿಂಗ ;
ಬ್ರಾಹ್ಮಣರ ತನುಮನದ ಕೊನೆಯಲ್ಲಿ
ಸೂತಕವೇ ಪ್ರಾಣಲಿಂಗ;
ಇಂಥವರಿಗೆಲ್ಲಾ ಇಂತಾಯಿತು!
ದೇವರಗುಡಿಯೆಂದು ದೇಗುಲವ ಪೊಕ್ಕು
ನಮಸ್ಕಾರವ ಮಾಡುವಂಗೆ
ಹೊರಗೆ ಕಳೆದ ಪಾದರಕ್ಷೆಯೆ ಪ್ರಾಣಲಿಂಗ.
ಅದು ಎಂತೆಂದಡೆ :
ಸೂಳೆಗೆ ವಿಟನ ಹಂಬಲು;
ಶೀಲವಂತನಿಗೆ ಭವಿಯ ಹಂಬಲು;
ನಿತ್ಯಪ್ರಸಾದಿಗೆ ಬೆಕ್ಕಿನ ಹಂಬಲು ;
ಬ್ರಾಹ್ಮಣನಿಗೆ ಸೂತಕದ ಹಂಬಲು ;
ಇವರು ಭಕ್ತಿಶೂನ್ಯರು ಕಾಣಿರಯ್ಯಾ !
ಇವಂ ಬಿಟ್ಟು,
ಪರಸ್ತ್ರೀಯರ ಮುಟ್ಟದಿರ್ಪುದೇ ಶೀಲ ;
ಪರದ್ರವ್ಯ[ವ]ಅಪಹರಿಸದಿರುವುದೇ ಆಚಾರ ;
ಪರನಿಂದೆ[ಯ] ಕರ್ಣದಿಂ ಕೇಳದಿರ್ಪುದೇ ನಿತ್ಯಪ್ರಸಾದತ್ವ ;
ಪರರಂ ದೂಷಿಸದಿರ್ಪುದೇ ಬ್ರಹ್ಮತ್ವ.
ಇಂತಿದರಲ್ಲಿ ನಡೆದು,
ದೇವರಿಗೆ ನಮಸ್ಕಾರವ ಮಾಡುವುದೇ ನಮಸ್ಕಾರ.
ಹಿಂದಿನ ಪುರಾತನರು ನಡೆದರೆಂಬೋ ಶಾಸ್ತ್ರವಂ ಕೇಳಿ,
ಈಗಿನ ಕಿರಾತರು 'ನಾವು ಶೀಲವಂತರು'
'ನಾವು ಆಚಾರವಂತರು', 'ನಾವು ನಿತ್ಯಪ್ರಸಾದಿಗಳು',
'ನಾವು 1[ 'ಪೂಜಸ್ಥರು']1, 'ನಾವು ಬ್ರಾಹ್ಮಣರು', ಎಂದು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ !