ಅಜ್ಞಾನವ ಸುಜ್ಞಾನದಿಂದ ತಿಳಿಯಬೇಕೆಂಬರು
ಅಜ್ಞಾನಕೂ ಸುಜ್ಞಾನಕೂ ಪದರದ ಚೀಲವೆ ?
ಕ್ರೀಯಿಂದ ನಿಃಕ್ರೀಯನರಿಯಬೇಕೆಂಬರು
ಕ್ರೀಗೂ ನಿಃಕ್ರೀಗೂ ಅಡಿಕಿನ ಮಡಕೆಯೆ ?
ಸರ್ವಸಂಗವ ಪರಿತ್ಯಾಗವ ಮಾಡಿ, ಲಿಂಗವ ಒಡಗೂಡಬೇಕೆಂಬರು
ಆ ಲಿಂಗವೇನು ವಿಧಾಂತರ ಲಾಗಿನ ಮೆಚ್ಚೆ ?
ಮೂರ ಬಿಟ್ಟು, ಒಂದ ಮುಟ್ಟಿದಲ್ಲಿ ಅಜ್ಞಾನವಡಗಿತ್ತು.
ಆರ ಬಿಟ್ಟು, ಮೂರ ಹಿಡಿದಲ್ಲಿ
ಕ್ರೀ ನಷ್ಟವಾಗಿ ನಿಃಕ್ರೀ ನೆಲೆಗೊಂಡಿತ್ತು.
ಸರ್ವಾತ್ಮನ ಗುಣದ ವಿವರವ ತಿಳಿದು
ಆತ್ಮನ ಗುಣವ ತನ್ನದೆಂದರಿದಲ್ಲಿ
ಸರ್ವೇಂದ್ರಿಯ ನಷ್ಟ, ನಿಶ್ಚೈಸಿದಲ್ಲಿ ಸರ್ವವಿರಕ್ತನು.
ಇಂತೀ ಗುಣ ವಿವರವ ಮರೆದು
ಊರ ಗುದ್ದಲಿಯಲ್ಲಿ ನಾಡ ಕಾಲುವೆಯ ತೆಗೆಯುವವನಂತೆ
ಬಹುಬಳಕೆಯ ಬಳಸದೆ
ಅರಿವು ತಲೆದೋರಿದಲ್ಲಿ, ಉಳಿಯಿತ್ತು ಪಾಶ ಕೆಲದಲ್ಲಿ
ವೀರಶೂರ ರಾಮೇಶ್ವರಲಿಂಗವನರಿಯಲಾಗಿ.